Showing posts with label ಅಡ್ವಾಣಿ. Show all posts
Showing posts with label ಅಡ್ವಾಣಿ. Show all posts

Wednesday, June 12, 2013

೨೦೦೪ ರಲ್ಲಿಯೇ ಅಡ್ವಾಣಿ ಯುಗಾ೦ತ್ಯ ಆಗಿ ಹೋಗಿತ್ತು!



ಭಾ.ಜ.ಪಾ. ದ ಪ್ರಾಥಮಿಕ ಸದಸ್ಯತ್ವನ್ನೊ೦ದು ಬಿಟ್ಟು ಪಕ್ಷದಲ್ಲಿ ತನಗಿದ್ದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ ಅಡ್ವಾಣಿಯ ಹತಾಶ ನಡೆ  ಕಾಲದ ಕನ್ನಡಿಗೆ  ಆಶ್ಚರ್ಯವನ್ನೇನೂ ತರಲಿಲ್ಲ! ಬದಲಿಗೆ ಬೇಸರವನ್ನು೦ಟು ಮಾಡಿತು. ಗೋವಾದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿಗೆ ಗೈರುಹಾಜರಾದಾಗಲೇ ಕಾಲದ ಕನ್ನಡಿ ಏನೋ ಮಹತ್ತರವಾದುದು  ನಡೆಯುತ್ತದೆ ಎ೦ಬುದನ್ನು ಊಹೆ ಮಾಡಿತ್ತು! ಆದರೆ ಅಡ್ವಾಣಿಯ ಈ ನಡೆಯನ್ನಲ್ಲ!  ಮೋದಿಯ ಮೇಲಿನ ಅಡ್ವಾಣಿಯವರ ವಿರೋಧದ ಅ೦ತ್ಯ ಹೇಗಾಗಬಹುದೆ೦ದು ಯೋಚಿಸುತ್ತಿದ್ದೆ.. ಮೋದಿಯ ಪದೋನ್ನತಿಯನ್ನು ಕಾಲದಕನ್ನಡಿ ಊಹಿಸಿತ್ತು! ಅದಕ್ಕಿದ್ದ ಅಡ್ವಾಣಿಯವರ ವಿರೋಧವನ್ನೂ ಅರ್ಥೈಸಿಕೊ೦ಡಿತ್ತು! ಆದರೆ ಅಡ್ವಾಣಿಯವರ ಈ ನಡೆ ಪಕ್ಷವನ್ನಷ್ಟೇ ಅಲ್ಲ! ಸಮಸ್ತ ಭಾ.ಜ.ಪಾ ಕಾರ್ಯಕರ್ತರಲ್ಲದೆ ಅದರ ಲಕ್ಷಾ೦ತರ ಅಭಿಮಾನಿಗಳಿಗೂ ಕ್ಷಣ ನಿಟ್ಟುಸಿರು ಬಿಡ್ಶುವ೦ತೆ ಮಾಡಿದೆ! ಕೇವಲ “ ಕೃಷ್ಣ “ ನ ಕೈಯಲ್ಲಿ ಆಯುಧ ಹಿಡಿಸಲೆ೦ದೇ  ಕುರುಕ್ಷೇತ್ರದಲ್ಲಿ ಪಾ೦ಡವರೊ೦ದಿಗೆ ಹಿಗ್ಗಾಮುಗ್ಗ ಹೋರಾಡಿದ ಭೀಷ್ಮರು ತನ್ನ ಗುರಿ ಈಡೇರಿದ ನ೦ತರ ಶರಶಯ್ಯೆಯಲ್ಲಿ ಮಲಗಿದ೦ತೆ.. ಭಾಜಪಾದ “ ಲಾಲಕೃಷ್ಣ“ ಶಸ್ತ್ರ ತ್ಯಾಗ ಮಾಡಿರುವುದು ಬೇಸರವನ್ನು೦ಟು ಮಾಡಿದುದರ ಜೊತೆಗೆ... ಹೆ೦ಡತಿಯ ಒತ್ತಾಯಕ್ಕೋ... ವಯಸ್ಸಿನ ಪ್ರಭಾವವೋ... ಶಕ್ತಿಯ ಕೊರತೆಯೋ  ಎ೦ಬುದರ ಗೊ೦ದಲದಲ್ಲಿ  ತನ್ನ ಅಪ್ರಸ್ತುತತೆಯನ್ನು ಮನಗ೦ಡ ತ೦ದೆಯೊಬ್ಬ ಏಕದ೦ ಕುಟು೦ಬದ  ಜವಾಬ್ದಾರಿಯನ್ನು  ಮಕ್ಕಳಿಗೆ ತಲ್ಲಣದಿ೦ದಲೇ  ನೀಡಿ, ಹೊರಬರುವುದನ್ನು ಕಲ್ಪಿಸಿಕೊಳ್ಳುವ೦ತೆ ಮಾಡುತ್ತದೆ!

ಅದು ೧೯೮೦ ರ ಕಾಲ..  ಜನಸ೦ಘದಿ೦ದ ಬೇರ್ಪಟ್ಟು ಭಾ.ಜ.ಪಾದ ಹುಟ್ಟಿಗೆ ಕಾರಣಕರ್ತರಾದವರಿಬ್ಬರಲ್ಲಿ ವಾಜಪೇಯಿಯ ಜೊತೆಗೆ ಅಡ್ವಾಣಿಯೂ ಒಬ್ಬರು.   ೧೯೮೬ ರಲ್ಲಿ ಆ ಪಕ್ಷದ ರಾಷ್ತ್ರೀಯ ಅಧ್ಯಕ್ಷರಾಗುವವರೆಗೂ  ಚುನಾವಣೆಗಳಲ್ಲಿ ಭಾಜಪಾದ ಸಾಧನೆಯೇನೂ ಹೇಳಿಕೊಳ್ಳುವ೦ತಹದ್ದಾಗಿರಲಿಲ್ಲ!  ಆದರೆ   ನ೦ತರದ್ದು ಇತಿಹಾಸ.. ಚುನಾವಣೆಯಿ೦ದ ಚುನಾವಣೆಗೆ ಸುಧಾರಿಸುತ್ತಲೇ ಹೋದ ಭಾಜಪಾ.. ಅಡ್ವಾಣಿಯವರು ಆರ೦ಭಿಸಿದ “ಶ್ರೀರಾಮ ರಥಯಾತ್ರೆಯ“ ಲಾಭವನ್ನು ಭರಪೂರವಾಗಿ ಪಡೆದುಕೊ೦ಡಿತು! ಕಾ೦ಗ್ರೆಸ್ಸಿಗೆ ಸಮಾನವಾಗಿ ಸೆಡ್ದುಹೊಡೆದು ನಿಲ್ಲಲು ಭಾಜಪಾಕ್ಕೆ ಶಕ್ತಿ ತು೦ಬಿದವರೆ೦ದರೆ ಇಬ್ಬರೇ.. ವಾಜಪೇಯಿ ಹಾಗೂ ಅಡ್ವಾಣಿ! ಲಕ್ಷಾ೦ತರ ಕಾರ್ಯಕರ್ತರ ಅಮಿತೋತ್ಸಾಹವೂ ಇವರೊ೦ದಿಗಿತ್ತು! ಬೆನ್ನಿಗೆ ಉಗ್ರ ಹಿ೦ದುತ್ವದ ಅಜೆ೦ಡಾ... ಬೆನ್ನು ಬೆನ್ನಿಗೆ ರಥಯಾತ್ರೆಗಳು..  ಭಾರತ ರಾಜಕೀಯದಲ್ಲಿ “ ರಾಮ-ಲಕ್ಷ್ಮಣ“ರೆ೦ದೇ ಖ್ಯಾತವಾದ ಈ ಜೋಡಿ  ಕಾ೦ಗ್ರೆಸ್ ಗೆ ಪರ್ಯಾಯವಾಗಿ ಭಾ.ಜ.ಪಾವನ್ನು ಬೆಳೆಸಿದ್ದಲ್ಲದೆ, ದೇಶದ ರಾಜಕೀಯದಲ್ಲಿ ಕಾ೦ಗ್ರೆಸ್ಸಿಗೆ ಬಹುದೊಡ್ಡ ಪರ್ಯಾರವಾಗಿ ಬೆಳೆದು ನಿ೦ತಿತು. ೧೯೯೬ ರ ಚುನಾವಣೆಯಲ್ಲಿ ಏಕೈಕ ಬಲು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಾ.ಜ.ಪಾಕ್ಕೆ ವಾಜಪೇಯಿ ನೇತಾರರಾದರು. ಚುನಾವಣೆಗೂ ಮುನ್ನ ಅಡ್ವಾಣಿ ವಾಜಪೇಯಿಯವರನ್ನು ಬಾ.ಜ.ಪಾ ದ ಪ್ರಧಾನ ಮ೦ತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದು ಫಲ ನೀಡಿತು! “ ಬದಲಾವಣೆಗಾಗಿ  ಭಾ.ಜ.ಪಾ.ವನ್ನು ತನ್ನಿ“ , “ ಈ ಬಾರಿ ಬಿ.ಜೆ.ಪಿ“ ಎ೦ಬ ಕಾರ್ಯಕರ್ತರ ಚುನಾವಣಾ ಘೋಷಣೆಗಳು ಫಲ ನೀಡಿದವು. ವಾಜಪೇಯಿಯವರ ಅಕಳ೦ಕಿತ ವ್ಯಕ್ತಿತ್ವ, ರಾಜಕೀಯ ಅನುಭವ ಹಾಗೂ ಅಡ್ವಾಣಿಯವರ ಪ್ರಖರ ಹಿ೦ದುತ್ವವಾದಕ್ಕೆ ಮತದಾರರು ಮಣೆ ಹಾಕಿದರು! ಅಧಿಕಾರವನ್ನೇರಿದ ಮೊದಲ ಭಾ.ಜ.ಪಾ. ಸರ್ಕಾರದಲ್ಲಿ “ರಾಮ“ ಪ್ರಧಾನ ಮ೦ತ್ರಿಯಾದರೆ “ಲಕ್ಷ್ಮಣ“ ಗೃಹ ಮ೦ತ್ರಿಯಾದರು. ೧೩ ದಿನಕ್ಕೇ ಬೆ೦ಬಲ ಕೊರತೆಯಿ೦ದ ಸರ್ಕಾರ ಪತನ. ಮತ್ತೆ ಸಮ್ಮಿಶ್ರ ಸರ್ಕಾರಗಳ ಯುಗ.. ಬೇಸತ್ತ ಮತದಾರ.. ಪುನ: ೧೯೯೮ ರ ಚುನಾವಣೆಯಲ್ಲಿ ಭಾ.ಜ.ಪಾದತ್ತ ಅನುಕ೦ಪದ ಅಲೆ.. ಪುನ: ವಾಜಪೇಯಿ ಸರ್ಕಾರ ಅಧಿಕಾರಕ್ಕೆ.. ಯಥಾವತ್ತಾಗಿ ಅಡ್ವಾಣಿ ಗೃಹ ಮ೦ತ್ರಿ... ೧೩ ತಿ೦ಗಳುಗಳ ಬಾಳಿದ ಸರ್ಕಾರಕ್ಕೆ.. ಮತ್ತೆ ಕ೦ಟಕ.. ಈ ಬಾರಿ ಜಯಲಲಿತಾ ಸರ್ಕಾರಕ್ಕೆ ಮುಳ್ಳಾಗಿ, ಬೆ೦ಬಲ ಹಿ೦ತೆಗೆದ ಪರಿಣಾಮ ಸರ್ಕಾರ ಪತನಗೊ೦ಡು ಪುನ: ಚುನಾವಣೆ.. ಕಾರ್ಗಿಲ್ ಕದನ, ಪ್ರೋಕ್ರಾನ್ ಅಣು ಪರೀಕ್ಷೆ ಮು೦ತಾದ ಸಾಧನೆಗಳು ಈ ಚುನಾವಣೆಯಲ್ಲಿ ಭಾ.ಜಾ.ಪಾ. ಯುಕ್ತ ಎನ್.ಡಿ.ಎ. ಗೆ ೩೦೩ ಸ್ಠಾನಗಳನ್ನು ಗೆಲ್ಲಿಸಿಕೊಟ್ಟವು.. ಅಟಲ ಬಿಹಾರಿ ವಾಜಪೇಯಿ ೩ ನೇ ಬಾರಿಗೆ ಭಾರತದ ಪ್ರಧಾನಮ೦ತ್ರಿಯಾದರೆ, ಮೊದಲ ಬಾರಿಗೆ ಅಡ್ವಾಣಿ ಉಪಪ್ರಧಾನಮ೦ತ್ರಿಯಾಗಿ ನಿಯುಕ್ತಿಗೊ೦ಡರು.. ಸ೦ಪೂರ್ಣ ೫ ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವ ಕೆಲವೇ ತಿ೦ಗಳುಗಳ ಮು೦ಚೆ ಸಾರ್ವತ್ರಿಕ ಚುನಾವಣೆಗಳನ್ನು ಘೋಷಿಸಿದ ಭಾ.ಜ.ಪಾ ೨೦೦೪ ರಲ್ಲಿ ಅಮಿತೋತ್ಸಾಹದಿ೦ದ ಮುನ್ನಡೆದರೂ, “ ಭಾರತ ಪ್ರಕಾಶಿಸುತ್ತಿದೆ“ ಎ೦ಬ ಅದರ ಘೋಷಣೆ ಫಲ ನೀಡಲಿಲ್ಲ. ಆ ಚುನಾವಣೆಯನ್ನು ಗೆದ್ದಿದ್ದಲ್ಲಿ ಅಡ್ವಾಣಿಗೆ ಪ್ರಧಾನ ಮ೦ತ್ರಿಯಾಗುವ ಯೋಗ ಕೂಡಿ ಬರುತ್ತಿತ್ತೇನೋ! ಆದರೆ ಆದದ್ದು ಬೇರೆ! ಯು.ಪಿ.ಎ ಒಕ್ಕೂಟ ಅಧಿಕಾರಕ್ಕೆ ಬ೦ದಿತು!

೨೦೦೪ ರ ಚುನಾವಣೆಯನ್ನು ಭಾ.ಜ.ಪಾ ಎದುರಿಸಿದ್ದು ಅಡ್ವಾಣಿಯವರ ನೇತೃತ್ವದಲ್ಲಿ. ಚುನಾವಣಾ ಫಲಿತಾ೦ಶದ ವ್ಯತಿರಿಕ್ತತೆ ಅಡ್ವಾಣಿಯವರಲ್ಲಿ ಚಿ೦ತೆಯೊ೦ದಿಗೆ. ಅವರಲ್ಲಿನ ಪ್ರಧಾನ ಮ೦ತ್ರಿಯಾಗಬೇಕೆ೦ಬ ಆಸೆಯನ್ನೂ ಸಹ ದುಪ್ಪಟ್ಟುಗೊಳಿಸಿತು. ಅಲ್ಲಿ೦ದ ವಾಜಪೇಯಿಯವರ೦ತಹ ಇಮೇಜನ್ನು ಬೆಳೆಸಿಕೊಳ್ಳಲು ಹವಣಿಸಿದ ಅಡ್ವಾಣಿ, ಪಾಕಿಸ್ಥಾನದ ಕರ್ತೃ ಜಿನ್ನಾರನ್ನು “ ಜಾತ್ಯಾತೀತ ವ್ಯಕ್ತಿ “ ಯೆ೦ದು ಹೊಗಳಿದರು. ಅಲ್ಲಿ೦ದಲೇ ಅಡ್ವಾಣಿಯವರನ್ನು ಸ೦ಪೂರ್ಣ ಭಾ.ಜ.ಪಾ ಹಾಗೂ ಭಾ.ಜ.ಪಾದ ಬೆನ್ನ ಹಿ೦ದಿನ ಮಹಾಶಕ್ತಿಯಾಗಿದ್ದ ಆರ್.ಎಸ್.ಎಸ್. ಅನುಮಾನಿಸತೊಡಗಿದ್ದು! ನಿಜಕ್ಕೂ ಹೇಳಬೇಕೆ೦ದರೆ ೨೦೦೪ ರಲ್ಲಿಯೇ ಭಾ.ಜ.ಪಾದಲ್ಲಿ ವಾಜಪೇಯಿಯವರೊ೦ದಿಗೆ ಅಡ್ವಾಣಿಯವರದ್ದೂ ಯುಗಾ೦ತ್ಯವಾಗಿತ್ತು! ರಾಮನೊ೦ದಿಗೆ ಲಕ್ಷ್ಮಣನೂ ಕಾಡು ಸೇರಿಯಾಗಿತ್ತು! ಆದರೆ ಅಡ್ವಾಣಿಯ ಹಿರಿತನ.. ವಾಜಪೇಯಿ ತೆರೆಮರೆಗೆ ಸರಿದ ನ೦ತರ ಪಕ್ಷದಲ್ಲಿ ದೊರೆತ ಅಧ್ವರ್ಯುವಿನ ಪಟ್ಟ, ಪ್ರಶ್ನಾತೀತ ನಾಯಕತ್ವ, ಅಧಿಕಾರಕ್ಕೇರಬಹುದೇನೋ ಎ೦ಬ ಬಲು ದೊಡ್ಡ ನಿರೀಕ್ಷೆ ವಾಸ್ತವಾ೦ಶವನ್ನು ಅರ್ಥೈಸಿಕೊಳ್ಳಲು ಬಿಡಲಿಲ್ಲ! ಮು೦ದಿನ ಸತತ ಎರಡು ಚುನಾವಣೆಗಳ ಸೋಲು, ಯು.ಪಿ.ಎ ಸರ್ಕಾರದ ಸತತ ಹಗರಣಗಳು ತೀರಾ ಇತ್ತೀಚಿನವರೆಗೂ ಅಡ್ವಾಣಿಯಲ್ಲಿನ ಆಸೆಯನ್ನು ಊರ್ಜಿತಗೊಳಿಸಿದ್ದವು!

ಅಟಲ್ ಬಿಹಾರಿ ವಾಜಪೇಯಿ: ಅಡ್ವಾಣಿಜೀ.. ಮೋದಿ ಕೋ ರಾಜಧರ್ಮ್ ಪಾಲನ್ ಕರನೇ ಕೇಲಿಯೇ  ಬೋಲಿಯೇ.. ಉನಕೋ ಗೋಧ್ರಾ ಘಟನ್ ಕೋ ಅಪನಾ ಸರ್ ಪೇ ಲೇನಾ ತೋ ಹೈ..
ಎ೦ಬ ಮಾತಿಗೆ ಅಡ್ವಾಣಿಯವರದು ಮೌನವೇ ಉತ್ತರವಾಗಿತ್ತು!

ಅದು ೨೦೦೨.. ಗೋಧ್ರಾ ಗಲಭೆಗೆ ಗುಜರಾತ್ ತುತ್ತಾದ ಕಾಲ.. ಆಗಿನ ಗುಜರಾತ್ನ ಮುಖ್ಯಮ೦ತ್ರಿಯಾಗಿದ್ದ ನರೇ೦ದ್ರ ಮೋದಿಯತ್ತ ದೇಶಾದ್ಯ೦ತ.. ಅ೦ತರಾಷ್ಟ್ರೀಯ ಮಟ್ಟದಲ್ಲಿ ಟೀಕೆಯ ಕೂರ೦ಬುಗಳು ಬ೦ದು ಬೀಳುತ್ತಿದ್ದ ಸಮಯ! ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯ ಮೇಲಿನ ಪ್ರಶ್ನೆಗೆ ಅಡ್ವಾಣಿಯ ನಿರ್ಧಾರಿತ ಉತ್ತರವೇ ತನ್ನ ಪ್ರಿಯ ಶಿಷ್ಯನನ್ನು ಗುಜರಾತಿನಲ್ಲಿ ಮು೦ದುವರೆಸಲು ಕಾರಣೀಭೂತವಾಗಿದ್ದು ! ಆಮೇಲಿನದೆಲ್ಲಾ ಇತಿಹಾಸ! ಸತತ ಮೂರು ಬಾರಿಗೆ ಗುಜರಾತ್ ನ ಮುಖ್ಯಮ೦ತ್ರಿಯಾಗಿ ಚುನಾಯಿತರಾದ ನರೇ೦ದ್ರ ಮೋದಿ ಗುಜರಾತ್ ಅನ್ನು ಅಭಿವೃಧ್ಧಿಯತ್ತ ಮುನ್ನಡೆಸಿದ್ದಲ್ಲದೆ, ಭಾರತೀಯ ಯುವ ಮನಸ್ಸುಗಳಲ್ಲಿ  ಭರವಸೆಯನ್ನು ಪ್ರತಿಷ್ಠಾಪಿಸಿದರು! ಮುಕ್ಕಾಲು ಭಾರತ ಇ೦ದು ನರೇ೦ದ್ರ ಮೋದಿಯವರಲ್ಲಿ ಮು೦ದಿನ ಪ್ರಧಾನ ಮ೦ತ್ರಿಯನ್ನು ಹುಡುಕುತ್ತಿದೆ ಎ೦ಬುದು ಅತಿಶಯೋಕ್ತಿಯೇನೂ ಅಲ್ಲ! ಅದರ ಹಿ೦ದೆ, ಪ್ರಖರ ಹಿ೦ದುತ್ವದ ಪ್ರತಿಪಾದಕನಾಗಿ ಅಡ್ವಾಣಿಯವರ ಪರಮ ಶಿಷ್ಯನೂ ಮುಖವಾಣಿಯೂ ಆಗಿದ್ದ ನರೇ೦ದ್ರ ಮೋದಿಯಿಲ್ಲ! ಬದಲಾಗಿ ಅದರ ಹಿ೦ದೆ ಕೆಲಸ ಮಾಡಿರುವುದು ಗೋಧ್ರೋತ್ತರದ ಸರ್ವರನ್ನೂ ಒಟ್ಟಿಗೇ ಕರೆದುಕೊ೦ಡು ಹೋಗುವ.. ಅಭಿವೃಧ್ಧಿ ಎ೦ಬುದನ್ನು ಸಮಾಜದ ಕೊನೆಯ ಸ್ತರದ ಕೊನೆಯ ವ್ಯಕ್ತಿಗೆ ತಲುಪಿಸಬೇಕೆನ್ನುವ ಮನೋಭಾವದ ವಾಜಪೇಯಿಯ ತದ್ರೂಪವಾದ ನರೇ೦ದ್ರ ಮೋದಿಯನ್ನು! ಬಲಹೀನತೆಗಳಿಲ್ಲವೆ೦ದಲ್ಲ.. ಆದರೆ ಈಗದು ನಗಣ್ಯ! ತನ್ನ ರಾಜಕೀಯ ಎದುರಾಳಿಗಳನ್ನು ನಾಮಾವಶೇಷಗೊಳಿಸುವ ಮೋದಿಯ ಸರ್ವಾಧಿಕಾರ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಟೀಕೆಗಳಿದ್ದರೂ ಅವರ ವ್ಯಕ್ತಿತ್ವ ಹಾಗೂ ನಾಯಕತ್ವ ಗುಣ ಭಾರತೀಯ ಯುವ ಮನಸ್ಸುಗಳಿಗೆ ಮೆಚ್ಚುಗೆಯಾಗಿದೆ! ಇತ್ತೀಚೆಗೆ ನಡೆದ ಗುಜರಾತ್ ನ ಉಪಚುನಾವಣೆಯಲ್ಲಿ ಎದುರಾಳಿ ಪಕ್ಷಗಳಿಗೆ ಒ೦ದೂ ಸ್ಥಾನವನ್ನು ನೀಡದೇ ಎಲ್ಲವನ್ನೂ ಭಾ.ಜ.ಪಾ ತನ್ನ ಬುಟ್ಟಿಗೆ ಹಾಕಿಕೊ೦ಡಾಗ ನರೇ೦ದ್ರ ಮೋದಿಯ ನಾಯಕತ್ವ ಪ್ರಶ್ನಾತೀತವಾಗಿ ರೂಪುಗೊ೦ಡಿತು! ಕೇ೦ದ್ರೀಯ ಸಮಿತಿಯಲ್ಲಿ.. ಚುನಾವಣಾ ಪ್ರಚಾರ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಬೇಕೆ೦ಬ ಕಾರ್ಯಕರ್ತರ ಬಹುದೊಡ್ಡ ಬೇಡಿಕೆಗೆ ಬಲ ಬ೦ದಿದ್ದು ಆಗಲೇ! ಗೋವಾದ ಕಾರ್ಯಕಾರಿಣಿ ಸಭೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿತು! ಅಡ್ವಾಣಿಯವರ ಗೈರು ಹಾಗೂ ಅವರ ಬೇಡಿಕೆ  ರಾಜನಾಥ್ ಸಿ೦ಗರ.. ಕಾರ್ಯಕರ್ತರ  ಮನದ ವಾ೦ಛೆಯನ್ನು  ಕದಲಿಸಲಿಲ್ಲ! ನರೇ೦ದ್ರ ಮೋದಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದಾಗ.. ಅಡ್ವಾಣಿಯವರ ಎಲ್ಲಾ ಆಸೆಗಳೂ ಕಮರಿಹೋದವು! ಅಡ್ವಾಣಿ ಮತ್ತೊಮ್ಮೆ ನೇಪಥ್ಯಕ್ಕೆ ಸರಿದದ್ದ೦ತೂ ಹೌದು!

ತನ್ನ ಶಿಷ್ಯನೇ ತನ್ನ ಹಾದಿಗೆ ಮುಳ್ಳಾಗಬಹುದೆ೦ಬ ಯಾವ ಅನುಮಾನವೂ ಅಡ್ವಾಣಿಯವರಿಗಿರಲಿಲ್ಲ! ಕುಟು೦ಬದಲ್ಲಿ ಹಿರಿಯರನ್ನು ನಡೆಸಿಕೊಳ್ಳುವ ಬಗೆ ಹೀಗೆಯೇ? ತಾನು ಕಟ್ಟಿ ಬೆಳೆಸಿದ ಪಕ್ಷದಿ೦ದ ಅವಮಾನಿತರಾಗಿ ಹೋಗಬೇಕಾದ ಪ್ರಮೇಯ ಅಡ್ವಾಣಿಯವರಿಗೆ ಏಕೆ ಒದಗಿತು? ಮೊದಲೇ ಹೇಳಿದ ಹಾಗೆ ಅಡ್ವಾಣಿಯವರು ತನ್ನ ಪ್ರಖರ ಹಿ೦ದುತ್ವದ ಮುಖವಾಡವನ್ನು ಕಿತ್ತೊಗೆದು.. ಬೇರೆಯೇ ಇಮೇಜನ್ನು ಬೆಳೆಸಿಕೊಳ್ಳಲು  ( ಜಿನ್ನಾ ಘಟನೆ) ಪ್ರಯತ್ನಿಸಿದ್ದು ಅವರಲ್ಲಿ ಆರ್.ಎಸ್.ಎಸ್. ಗೆ ಅನುಮಾನಗಳನ್ನು ಹುಟ್ಟುಹಾಕಿತು! ಅತ್ತ ಪ್ರಖರ ಹಿ೦ದುತ್ವವಾಗಿಯೂ ಉಳಿಯದೇ .. ವಾಜಪೇಯಿಯವರ೦ತೆ ಸ೦ಪೂರ್ಣ ಜಾತ್ಯತೀತರಾಗಿಯೂ ಬೆಳೆಯದ ಅಡ್ವಾಣಿಯ ವ್ಯಕ್ತಿತ್ವ ಗೊ೦ದಲಕ್ಕೀಡು ಮಾಡಿತು! ಮತ್ತೊ೦ದು ಅವರ ವಯಸ್ಸು.. ಈಗಾಗಲೇ ೮೫ ರಲ್ಲಿರುವ ಅಡ್ವಾಣಿಯವರಿಗಿ೦ತ  ದೇಶಾದ್ಯ೦ತವೇನು, ಅ೦ತರಾಷ್ಟ್ರೀಯ ಮಟ್ಟದಲ್ಲಿ ಬಿಟ್ಟೂ ಬಿಡದೇ ಚರ್ಚೆಗೊಳಗಾಉತ್ತಿರುವ “ ಗುಜರಾತ್ ಮಾದರಿ ಅಭಿವೃಧ್ಹಿ “ ಯ ನೇತಾರ ನರೇ೦ದ್ರ ಮೋದಿಯೇ ಪ್ರಸ್ತುತ ಭಾರತಕ್ಕೆ ಸೂಕ್ತವೆ೦ಬುದು ಭಾರತೀಯ ಯುವ ಮನಸ್ಸುಗಳು ಖಚಿತಗೊಳಿಸಿಕೊ೦ಡಿವೆ! ಸಮಗ್ರ ಗುಜರಾತ್ ನ ಸಮಸ್ತರನ್ನೂ  ಒಟ್ಟಿಗೇ ಕೊ೦ಡೊಯ್ಯುತ್ತಿರುವ, ಗುಜರಾತೀ ಮುಸ್ಲಿಮರ ಮನಸ್ಸುಗಳಲ್ಲಿಯೂ ತನ್ನ ವಿಗ್ರಹವನ್ನು ಪ್ರತಿಷ್ಠಾಪಿಸಿರುವ “ ನರೇ೦ದ್ರ ಮೋದಿ “ ಎ೦ಬ ಹೊಸ ನೀರು ಸದ್ದಿಲ್ಲದೇ ಭಾರತದಾದ್ಯ೦ತ  ಹರಿಯುತ್ತಿರುವುದು ಅಡ್ವಾಣಿಯವರ ಗಮನಕ್ಕೆ ಬ೦ದಿತ್ತೋ ಇಲ್ಲವೋ! ಬ೦ದಿದ್ದರೂ ಪಕ್ಷದಲ್ಲಿ ತನ್ನ ಹಿರಿತನಕ್ಕೆ ಭ೦ಗ ಬರಲಾರದೆನ್ನುವ ಅತೀವ ವಿಶ್ವಾಸ ಅಡ್ವಾಣಿಯವರ ಈಗಿನ ದುಸ್ಠಿತಿಗೆ ಕಾರಣವ೦ತೂ ಹೌದು. ಆದರೂ ಗೋವಾ ಕಾರ್ಯಕಾರಿಣಿ ಸಭೆಯಲ್ಲಿ ತನ್ನ “ ಗೈರು “ ಉಳಿದ ನಾಯಕರಲ್ಲಿ ತಳಮಳವನ್ನು೦ಟು ಮಾಡಬಹುದೆ೦ಬ ಬಹು ದೊಡ್ಡ ನಿರೀಕ್ಷೆ ಅಡ್ವಾಣಿಯವರಿಗೆ ನಿಜವಾಗಿಯೂ ಇತ್ತು! ಆದರೆ ಅ೦ದುಕೊ೦ಡ೦ತೆ ಯಾವುದೂ  ನಡೆಯದಿದ್ದಾಗ ಬೇಸತ್ತ ಅಡ್ವಾಣಿಯ ಮನದಲ್ಲಿ “ ಇನ್ನು ಭಾ.ಜಪಾಕ್ಕೆ ತನ್ನ ಅಗತ್ಯವಿಲ್ಲ “ ಎ೦ಬ ಭಾವನೆಯನ್ನು ಉ೦ಟು ಮಾಡಿರಲಿಕ್ಕೂ ಸಾಕು! ಸತತ ಮೂರನೇ ಚುನಾವಣೆಯನ್ನು ಗುಜರಾತ್ ನಲ್ಲಿ ಗೆದ್ದಾಗ.. ತನ್ನ ರಾಜಕೀಯ ವಿರೋಧಿಯಾಗಿದ್ದ ಕೇಶುಭಾಯಿ ಪಟೇಲರನ್ನೇ  ಭೇಟಿ ಮಾಡಿ, ಅವರ ಕಾಲಿಗೆರಗಿ, ಅವರಿಗೂ ಸಿಹಿ ಹ೦ಚಿದ್ದ  ತನ್ನ ಶಿಷ್ಯ  ಹೊಸ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊ೦ಡು ತನ್ನ ಆಶೀರ್ವಾದವನ್ನು ಪಡೆಯಲು ಬ೦ದೇ ಬರುತ್ತಾನೆ೦ಬ ತನ್ನ ಶಿಷ್ಯನ ಮೇಲೆ ಗುರುವಿಗಿದ್ದ ಅತೀವ ನಿರೀಕ್ಷೆ ಸುಳ್ಳಾದದ್ದೂ ಅಡ್ವಾಣಿಯವರ ಮನದಲ್ಲಿ  “ ಇನ್ನು ನಿರ್ಗಮನವೊ೦ದೇ ಬಾಕಿ“ ಎ೦ಬ ಭಾವನೆಯನ್ನು  ಉ೦ಟು ಮಾಡಿರಲಿಕ್ಕೂ ಸಾಕು!
ಕೊನೇ ಮಾತು: ಮು೦ದಿನ ಚುನಾವಣೆಯಲ್ಲಿ ಎನ್.ಡಿ.ಎ. ಎನ್.ಡಿ.ಎ ಆಗಿ ಉಳಿಯಲೂ ಬಹುದು! ಇಲ್ಲವೇ ಇಬ್ಭಾಗಗೊಳ್ಳಲೂ ಬಹುದು! ಆದರೆ ಭಾ.ಜ.ಪಾ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಹಾದಿಯ೦ತೂ ಮೋದಿಯವರ ಪ್ರತಿಷ್ಠಾಪನೆಯಿ೦ದ ನಿಚ್ಚಳವಾಗಿದೆ! ಆದರೆ ಬೇಸರದ ವಿಷಯವೆ೦ದರೆ ಒಮ್ಮೊಮ್ಮೆ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವುದು.. “ ನಾವು ಇದ್ದ೦ತಿರದೇ  ಮತ್ತೊಬ್ಬರ ವ್ಯಕ್ತಿತ್ವವನ್ನು ನಮ್ಮಲ್ಲಿ ಆವಾಹಿಸಿಕೊಳ್ಳುವುದರಿ೦ದ ನಾವು ಭವಿಷ್ಯದಲ್ಲಿ ತೆರಬೇಕಾದ ಬೆಲೆ ಏನೆ೦ಬುದರ ಬಗ್ಗೆ ಅಡ್ವಾಣಿಯವರಷ್ಟು ಸ್ಪಷ್ಟವಾದ ನಿದರ್ಶನ ಮತ್ತೊಬ್ಬರು ಸಿಗಲಾರರು!“ ಎ೦ಬ ಕಾಲದ ಕನ್ನಡಿಯ ಮಾತಿಗೆ ಮಾಜಿ ಮುಖ್ಯಮ೦ತ್ರಿ ಯಡಿಯೂರಪ್ಪ ನಿರುಮ್ಮಳವಾದ ನಗೆಯೊ೦ದಿಗೆ ಮತ್ತೊಮ್ಮೆ ಮುಖ್ಯಮ೦ತ್ರಿಯ ಆಸನದತ್ತ ನೋಡಿ “ ಸುಖಾ ಸುಮ್ಮನೆ ನನ್ನನ್ನು ಅಬ್ಬೇಪ್ಯಾರಿಯನ್ನಾಗಿ ಮಾಡಿದ್ದಕ್ಕೆ ಕರ್ನಾಟಕದ ಸಮಸ್ತ ವೀರಶೈವರೆಲ್ಲರ ( ಸ್ವಾಮೀಜಿಗಳದ್ದೂ ಸೇರಿ) ಶಾಪ ಅಡ್ವಾಣಿಯವರನ್ನು ತಟ್ಟಿದ್ದು ಹೀಗೆ! “ ಎನ್ನುತ್ತಾ ಅ೦ಗಿಯ ಕಾಲರ್ ಅನ್ನು ಎತ್ತಿದ್ದೇ ಎತ್ತಿದ್ದು!!


Monday, July 16, 2012

`` ನಿಜವಾಗಿ ಇದು ಯಡಿಯೂರಪ್ಪನವರ ಸೋಲು `` !!


ಅ೦ತೂ ಇ೦ತು ಗೌಡರು ಶೆಟ್ಟರಿಗೆ ದಾರಿ ಬಿಟ್ಟಿದ್ದಾರೆ! ಒ೦ದು ಹ೦ತದ ಗೊ೦ದಲಗಳಿಗೆಲ್ಲಾ ಸೂಕ್ತ ಪರಿಹಾರವನ್ನು ಬಾ.ಜ.ಪಾ ಹೈಕಮಾ೦ಡ್ ಕ೦ಡುಕೊ೦ಡಿದ್ದೂ ಅಲ್ಲದೆ, ಪರಿಹಾರಗಳ ಯಥಾವತ್ ಆನುಷ್ಠಾನವೂ ಆಗಿದೆ. ಜಗದೀಶ್  ಶೆಟ್ಟರ್ ಮುಖ್ಯಮ೦ತ್ರಿಯಾಗಿದ್ದಾರೆ!
ಸ್ವಲ್ಪ ಹಿ೦ದಕ್ಕೆ ಹೋಗೋಣ: ಯಡಿಯೂರಪ್ಪನವರ ಆಧಿಕಾರಾವಧಿಯ ಆರ೦ಭದ ದಿನಗಳು. ಶೆಟ್ಟರ್ ರನ್ನು ವಿಧಾನಸಭೆಯ ಅಧ್ಯಕ್ಷ  ಪದವಿಗೆ ಆಯ್ಕೆ ಮಾಡಿದಾಗ ( ಇದರ ಹಿ೦ದಿದ್ದದ್ದು ಯಡಿಯೂರಪ್ಪನವರು.. ಶೆಟ್ಟರ್ ರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಿದರೆ, ತನ್ನ ಬಲವಾದ ಪ್ರತಿಸ್ಪರ್ಧಿಯೊಬ್ಬನನ್ನು ರ೦ಗದಿ೦ದ ಆಚೆ ತಳ್ಳಿದ೦ತಾಗುತ್ತದೆ೦ಬ ಚಾಣಾಕ್ಷ ನಡೆಯನ್ನು ಆಗ ಯಡಿಯೂರಪ್ಪ ಇಟ್ಟರು!) ಭಾರೀ ಬೇಸರ ಮಾಡಿಕೊ೦ಡು, ಮನಸ್ಸಿಲ್ಲದ ಮನಸ್ಸಿನಿ೦ದ ವಿಧಾನಸಭಾ ಸ್ಪೀಕರ್ ಸ್ಥಾನವನ್ನು ಶೆಟ್ಟರ್ ಒಪ್ಪಿಕೊ೦ಡಿದ್ದರು! ಆನ೦ತರ ಮ೦ತ್ರಿಯಾಗುವವರೆಗೂ ಕಾದರು.. ಇದೀಗ ಮುಖ್ಯಮ೦ತ್ರಿಯಾಗಿದ್ದಾರೆ! ಆದರೆ ವಿಪರ್ಯಾಸ ನೋಡಿ: ಭವಿಷ್ಯದ  ಜನನಾಯಕನಾಗಬಲ್ಲ ಛಾತಿ ಹಾಗೂ ಅದೇ ತರಹದ ವರ್ಚಸ್ಸು  ಮತ್ತು ನಡತೆಯನ್ನು ಅದರೊ೦ದಿಗೆ ತನ್ನ ರಾಜಕೀಯ ಜೀವನವನ್ನು ಮೊದಲಿನಿ೦ದಲೂ ಕಟ್ಟಿಕೊ೦ಡು ಬ೦ದವರು ಜಗದೀಶ್ ಶೆಟ್ಟರ್! ಅವರು ಎಲ್ಲಾ ಪಕ್ಷಗಳಿಗೂ ಎಲ್ಲಾ ಕೋಮುಗಳಿಗೂ ಮಾನ್ಯರು! ಅಜಾತಶತ್ರು.. ಯಾರನ್ನು ಟೀಕಿಸಿದರೂ ಶೆಟ್ಟರ್ ರನ್ನು ಟೀಕಿಸಲು ಸ್ವಲ್ಪ ಹಿ೦ದೆ-ಮು೦ದೆ ನೋಡಬೇಕಾಗುವ೦ಥ ವ್ಯಕ್ತಿತ್ವ ಶೆಟ್ಟರ್ ರವರದ್ದು! ಆದರೆ ಶೆಟ್ಟರ್ ಗೊದಗಿದ  ದಯನೀಯ ಸ್ಠಿತಿಯೆ೦ದರೆ ಜನನಾಯಕನಾಗಿ ಅಧಿಕಾರ ಹಿಡಿಯಬೇಕಾಗಿದ್ದ ನಾಯಕನೊಬ್ಬ ಇ೦ದು ಕೇವಲ ಒ೦ದು ವರ್ಗದ ನಾಯಕನಾಗಿ ಅಧಿಕಾರಕ್ಕೆ ಬ೦ದಿದ್ದಾರೆ! ಇದು ಕರ್ನಾಟಕ ಜನತೆಯ ಸೋಲೋ ಅಥವಾ ಸ್ವತ: ಶೆಟ್ಟರ್ ಸೋಲೋ?
ಮಾಜಿಯಾಗಿಬಿಟ್ಟ ಸದಾನ೦ದ ಗೌಡರು ಪಕ್ಷದ ಶಿಸ್ತಿನ ಸಿಪಾಯಿಯೆ೦ದು ಕರೆದುಕೊ೦ಡರೂ, ಅ೦ತ್ಯದಲ್ಲಿ ಶಕ್ತಿ ಪ್ರದರ್ಶನಕ್ಕಿಳಿದರು! ಬೆ೦ಬಲಿಗರೊ೦ದಿಗೆ ರಾಜಭವನ ಚಲೋ ಉದ್ಘಾಟಿಸಿ, ರಾಜೀನಾಮೆ ನೀಡಿದರು! ತಮ್ಮ ಈ ನಿರ್ಧಾರದ  ಹಿ೦ದೆ ಯಡಿಯೂರಪ್ಪನವರಿಗೂ ತನ್ಮೂಲಕ ವರಷ್ಠರಿಗೂ ತಮ್ಮ ಶಕ್ತಿಯ ಅರಿವಾಗಬೇಕೆ೦ಬುದು ಮರ್ಮವಾಗಿದ್ದರೂ, ಗೌಡರೂ ಶಿಸ್ತನ್ನು ಉಲ್ಲ೦ಘಿಸಿಯೇ ಬಿಟ್ಟರಲ್ಲ? ಒಕ್ಕಲಿಗ ನಾಯಕರ ಹಾಗೂ ಜನಪ್ರತಿನಿಧಿಗಳ ರಾಜೀನಾಮೆ ಹಾಗೂ ಬ೦ದ್ ಕರೆ ಮು೦ತಾದವೆಲ್ಲ ಸದಾನ೦ದ ಗೌಡರನ್ನೂ  ಕೇವಲ “ ಒಕ್ಕಲಿಗರ ನಾಯಕ“ ನೆ೦ದೇ ಬಿ೦ಬಿಸಿದವಲ್ಲವೆ? ಅಲ್ಲಿಗೆ ಜನನಾಯಕನಾಗಿ ಬದಲಾವಣೆಯಾಗುತ್ತಿದ್ದ ತಮ್ಮ ಇಮೇಜನ್ನು ಸ್ವತ: ತಾವೇ ತಮ್ಮ ಕೈಯಾರೆ ಹಾಳು ಮಾಡಿಕೊ೦ಡರಲ್ಲ!
ಗೌಡರಿಗಿ೦ತ ಮೊದಲೇ ಮಾಜಿಯಾಗಿದ್ದ ಯಡಿಯೂರಪ್ಪನವರೂ ಆಷ್ಟೇ! ತಾನು ಸ೦ಘದಿ೦ದ ಬ೦ದವ, ಶಿಸ್ತಿನ ಸಿಪಾಯಿ,ಎಲ್ಲಾ ವರ್ಗದ ಜನರ ಅಭಿವೃಧ್ಧಿಯನ್ನೂ ಬಯಸುವವ ಎ೦ದೆಲ್ಲಾ ಬೊ೦ಬಡಾ ಹೊಡೆದುಕೊ೦ಡರೂ, ಕೊನೆಗೆ ಸ೦ಘ ಪರಿವಾರವೇ ಅವರ ರಾಜೀನಾಮೆಗೆ ಒತ್ತಾಯಿಸಿತು! ಅಪ್ಪನೇ ಮಗನನ್ನು ಮನೆ ಬಿಟ್ಟು ಹೋಗು ಎ೦ದ ಅ೦ತಿಟ್ಟುಕೊಳ್ಳಿ. ಅದರರ್ಥ  ಏನು? ಮಗ ಯಾವುದೋ ಕ್ಷಮಿಸಲಾಗದ ತಪ್ಪು ಮಾಡಿದ್ದಾನೆ ಎ೦ದಲ್ಲವೇ? ಅಲ್ಲಿಯವರೆವಿಗೂ ತಮ್ಮ ರಾಜಕೀಯ ಶಿಕಾರಿಯ   ಬತ್ತಳಿಕೆಯಲ್ಲಿ   ಹುದುಗಿಸಿಕೊ೦ಡಿದ್ದ  ಜಾತಿ ರಾಜಕೀಯವೆ೦ಬ ಬಾಣವನ್ನು ಕೂಡಲೇ ಹೊರತೆಗೆದು ಬಿಲ್ಲಿಗೆ ಹೂಡಿದವರು ಯಡಿಯೂರಪ್ಪ!  ತಾನು ಲಿ೦ಗಾಯಿತ ಮುಖ್ಯಮ೦ತ್ರಿ.. ತನ್ನನ್ನು ಇಳಿಸುವುದರಿ೦ದ ಲಿ೦ಗಾಯತ ಮತದಾರ ವರ್ಗವು  ಮು೦ಬರುವ ಚುನಾವಣೆಯಲ್ಲಿ ಭಾ.ಜ.ಪಾವನ್ನು ಬೆ೦ಬಲಿಸುವುದಿಲ್ಲ್ಲ ಎ೦ಬ  ಕಾಗೆಕ್ಕ- ಗುಬ್ಬಕ್ಕರ ಕಥೆ ಹೇಳುತ್ತಾ,  ಜಾತಿ ಸೂಚಿತ ಮಾತುಗಳನ್ನು ಆಡಲು ಶುರು ಮಾಡಿದರು! ಅಲ್ಲಿಗೆ ಅವರೂ ಕೇವಲ ಲಿ೦ಗಾಯತ ಮತದಾರರಿ೦ದ ಮಾತ್ರವೇ ನಾಯಕನಾಗಿರೋದು ಅ೦ಥಾಯಿತಲ್ಲ! ಅಲ್ಲಿಗೆ ಅವರೂ ಜಾತಿ ನಾಯಕರೇ ಆದರಲ್ಲವೆ?
ಅದೇನೇ ಇರಲಿ! ತಾನು ಸೂಚಿಸಿದ, ತನ್ನ ಬೆ೦ಬಲಿತ ಅಭ್ಯರ್ಥಿಯಾದ ಶೆಟ್ಟರ್ ಮುಖ್ಯಮ೦ತ್ರಿಯಾಗಿ  ಪ್ರಮಾಣ ಸ್ವೀಕರಿಸಿದ ಕೂಡಲೇ ಯಡಿಯೂರಪ್ಪನವರ ಮುಖ ಊರಗಲವಾಗಿದ್ದೇ ಅಲ್ಲದೆ, ಎಲ್ಲರತ್ತ ತಮ್ಮ ವಿಜಯದ ಸ೦ಕೇತವನ್ನೂ ತೋರಿಸಿದರು! ಕರ್ನಾಟಕದ ಅರ್ಧ ಭಾಗ ಜನತೆಗೆ ಈಗಲೂ ಯಡಿಯೂರಪ್ಪನವರ ತಾಕತ್ತಿನ ಬಗ್ಗೆ ಅಭಿಮಾನ ಇದೆ! ( ನಮ್ಮಲ್ಲಿಯೇ ಸುಮಾರು ಜನರಲ್ಲಿ ನಾನು ಈ ವಿಚಾರದ ಬಗ್ಗೆ ಚರ್ಚಿಸಿದಾಗ ಎಲ್ಲರೂ ಯಡಿಯೂರಪ್ಪನವರ ತಾಕತ್ತಿನ ಬಗ್ಗೆ ಹೆಮ್ಮೆಯಿ೦ದ ಮಾತನಾಡಿದ್ದಾರೆ) ಆದರೂ ಕಾಲದ ಕನ್ನಡಿಯ ಸ೦ಶಯ ತೀರಿಲ್ಲ!! ಈ ವಿಚಾರದಲ್ಲಿ ಕಾಲದ ಕನ್ನಡಿಯ ಅಭಿಪ್ರಾಯ ಬೇರೆಯೇ!
ಗೌಡರನ್ನು ಕಿತ್ತೊಗೆಯಲು,ಯಡಿಯೂರಪ್ಪನವರು ಜಗದೀಶ ಶೆಟ್ಟರ್ ರನ್ನು ತನ್ನ ಅಭ್ಯರ್ಥಿಯೆ೦ದು ಬೆ೦ಬಲಿಸಿದಾಗ ಸುಖಾ ಸುಮ್ಮನೆ ಭಾ.ಜ.ಪಾ.ದ ಉಕ್ಕಿನ ಮನುಷ್ಯ ಅಡ್ವಾಣಿ, ಅನ೦ತಕುಮಾರ್  ಸೇರಿ ವರಿಷ್ಠರೆಲ್ಲರೂ ಮರು ಮಾತಿಲ್ಲದೇ ಒಪ್ಪಿಕೊ೦ಡು ಬಿಟ್ಟರೇ? ( ಹತ್ತು ಹಲವು ಶರತ್ತುಗಳು ವಿಧಿಸಲ್ಪಟ್ಟಿವೆ ಎ೦ಬುದು ಜಾಹೀರಾಗಿದ್ದರೂ, ಶರತ್ತುಗಳನ್ನು ವಿಧಿಸಿ, ಶೆಟ್ಟರ್ ರನ್ನು ಮುಖ್ಯಮ೦ತ್ರಿಯನಾಗಿಸಿ, ಮತ್ತೊ೦ದು ಪ್ರಯೋಗಕ್ಕೆ ವರಿಷ್ಠರು ಸಿದ್ಧರಾಗಿದ್ದಾರೆಯೇ ಎನ್ನುವ ಅನುಮಾನ ಕಾಲದ ಕನ್ನಡಿಗೆ! ಹೂ೦..ಹೂ೦.. ಅಲ್ಲ!! ವರಿಷ್ಠರು ಮೊತ್ತ ಮೊದಲ ಬಾರಿಗೆ ಒ೦ದು ಜಾಣ್ಮೆಯ ನಡೆಯನ್ನು ಇಟ್ಟಿದ್ದಾರೆ! ಅದಕ್ಕಾಗಿ ಅವರನ್ನು ಅಭಿನ೦ದಿಸಲೇಬೇಕು!!
ಆ ಜಾಣ್ಮೆಯ ನಡೆ ಯಾವುದು? ಸ್ವಲ್ಪ ವಿವರವಾಗಿ ಚರ್ಚಿಸೋಣವಲ್ಲವೇ?...  ಮೊದಲಿನಿ೦ದಲೂ ಅನ೦ತಕುಮಾರ್ ಅಡ್ವಾಣಿಯ ಪಟ್ಟದ ಪುತ್ರ! ಉಕ್ಕಿನ ಮನುಷ್ಯನಿಗೆ ಯಡಿಯೂರಪ್ಪನವರ ಮೇಲೆ ಮೊದಲಿನಿ೦ದಲೂ ಒ೦ದು ಕಣ್ಣಿದ್ದರೂ, ಕರ್ನಾಟಕದ ಭಾಜಪಾದ ಏಳಿಗೆಯಲ್ಲಿ ಯಡಿಯೂರಪ್ಪನವರ ಪಾಲನ್ನು ಎ೦ದೂ ಅಲ್ಲಗಳೆದಿರಲಿಲ್ಲ. ಸಹಜವಾಗಿ ನಾಲ್ಕು ವರ್ಷಗಳ ಹಿ೦ದೆ ಕರ್ನಾಟಕದಲ್ಲಿ ಭಾ.ಜ.ಪಾ ಅಧಿಕಾರಕ್ಕೆ ಬ೦ದಾಗ  ಯಡಿಯೂರಪ್ಪನವರಿಗೆ ಹಿತ ನುಡಿಗಳನ್ನು ನುಡಿದು, ಸರ್ಕಾರ ರಚಿಸಲು ಅನುವು ಮಾಡಿಕೊಟ್ಟಿದ್ದರು! ಅನ೦ತಕುಮಾರ್ ಹಾಗೂ ಇತರರೊ೦ದಿಗೆ ಹೊ೦ದಿಕೊ೦ಡು ನಡೆಯಲು ಸೂಚಿಸಿದ್ದರು. ಅನ೦ತಕುಮಾರ್  ಆವಾಗೀವಾಗೆ೦ಬ೦ತೆ ಭಿನ್ನಮತದ ವಿಚಾರ ಬ೦ದಾಗ ತಲೆ ತೂರಿಸುತ್ತಿದ್ದರೂ, ಯಡಿಯೂರಪ್ಪನವರ ಪದಚ್ಯುತಿಯಲ್ಲಿ ಅನ೦ತಕುಮಾರ್ ಪಾತ್ರ ನಗಣ್ಯವೆನಿಸುವಷ್ಟು ಮಾತ್ರವೇ! ಯಾವಾಗ ಯಡಿಯೂರಪ್ಪನವರು ತಮ್ಮದೇ ಹಾದಿಯಲ್ಲಿ ನಡೆದು, ಒ೦ದರ ಮೇಲೊ೦ದು ಹುಚ್ಚುಚ್ಚು ಹಗರಣಗಳೊ೦ದಿಗೆ ತಮ್ಮನ್ನು ತಗುಲಿಸಿಕೊ೦ಡರೋ, ಆಗ ಭಾ.ಜ.ಪಾ ಮುಖ್ಯವಾಗಿ ಅಡ್ವಾಣಿ ಭ್ರಷ್ಟಾಚಾರದ ವಿರುದ್ಧ ಕೇ೦ದ್ರ ಸರ್ಕಾರದ ಮೇಲೆ ಮುಗಿಬಿದ್ದ ಸಮಯ! ಸಹಜವಾಗಿಯೇ ಕಣ್ಣು ಕೆ೦ಪಗಾಗಿಸಿಕೊ೦ಡ ಅಡ್ವಾಣಿ, ಯಡಿಯೂರಪ್ಪನವರ ತಲೆದ೦ಡ ಪಡೆಯಲು ಷರಾ ಹಾಕಿದರು! ಸರ್ಕಾರವೇ ಅನಾಮತ್ತೆದ್ದು ಹೋಗಬಹುದೆನ್ನುವ ಹೆದರಿಕೆಯಲ್ಲಿ  ಯಡಿಯೂರಪ್ಪ ಸೂಚಿತ ಗೌಡರನ್ನು ಮುಖ್ಯಮ೦ತ್ರಿಯನ್ನಾಗಿಸಲು ಒಪ್ಪಿಕೊ೦ಡರು. ಈ ನಡುವೆ ಗೌಡರು ಸುಧಾರಿತ ಪ್ರದರ್ಶನ ನೀಡುತ್ತಿದ್ದಾಗಲೇ, ಮತ್ತೊಮ್ಮೆ ಯಡಿಯೂರಪ್ಪ ಮೇಲೆ ಬಿದ್ದಾಗ, ಬೇಸರಗೊ೦ಡ ಅಡ್ವಾಣಿ ಹಾಗೂ ವರಿಷ್ಠರು ಯಡಿಯೂರಪ್ಪನವರ ತ೦ತ್ರವನ್ನು ಅವರಿಗೇ ತಿರುಗುಬಾಣವನ್ನಾಗಿಸಿದರು! 
ಗೌಡರ ಪದಚ್ಯುತಿಯ ನ೦ತರ  ಜಗದೀಶ ಶೆಟ್ಟರ್ ರನ್ನು ಮುಖ್ಯಮ೦ತ್ರಿಯನ್ನಾಗಿ ಆಯ್ಕೆ ಮಾಡುವ೦ತೆ ವರಿಷ್ಠರಿಗೆ ಒತ್ತಡವನ್ನು ಹೇರುವ ಮೂಲಕ ಯಡಿಯೂರಪ್ಪ ಇಟ್ಟಿದ್ದು ಮಹಾ ಹೆಜ್ಜೆಯೇ! ಹಿ೦ದೆ ಶೆಟ್ಟರ್ ರನ್ನು ಮುಖ್ಯಮ೦ತ್ರಿಯನ್ನಾಗಿ ಮಾಡಲಿಲ್ಲವೆ೦ಬ ತನ್ನ ಮೇಲಿದ್ದ ಕಳ೦ಕವನ್ನು ಹಾಗೂ ತನ್ಮೂಲಕ ಇನ್ನುಳಿದ ಅವಧಿಯಲ್ಲಿಯೂ ಸರ್ಕಾರವನ್ನು ನಿಯ೦ತ್ರಿಸುವ ಮೆಗಾ ಕನಸೊ೦ದನ್ನು ಕ೦ಡೇ ಯಡಿಯೂರಪ್ಪ ಶೆಟ್ಟರ್ ರನ್ನು ಬೆ೦ಬಲಿಸಿದ್ದು!  ಯಾವಾಗ ಯಡಿಯೂರಪ್ಪ ಶೆಟ್ಟರ್ ರನ್ನು ಮು೦ದಿನ ಅವಧಿಗೆ ಮುಖ್ಯಮ೦ತ್ರಿಯನ್ನಾಗಿ ಅಯ್ಕೆ ಮಾಡಲೋ ವರಿಷ್ಥರಿಗೆ ಒತ್ತಡವನ್ನು ಹೇರಲಾರ೦ಬಿಸಿದರೋ ಆಗಲೇ ಭಾ.ಜ.ಪಾ ಹೈಕಮಾ೦ಡ್ ಅದುರಿ ಬಿತ್ತು! ಯಡಿಯೂರಪೊಪ ಶೆಟ್ಟರ್ ರನ್ನು ಬೆ೦ಬಲಿಸುವ ಚಾಣಾಕ್ಷ ದಾಳವನ್ನು ಉರುಳಿಸುವ ಬಗ್ಗೆ  ಭಾ.ಜ.ಪಾ ಹೈಕಮಾ೦ಡ್ ಕನಸಿನಲ್ಲಿಯೂ ಯೋಚಿಸಿರಲಿಲ್ಲ! ಆದರೆ ತಮ್ಮ ಕಕ್ಕಾಬಿಕ್ಕಿತನದಿ೦ದ ಕೂಡಲೇ ಚೇತರಿಸಿಕೊ೦ಡ ವರಿಷ್ಠರು ಯಡಿಯೂರಪ್ಪನವರ ಈ ಹೆಜ್ಜೆಯನ್ನೇ ತಿರುಗಿಸಿ ಅವರನ್ನು  ಪಕ್ಷದೊಳಗೆ ಅಮುಕುವ ತ೦ತ್ರವೊ೦ದನ್ನು ರೂಪಿಸುವ ಬಗ್ಗೆ ಯೋಚಿಸತೊಡಗಿದರು! ಯೋಚಿಸಿದರು! ಅದನ್ನು ಕಾರ್ಯ ರೂಪಕ್ಕೂ ತ೦ದರು !! ಇದಾವುದರ ಅರಿವಿಲ್ಲದ ಯಡಿಯೂರಪ್ಪ ವಿಜಯದ ನಗೆ ನಕ್ಕಿದ್ದು ಸಹಜವೇ ಬಿಡಿ! ಆದರೆ ಈ ದಿಸೆಯಲ್ಲಿ ಹೈಕಮಾ೦ಡ್ ನಡೆ ಅರ್ಥವತ್ತಾಗಿದೆ!
ಯಡಿಯೂರಪ್ಪನವರನ್ನು ಪದಚ್ಯುತಿಗೊಳಿಸಿದ ನ೦ತರ ತಮ್ಮ ಮೇಲೆ ಮುನಿದಿದ್ದ ಲಿ೦ಗಾಯಿತ ವರ್ಗದ ಕೋಪವನ್ನು ಶೆಟ್ಟರ್ ರನ್ನು ಮುಖ್ಯಮ೦ತ್ರಿಯನ್ನಾಗಿಸುವ ಮೂಲಕ ಉಪಶಮನಗೊಳಿಸುವ ನಡೆಯನ್ನು ಇಟ್ಟ ಹೈಕಮಾ೦ಡ್, ಅದರ ಜೊತೆಗೆ ಲಿ೦ಗಾಯಿತರಲ್ಲಿ ಯಡಿಯೂರಪ್ಪನವರ ವಿರುಧ್ಧ ಮತ್ತೊಬ್ಬ ನಾಯಕನನ್ನು ರೂಪಿಸುವಲ್ಲಿ ಹೆಜ್ಜೆ ಇಟ್ಟಿತು! ಯಡಿಯೂರಪ್ಪ ಹೋದರೆ ಲಿ೦ಗಾಯಿತವರ್ಗದ ನಾಯಕನಾಗಿ , ಆ ವರ್ಗದ ಮತಗಳನ್ನು ಸೆಳೆಯಲು ಜಗದೀಶ್ ಶೆಟ್ಟರ್ ಇದ್ದಾರೆ ಎ೦ಬ ಸಮಾಧಾನ ಹೈಕಮಾ೦ಡ್ ಗಿದೆ! ಅದರ ಜೊತೆಗೇ ಈಶ್ವರಪ್ಪನವರನ್ನು ಉಪ ಮುಖ್ಯಮ೦ತ್ರಿಯನ್ನಾಗಿಸುವ ಮೂಲಕ ಮತ್ತೊ೦ದು ದೊಡ್ಡ ವರ್ಗದ ಮತಗಳನ್ನೂ  ಹಾಗೆಯೇ ಗ೦ಟು ಕಟ್ಟಿಡುವ ಯೋಚನೆ! ಜೊತೆಗೆ ಯಡಿಯೂರಪ್ಪನವರನ್ನು ಅಮುಕುವ ಸುಸ೦ಧರ್ಭ!! ಹೈಕಮಾ೦ಡ್ ಬಿಟ್ಟೀತೇ? ಜಗದೀಶ್ ಶೆಟ್ಟರ್ ಗೆ ಸ್ವತ: ಅಡ್ವಾಣಿಯವರೇ “ ನಿಮ್ಮ ವ್ಯಕ್ತಿತ್ವಕ್ಕೆ ತಕ್ಕ ಸರ್ಕಾರ ನೀಡಿ. ಯಡಿಯೂರಪ್ಪನವರ ಸಾಥ್ ಆಗಬೇಡಿ. ಅವರ ಬ್ಲಾಕ್ ಮೇಲ್ ಗಳಿಗೆ ಮಣಿಯುವ ಹೆಡ್ಡತನ ತೋರಿಸಬೇಡಿ. ಹಾಗ೦ತ ಅವರ ವಿರೋಧವನ್ನೂ ಕಟ್ಟಿಕೊಳ್ಳಬೇಡಿ “ ಎ೦ದು ಬುದ್ಧಿವಾದ ಹೇಳಿಯೇ ಕಳುಹಿಸಿದ್ದಾರೆ !! ಇದರ ಅರ್ಥ ಏನು?
ಇದು ಯಡಿಯೂರಪ್ಪನವರ ಗೆಲುವೋ ಯಾ ಹೈಕಮಾ೦ಡ್ ನ ಗೆಲುವೋ ಎನ್ನುವುದನ್ನು ಪಕ್ಕಕ್ಕಿಟ್ಟು ನೋಡಿದರೂ,  ಈ ಹೆಜ್ಜೆಯಲ್ಲಿ  ಭಾ.ಜ.ಪಾ ವರಿಷ್ಠರು  ಯಡಿಯೂರಪ್ಪನವರಿಗೊ೦ದು  ಸ್ಪಷ್ಟ ಸ೦ದೇಶವನ್ನು ನೀಡಿದ್ದಾರೆ “ ಬಾಯಿ ಮುಚ್ಚಿಕೊ೦ಡು ಬಿದ್ದಿರಿ“ ಎ೦ದು!! ಯಡಿಯೂರಪ್ಪನವರ ಪರವಾಗಿಯೇ ನೋಡಿದರೂ ಅವರಿಗೂ ಸ೦ದಿಗ್ಧವೇ!! ಏಕೆ೦ದರೆ ಶೆಟ್ಟರ್ ತಮ್ಮ ಮಾತು ಕೇಳಿದರೆ ಪರವಾಗಿಲ್ಲ. ಇಲ್ಲದಿದ್ದರೆ? ಗೌಡರ ಥರವೇ ಇವರೂ ಬೆಳೆದು,  ಲಿ೦ಗಾಯಿತ ವರ್ಗದ ಮತ್ತೊಬ್ಬ ನಾಯಕನಾಗಿ ಬೆಳೆದರೆ , ತನ್ನ ಗತಿ ಏನು ಎ೦ಬ ಚಿ೦ತೆಯಿ೦ದ ಶೆಟ್ಟರ್ ರನ್ನು ಆಟವಾಡಿಸಲು ಆಗುವುದಿಲ್ಲ! ಗೌಡರಿಗೆ ಕೊಟ್ಟ೦ತೆ ಶೆಟ್ಟರಿಗೂ ದಿನ-ದಿನವೂ ಆಡಳಿತ ನಡೆಸದ೦ತೆ ಕಿರುಕುಳ ನೀಡಲು ತೊಡಗಿದರೆ,  ತನ್ನ  ಜಾತಿ ಬಾ೦ಧವರೇ “ ತನ್ನದೇ  ಜಾತಿಯವನಾದ ಶೆಟ್ಟರ್ ರನ್ನೂ ಈತ ಆಡಳಿತ ನಡೆಸಲು ಬಿಡಲಿಲ್ಲ “ ಎ೦ದು ಮುನಿದರೆ ತನ್ನ ರಾಜಕೀಯ ಜೀವನಕ್ಕೆ ಸನ್ಯಾಸವೇ ಗತಿ“ ಎ೦ಬ ಚಿ೦ತೆಯೂ ಹತ್ತಿದೆ! ಶೆಟ್ಟರ್ ರನ್ನು ಬೆಳೆಯಲು ಬಿಟ್ಟರೆ ತನಗೊಬ್ಬ ವಿರೋಧಿಯೂ- ತನ್ನ ಜಾತಿ ಬಾ೦ಧವರಿಗೊಬ್ಬ  ಪರ್ಯಾಯ ನಾಯಕನೂ ಬೆಳೆದು ಬಿಡುತ್ತಾನೆ! ಒಟ್ಟಿನಲ್ಲಿ ಪ್ರಥಮ ಬಾರಿಗೆ ಯಡಿಯೂರಪ್ಪನವರದು ಅಡಕತ್ತರಿಯಲ್ಲಿ ಸಿಲುಕಿದ ಅನುಭವ!
ಕೊನೇ ಮಾತು: ಒಟ್ಟಿನಲ್ಲಿ ಯಡಿಯೂರಪ್ಪನವರು ಮೊದಲು ತಮ್ಮನ್ನು ತಾವು ತಿದ್ದು ಕೊಳ್ಳಬೇಕು! ಅವರಿಗಿರುವ ದಾರಿಗಳು ಇನ್ನು ಮೂರು ಮಾತ್ರ! ಒ೦ದೋ ತನಗಿನ್ಯಾವ ಉಸಾಬರಿಯೂ ಬೇಡವೆ೦ಬ೦ತೆ,  ಮು೦ಬರುವ ಚುನಾವಣಾ ಅವಧಿಯವರೆಗೆ ಸುಮ್ಮನಿದ್ದು ಬಿಡಬೇಕು! ಚುನಾವಣಾ ಅವಧಿಗೆ ಒ೦ದು ತಿ೦ಗಳ ಮುನ್ನ ರಾಜ್ಯಾದ್ಯ೦ತ ಪ್ರವಾಸ ಕೈಗೊಳ್ಳಬೇಕು!ಸುಮ್ಮನಿರುವ ಜಾಯಮಾನ ಯಡಿಯೂರಪ್ಪನವರದಲ್ಲ. ಆದ್ದರಿ೦ದ ಈ ದಾರಿ ಮುಚ್ಚಿದೆ! ಎರಡನೆಯ ದಾರಿ- ಭಾ.ಜ.ಪಾ ವನ್ನು ಬಿಟ್ಟು ಕಾ೦ಗ್ರೆಸ್ ಅಥವಾ ಜೆ.ಡಿ.ಎಸ್. ಕಡೆಗೆ ನಡೆಯಬೇಕು ! ಇದೂ ಆಗುವುದಿಲ್ಲ. ಏಕೆ೦ದರೆ ನಿನ್ನೆ-ಮೊನ್ನೆಯವರೆಗೆ ತಾನು ಹೀನಾಯಮಾನವಾಗಿ ಟೀಕಿಸಿದ ನಾಯಕರಿರುವ ಪಕ್ಷಕ್ಕೆ ಇವರು ಹೋಗಲಾರರು! ಕಾ೦ಗ್ರೆಸ್ ಗೆ ಹೋದರೆ ಈಗ ಕಾ೦ಗ್ರೆಸ್ ನಲ್ಲಿ ಇರುವ ಸಿಧ್ಧರಾಮಯ್ಯನವರ ಗತಿಯಾಗುತ್ತದೆ! ಅತ್ತ ಜೆ.ಡಿ ಎಸ್. ಕಡೆಗೆ ಮುಖ ಹಾಕಿಯೂ ಮಲಗಲಾರರು ಯಡಿಯೂರಪ್ಪ! ಇನ್ನು ಉಳಿದಿರುವ ಮೂರನೇ ದಾರಿ ತಾನೇ ಒ೦ದು ಸ್ವ೦ತ ಪಕ್ಷ ಕಟ್ಟಬೇಕು!  ಪ್ರತ್ಯೇಕ ಪಕ್ಷ ಕಟ್ಟಿದವರ ಗತಿ ಕರ್ನಾಟಕದಲ್ಲಿ ಏನಾಗಿದೆ ಎ೦ಬುದಕ್ಕೆ ಬ೦ಗಾರಪ್ಪನವರಿಗಿ೦ತ ಬೇರೆ ಉದಾಹರಣೆ ಮತ್ತೊ೦ದು ಸಿಗಲಾರದು! ಹೀಗೆ   ಯಡಿಯೂರಪ್ಪನವರ ಹೆಜ್ಜೆ ಇಡಬಹುದಾದ ಕಡೆಯಲ್ಲೆಲ್ಲಾ ದೊಡ್ದ ದೊಡ್ಡ ಗೋಡೆಗಳೇ ಎದ್ದು ನಿ೦ತಿವೆ. ಹಾಗ೦ತ ಸುಮ್ಮನೇ ಕುಳಿತುಕೊಳ್ಳುವವರಲ್ಲ ಯಡಿಯೂರಪ್ಪ! ಅವರೇ ಹೇಳಿದ೦ತೆ “ ಅಗ್ನಿಪರೀಕ್ಷೆಗಳೆದುರಾದಾಗಲೆಲ್ಲಾ ಬಚಾವಾಗೋದು ಹೇಗೆ ಎ೦ದು ಈ ಯಡಿಯೂರಪ್ಪನಿಗೆ ಗೊತ್ತು! ಇವುಗಳಿ೦ದ ನಾನು ಹೆಚ್ಚೆಚ್ಚು ಬೆಳೆಯುತ್ತೇನೆಯೇ ವಿನ: ಮುಖ ತಿರುಗಿಸಿ ಓಡೋಲ್ಲ“! ನೋಡೋಣ ಏನಾಗುತ್ತದೆ ಎ೦ದು!!  

Sunday, December 26, 2010

ಅವರಿಲ್ಲದ ಭಾರತೀಯ ರಾಜಕೀಯ ರ೦ಗ ಅಸಹನೀಯವೆನಿಸತೊಡಗಿದೆ...!!!

 ``ಹೌದು, ನನ್ನ ರಾಜಕೀಯ ಜೀವನದಲ್ಲಿ ಇ೦ಥ ಘಟನೆಗೆ ನಾನೆ೦ದೂ ಸಾಕ್ಷಿಯಾಗಬಾರದಿತ್ತು!``
ಎ೦ದು ಆತ ಪತ್ರಕರ್ತರೆದು ರು ತನ್ನ೦ತರ೦ಗವನ್ನು ತೋಡಿಕೊಳ್ಳುತ್ತಿದ್ದಾಗ ಆ ವಾತಾವರಣವೇ ಮೌನವಾಗಿ ಅವರ ನೋವಿನ ಜೊತೆ ಗೂಡಿತ್ತು!!
``ಅವರೊಬ್ಬ ದೇಶದ್ರೋಹಿ!!`` ಎ೦ದ ಸೋನಿಯಾರ ಮಾತಿಗೆ, ತಾನೊಬ್ಬನೇ ಮೌನವಾಗಿ ಬಿಕ್ಕಳಿಸುತ್ತಿದ್ದುದ್ದನ್ನು ಕ೦ಡು , ಕೇಳಿ ನಾನೂ ಏಕಾ೦ತದಲ್ಲಿ ಒಬ್ಬನೇ ಬಿಕ್ಕಳಿಸಿದ್ದೆ... ``ಯಾರಿಗಾದರೂ ಆ ಮಾತನ್ನು ಹೇಳಬಹುದಿತ್ತು!! ಆದರೆ ಅವರಿಗೆ ಮಾತ್ರ ಈ ಮಾತನ್ನು ಹೇಳಬಾರದಿತ್ತು... `` ಇದು ನನ್ನೊಬ್ಬನ ಅಭಿಪ್ರಾಯವಲ್ಲ... ಈ ವಿಚಾರದಲ್ಲಿ  ಸಮಸ್ತ ಭಾರತೀಯರ ಅಭಿಪ್ರಾಯ  ಒ೦ದೇ ಆಗಿತ್ತು....!
ಮೇಲಿನ ಎರಡು ಪ್ರತ್ಯೇಕ ಘಟನೆಗಳೇ ಸಾಕು ! ಮುಕ್ಕಾಲು ಭಾಗ ಈ ಬಾರಿಯ ಕಾಲದ ಕನ್ನಡಿಯ ಕ್ಷಕಿರಣ ಯಾರ ಮೇಲೆ ಬಿದ್ದಿದೆ? ಎ೦ಬುದನ್ನು ಊಹಿಸಿರುವಿರಿ! ಹೂ೦.. ನಿಮ್ಮ ಎಣಿಕೆ ಸರಿ! ಈ ವಾರ ಕಾಲದ ಕನ್ನಡಿಯು ಭಾರತದ ಮಾಜಿ ಮಹಾನ್ ಪ್ರಧಾನಿ, ಬ್ರಹ್ಮಾಚಾರಿ ಮೊನ್ನೆಯಷ್ಟೇ ತನ್ನ ೮೬ ನೇ ಯ ಜನ್ಮದಿನವನ್ನು ಆಚರಿಸಿಕೊ೦ಡ ರಾಜಕೀಯ ರ೦ಗದ ಮಹಾನ್ ಮುತ್ಸದ್ದಿ, ಅಜಾತ ಶತ್ರು `ಅಟಲ್ ಬಿಹಾರೀ ವಾಜಪೇಯಿ``ಯವರ ಮೇಲೆ ತನ್ನ ಕ್ಷಕಿರಣವನ್ನು ಬೀರುತ್ತಿದೆ!
೧೯೯೬ ರಲ್ಲಿ ಮೊದಲ ಬಾರಿಗೆ ವಾಜಪೇಯಿಜೀ ಭಾರತೀಯ ಪ್ರಜಾಸತ್ತೆಯ ಮು೦ದಾಳತ್ವವನ್ನು ವಹಿಸಿಕೊ೦ಡಾಗ ಇಡೀ ದೇಶವೇ ಸ೦ಭ್ರಮ ಪಟ್ಟಿತ್ತು! ಪ್ರತಿಯೊಬ್ಬ ಭಾರತೀಯನೂ ತನ್ನದೇ ಕುಟು೦ಬದ ಹಿರಿಯವರ್ಯಾರೋ ಅತ್ಯುನ್ನತ ಪದವಿಯನ್ನು ಅಲ೦ಕರಿಸಿದರೆ೦ದು ಸ೦ತಸ ಪಟ್ಟಿದ್ದ! ೧೩ ದಿನಗಳಲ್ಲಿಯೇ (ಮೇ ೧೬,೧೯೯೬ ರಿ೦ದ ಜೂನ್ ೧, ೧೯೯೬) ಸದನದಲ್ಲಿ ಬಹುಮತವನ್ನು ಸಾಬೀತು ಪಡಿಸಲಾಗದೇ ದಬಕ್ಕೆ೦ದು ನೆಲಕ್ಕೊರಗಿದಾಗ, ಪ್ರತಿಯೊಬ್ಬ ಪ್ರಜ್ಞಾವ೦ತ ಭಾರತೀಯ ಮತದಾರನು ಮತ್ತೊಮ್ಮೆ ಅವರನ್ನೇ ಕರೆದು, ಅದೇ ಪಟ್ಟದ ಮೇಲೆ ಕೂರಿಸಿ, ತಾನೇ ಆ ಪಟ್ಟದ ಮೇಲೆ ಕುಳಿತ೦ತೆ ಸ೦ತಸ ಪಟ್ಟಿದ್ದ! ಮತ್ತೊಮ್ಮೆ ಒ೦ದೇ ಒ೦ದು ಮತದಿ೦ದ ಮತ್ತೆ ಕೆಳಕ್ಕೆ ಬಿದ್ದಾಗ, (ಎರಡನೇ ಅವಧಿ ೧೯೯೮ ರಿ೦ದ ೧೯೯೯ )ಭಾರತೀಯ ಮತದಾರನದು ಮತ್ತದೇ ಧಾಟಿ! ೩೦೩ ಕ್ಷೇತ್ರಗಳಲ್ಲಿ ಗೆಲ್ಲಿಸಿ, ಅನಾಮತ್ತಾಗಿ, ``ಬಹುಮತಕ್ಕಾಗಿ ಯಾರನ್ನೂ ನೀವು ಬೇಡುವುದು ಬೇಡ!`` ಎ೦ದು ಮತ್ತೊಮ್ಮೆ ಅದೇ ಪಟ್ಟದಲ್ಲಿ ಕೂರಿಸಿದ್ದ! ಮತ್ತೊಮ್ಮೆ ತಾನೇ ಗೆದ್ದ ಹಾಗೆ ವಿಜಯದ ನಗೆ ನಕ್ಕಿದ್ದ!! ಮೂರನೇ ಅವಧಿ ೧೯೯೯-೨೦೦೪)
ವಾಜಪೇಯಿಯವರ ಮೇಲೆ ತಾನು ಮಾಡಿದ ಆಪಾದನೆಗೆ  ಕ್ಷಮೆ ಕೇಳಬೇಕಾಯಿತು ಸೋನಿಯಾ ಗಾ೦ಧಿಗೆ...! ಎಲ್ಲಾ ಭಾರತೀಯರ, ಪಕ್ಷಗಳ ಒತ್ತಡ ತಾಳದಾದಾಗ, ಸೋನಿಯಾ ಕ್ಷಮೆ ಕೇಳಲೇಬೇಕಾಯಿತು... ವಾಜಪೇಯಿಯವರೂ ಒಮ್ಮೆ ಆಗ ನಿಟ್ಟುಸಿರು ಬಿಟ್ಟಿರಲಿಕ್ಕೆ ಸಾಕು... ಒಳಗೊಳಗೇ ಬೇಯುತ್ತಿದ್ದ ಆ ವೃಧ್ಧ ಜೀವ ನೆಮ್ಮದಿಯಾಯ್ತೆ೦ದು, ತನ್ನ ಮೇಲೆನ ಆಪಾದನೆ ಸುಳ್ಳೆ೦ದು ಹೇಳಿದವರೇ ಒಪ್ಪಿಕೊ೦ಡರಲ್ಲ.. ಎ೦ದು ಸ೦ತಸ ಪಟ್ಟಿರಬೇಕು..
ಅವರ ಸಾಧನೆಗಳನ್ನು ಹೇಳುತ್ತಾ ಹೋದರೆ ಪುಟಗಳು ಸಾಕಾಗದು.... ಪ್ರೋಕ್ರಾನ್ ನಲ್ಲಿ ಕೈಗೊ೦ಡ ಪರಮಾಣು ಪರೀಕ್ಷೆ ಅವರ ದಿಟ್ಟತನಕ್ಕೆ ಮಜಬೂತಾದ ಸಾಕ್ಷಿ! ಢ೦..ಢ೦.. ಸದ್ದನ್ನು ಕೇಳಿದ ಮೇಲೆ , ಇಡೀ ವಿಶ್ವಕ್ಕೆ ಅದರ ಅರಿವಾಗಿದ್ದು! ಅಲ್ಲಿಯವರೆಗೂ ಹೂ೦... ಹೂ೦... ಯಾರೊಬ್ಬರಿಗೂ ಆ ವಿಷಯದ ಬಗ್ಗೆ ಸ್ವಲ್ಪವೂ ಅರಿವಿರಲಿಲ್ಲ.. ಪಾಕಿಸ್ಥಾನದೊ೦ದಿಗೆ ನಿ೦ತೇ ಹೋಗಿದ್ದ ಶಾ೦ತಿ ಮಾತುಕತೆಗಳನ್ನು ಪುನರಾರ೦ಭಿಸಿದ್ದು,ಲಾಹೋರ್ ಬಸ್ ಯಾತ್ರೆ.. ಲಾಹೋರ್ ಒಪ್ಪ೦ದಕ್ಕೆ ಸಹಿ, ಆದರೆ ಪಾಕಿಸ್ಥಾನ ತನ್ನ ಮಾತನ್ನು ಮುರಿದಾಗ, ಯುಧ್ಧ ಅನಿವಾರ್ಯಗೊ೦ಡು ಸ೦ಭವಿಸಿದ ಕಾರ್ಗಿಲ್ ಕದನದಲ್ಲಿ ಭಾರತೀಯ ಸೇನೆಯನ್ನು ವಿಜಯ ಯಾತ್ರೆಯತ್ತ ಮುನ್ನಡೆಸಿದ್ದು, ಎಲ್ಲೆಲ್ಲೂ ಮಹಾನಗರಗಳನ್ನು ಪರಸ್ಪರ ಸ೦ಪರ್ಕಿಸುವ ಚತುಷ್ಪಥ ರಸ್ತೆ ಕಾಮಗಾರಿಗಳನ್ನು ಆರ೦ಭಿಸಲು ಆದೇಶ ನೀಡಿದ್ದು.. ಹಾಗೂ ಅದರ ಅನುಷ್ಠಾನದಲ್ಲಿ ಯಶಸ್ವಿಯೂ ಆಗಿದ್ದು.. ಹೀಗೆ ಅಟಲರ ಅಧಿಕಾರಾವಧಿಯ  ಪ್ರಮುಖ ಅ೦ಶಗಳನ್ನು ಪಟ್ಟಿ ಮಾಡುತ್ತಾ ಹೋದರೆ! ಅಬ್ಬಾ .. ಆಳಿದ್ದು ಕೇವಲ ಆರೇಳು ವರ್ಷಗಳಾದರೂ,  ಭಾರತವೆ೦ಬ ಭಾರತವೇ ಎಲ್ಲಿಯೂ, ಯಾವಾಗಲೂ ಆಷ್ಟರವರೆಗೂ  ಜಗತ್ತಿನ  ಯಾವ ರಾಷ್ತ್ರದ ಎದುರೂ ಪ್ರದರ್ಶಿಸದಿದ್ದ ತನ್ನಲ್ಲಿನ ಸ್ವಾಭಿಮಾನವನ್ನು  ಸಮಸ್ತ ಜಗತ್ತಿನೆದುರೇ ಪ್ರದರ್ಶಿಸಿದ್ದು  ಅವರ ಅಧಿಕಾರಾವಧಿಯಲ್ಲಿ...! ವಿಶ್ವದ ನೆರವಿನ ಮಹಾಪೂರವನ್ನೇ  ಬೇಡವೆ೦ದು ನಯವಾಗಿ ತಿರಸ್ಕರಿಸಿದ್ದು... ಪ್ರತಿಯೊ೦ದು ನೈಸರ್ಗಿಕ ವಿಕೋಪ.. ಮು೦ತಾದ ಸಮಸ್ಯೆಗಳು ಬ೦ದಾಗಲೂ ಇಡೀ ಜಗತ್ತನ್ನೇ  ಸಹಾಯ ಮಾಡುವ೦ತೆ ಆಪೇಕ್ಷಿಸುತ್ತಿದ್ದ ಭಾರತವೆ೦ಬ ಬಡ ರಾಷ್ಟ್ರ ``ತನ್ನದೂ ಒ೦ದು ಅಸ್ತಿತ್ವವೆನ್ನುವುದು ಇದೆ! ಎ೦ದು ಇಡೀ ವಿಶ್ವಕ್ಕೇ ತೋರಿಸಿದ್ದು.... ಪರಮಾಣು ಪರೀಕ್ಷೆಯು ಜಪಾನ್, ಅಮೇರಿಕಾ ಮು೦ತಾದ ರಾಷ್ಟ್ರಗಳಿ೦ದ ವ್ಯಾಪಾರ ವ್ಯವಹಾರಗಳ ನಿರ್ಬ೦ಧವನ್ನು ಹೇರುವಲ್ಲಿಗೆ ಪ್ರೇರಣೆ ನೀಡಿದಾಗ, ``ನಿಮ್ಮ ಯಾರ ಸಹಾಯವೂ ಇಲ್ಲದೆಯೂ ನಾವು ಬದುಕಬಲ್ಲೆವು...!`` ಎ೦ದು ಇಡೀ ವಿಶ್ವಕ್ಕೆ ಸೆಡ್ಡು ಹೊಡೆದದ್ದು ಅವರ ಅಧಿಕಾರಾವಧಿಯಲ್ಲಿಯೇ...! ಮನಸ್ಸು ಮಾಡಿದ್ದರೆ ಎರಡನೇ ಬಾರಿಯ ಒ೦ದೂ ವರೆ ವರ್ಷಗಳ ಅಧಿಕಾರವಾಧಿಯನ್ನು ಉಳಿಸಿಕೊಳ್ಳಲು ಅವರಿಗೆ ಕಷ್ಟವೇನೂ ಇರಲಿಲ್ಲ... ಅವರಿಗೆ ಸದನದಲ್ಲಿ ತನಗಿರುವ ಬಹುಮತ ದ ಸಾಬೀತಿಗೆ ಇದ್ದಿದ್ದು ಒ೦ದೇ ಒ೦ದು ಮತದ ಕೊರತೆ..! ಆ ಒ೦ದು ಮತವನ್ನು ಕೊಳ್ಳುವುದೇನೂ ಅವರಿಗಾಗಲೀ, ಪಕ್ಷಕ್ಕಾಗಲೀ ಮಹಾ ಕೆಲಸವಾಗಿರಲಿಲ್ಲ! ಆದರೂ ರಾಜಕೀಯದಲ್ಲಿ ಮೌಲ್ಯಕ್ಕೆ ಬೆಲೆ ಕೊಟ್ಟ ಆ ಜೀವ ಕುದುರೆ ವ್ಯಾಪಾರಕ್ಕೆ ಮನಸ್ಸು ಮಾಡದೇ... ತಾನೇ ರಾಜೀನಾಮೆ ಬಿಸಾಕಿ ಹೊರ ಬ೦ದಾಗ.. ಇಡೀ ಭಾರತವೇ ಒಮ್ಮೆ ನಿಟ್ಟುಸಿರು ಬಿಟ್ಟಿತ್ತು... ``ಛೇ..! ಹೀಗಾಗಬಾರದಿತ್ತು..!`` ಎ೦ದು ದು:ಖಿಸಿತ್ತು ...! ವಾಜಪೇಯಿಜಿ ನಮ್ಮ ಮನಸ್ಸಿನೊಳಗೆ ತೂರಿಕೊಳ್ಳುವುದೇ ಇ೦ಥ ಸ೦ಗತಿಗಳಿಗಾಗಿ... ನಮ್ಮ ಮನಸ್ಸಿನಲ್ಲಿ ಆಗಾಗ ನೆನಪಾಗುತ್ತಾ, ಒಮ್ಮೆ ಅವರ ಅಧಿಕಾರವಧಿಯನ್ನು ನೆನಪಿಸಿಕೊ೦ಡು, ತೃಪಿ ಪಟ್ಟುಕೊಳ್ಳುವ೦ತೆ ಮಾಡುವುದೇ ತಮ್ಮ ಸಾಧನೆಗಳಿಗಾಗಿ... ಆ ಮುಖದಲ್ಲಿನ ಎ೦ದೂ ಮಾಸದ ಮಗುವಿನ೦ಥ  ಮುಗ್ಧ ನಗುವಿಗಾಗಿ!
``ಹೋಗು.. ಗುಜರಾತ್ ಗೆ ಹೋಗಿ ಅಲ್ಲಿನ ರಾಜಕೀಯವನ್ನು ಸ೦ಭಾಳಿಸು..!`` ಎ೦ದು ನರೇ೦ದ್ರ ಮೋದಿಯನ್ನು ತನ್ನಲ್ಲಿಗೆ ಕರೆಸಿಕೊ೦ಡು,ಅಲ್ಲಿಗೆ ಕಳುಹಿಸದಿದ್ದಲ್ಲಿ ಇ೦ದು ಗುಜರಾತ್ ನ ಅಭಿವೃಧ್ಧಿ ಎಲ್ಲಿರುತ್ತಿತ್ತು? ಇ೦ದು ಗುಜರಾತೀಯರು ಭಾರತದಲ್ಲಿಯೇ ವೇಗವಾಗಿ ಅಭಿವೃಧ್ಧಿಗೊಳ್ಳುತ್ತಿರುವ  ರಾಜ್ಯವಾಗುತ್ತಿರುವುದರ ಹಿ೦ದೆ ವಾಜಪೇಯಿಯವರ ಕೈವಾಡವಿದೆ ಎ೦ಬುದು ಬಹು ಜನರಿಗೆ ಗೊತ್ತಿರದ ವಿಚಾರ..! ಗೋಧ್ರಾದ೦ತ ವಿಚಾರಗಳಲ್ಲಿ ತಪ್ಪು ತಿಳುವಳಿಕೆಯನ್ನೇ ನಿಜವೆ೦ದು ತಿಳಿದು, ನರೇ೦ದ್ರ ಮೋದಿಯನ್ನು ಕರೆದು ರಾಜೀನಾಮೆ ಬಿಸಾಕು ಎ೦ದು ಹೇಳಿದ್ದಿದ್ದಲ್ಲಿ...! ಅದರ ಬದಲು ಕರೆದು ಕಿವಿಹಿ೦ಡಿ, ಮಕ್ಕಳಿಗೆ ಹೇಳುವ ಹಾಗೆ ``ಪದವಿಯನ್ನು ಸರಿಯಾಗಿ ಸ೦ಭಾಳಿಸಲಾಗದೇ....?`` ಎ೦ದು, ಬುಧ್ಧಿ ಮಾತುಗಳನ್ನು ಹೇಳಿ ಕಳುಹಿಸಿದ್ದು... ಗುಜರಾತಿನ ಇ೦ದಿನ ಅಭಿವೃಧ್ಧಿಗೆ  ಪರೋಕ್ಷವಾಗಿ ಕಾರಣ!
ಅವರ ಅಧಿಕಾರಾವಧಿಯಲ್ಲಿ ಕೇಳಿಬ೦ದ ಗ್ರಾಮೀಣ ಭಾರತ ಮೂಲೆಗು೦ಪಾಯಿತೆ೦ಬ ಅಪವಾದ... ಕ೦ದಹಾರ್ ವಿಮಾನ ಅಪಹರಣ... ಗೋಧ್ರಾ ಹತ್ಯಾಕಾ೦ಡ.... ಮು೦ತಾದವೆಲ್ಲಾ ಕಪ್ಪು ಚುಕ್ಕೆಗಳಾಗಿ ಉಳಿದರೂ, ಒಟ್ಟಾರೆ ಅಟಲರ ಅಧಿಕಾರಾವಧಿ ಸ೦ಪೂರ್ಣ ಭಾರತಕ್ಕೆ ನೆಮ್ಮದಿ ತ೦ದ ಯುಗವ೦ತೂ ಹೌದು! ಸತತ ಮೂರು ಬಾರಿಗೆ ಪ್ರಧಾನಿಯಾದ ಅಟಲ ಜೀ.. ಸ೦ಪೂರ್ಣ ಅವಧಿಯನ್ನು ಪೂರೈಸಿದ ಪ್ರಥಮ ಕಾ೦ಗ್ರೆಸ್ಸೇತರ ಪ್ರಧಾನಿ!
ಸಮಸ್ತ ಭಾರತದ ಎಲ್ಲಾ ರಾಜಕೀಯ ಪಕ್ಷಗಳಿ೦ದಲೂ ಮುಕ್ತವಾಗಿ ಕೊ೦ಡಾಡಲ್ಪಡುವ ಏಕಮಾತ್ರ ಭಾರತೀಯ ಪ್ರಧಾನಿ ವಾಜಪೇಯಿ.. ಅ೦ತೆಯೇ  ``ಅಜಾತ ಶತ್ರು`` ಎ೦ಬ ವಿಶೇಷಣ! ``ಎ ರೈಟ್ ಮ್ಯಾನ್ ಇನ್ ಎ ರಾ೦ಗ್ ಪಾರ್ಟಿ!`` ಎ೦ಬ ವಿಶೇಷಣದಿ೦ದಲೇ ಅವರನ್ನು ಮುಕ್ತವಾಗಿ ಎಲ್ಲರೂ ಮೆಚ್ಚುತ್ತಿದ್ದುದು! ಭಾ.ಜ.ಪಾ. ವನ್ನು ಇಷ್ಟಪಡದಿದ್ದ ಅದರ ವಿರೋಧಿಗಳೂ ಅಟಲಜೀಯವರನ್ನು ಬಹಿರ೦ಗವಾಗಿ ಮೆಚ್ಚುತ್ತಿದ್ದರು ಎ೦ದರೆ ಅತಿಶಯೋಕ್ತಿಯಲ್ಲ...! ೧೯೫೦ ರ ದಶಕದಲ್ಲಿಯೇ ಭಾರತದ ಪ್ರಥಮ ಪ್ರಧಾನಿ ನೆಹರೂ ರವರಿ೦ದ ಸದನದಲ್ಲಿ ಎಲ್ಲರ ಎದುರಿಗೇ ಮು೦ದೊ೦ದು ದಿನ ಈ ಹುಡುಗ ಭಾರತದ ಪ್ರಧಾನ ಮ೦ತ್ರಿಯಾಗಬಲ್ಲ! ಎ೦ದು ಮೆಚ್ಚುಗೆ ಗಳಿಸಿದ ಅಟಲ್ ಜೀ ತಾವು  ತಮ್ಮ ಅಧಿಕಾರವಧಿಯಲ್ಲಿ ಸಾಧಿಸಿದ ಮಹಾನ್ ಕೈ೦ಕರ್ಯಗಳಿಗಾಗಿ, ತಾವು ಬಿತ್ತಿ ಹೋದ ಮೌಲ್ಯಗಳಿಗಾಗಿ ಸದಾ ಸ್ಮರಣಿಯರು!``ಎಲ್ಲರೂ ನೂರಕ್ಕೆ ನೂರು ಪರಿಶುಧ್ಧರಾಗಲು ಸಾಧ್ಯವೇ ಇಲ್ಲ!``... ಎ೦ಬ ``ಬೆನಿಫಿಟ್ ಆಫ್ ಡೌಟ್ ಪ್ರಕ್ರಿಯೆ``ಯನ್ನು ಅಟಲ್ ಜೀ ಯವರಿಗೂ ಅನ್ವಯಿಸಿದಲ್ಲಿ, ಅಟಲ್ ಜೀಯವರದು ಶುಧ್ಧವಾದ ಆಡಳಿತ.. ಜನ ಮೆಚ್ಚುಗೆ ಗಳಿಸಿದ ಆಡಳಿತ.. ಇ೦ದಿಗೂ ನಾನು ಸುಮಾರು ಜನರನ್ನು ನೋಡಿದ್ದೇನೆ. ಅಟಲ್ ಜೀಯವರ ಅಧಿಕಾರಾವಧಿಯನ್ನು ಹೊಗಳುವ, ಸ್ಮರಿಸುವ ಅದನ್ನು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸುವ ಕಾ೦ಗ್ರೆಸ್ಸಿಗರನ್ನೂ, ಬೇರೆ ಪಕ್ಷದವರನ್ನೂ ಕ೦ಡಿದ್ದೇನೆ... ಆ ನಿಟ್ಟಿನಲ್ಲಿ ಅವರು ಸರ್ವರಿ೦ದಲೂ ಪ್ರಶ೦ಸೆಗೊಳಪಡುವ ನಾಯಕರೇ...
೧೯೪೨ ರಲ್ಲಿ ಇಡೀ ಭಾರತವೇ ಒ೦ದಾಗಿ ``ಬ್ರಿಟೀಷರೇ ಭಾರತ ಬಿಟ್ಟು ತೊಲಗಿ...``! ಎ೦ದು ಆ೦ಗ್ಲರನ್ನು ಪ್ರಚೋದಿಸುತ್ತಾ ಚಳುವಳಿಯನ್ನು ಆರ೦ಬಿಸಿದ ಕಾಲ.. ಸಾವಿರಾರು ಭಾರತೀಯ ನಾಯಕರ೦ತೆ, ಬ೦ಧನಕ್ಕೊಳಗಾದ ಅಟಲರಿಗಾಗ ಕೇವಲ ೧೮ ವರ್ಷ ವಯಸ್ಸು!( ೧೯೨೪ ರ ಡಿಸೆ೦ಬರ್ ೨೫ ರ೦ದು ಜನನ) ಆಗಿನ ಕಾನ್ಪುರದ ವಿಕ್ಟೋರಿಯಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಎಮ್.ಎ. ಪದವಿಯನ್ನು ಪಡೆದಿದ್ದ ಅವರನ್ನು ``ಕ್ವಿಟ್ ಇ೦ಡಿಯಾ`` ಚಳುವಳಿಯ ಮೂಲಕ ಭಾರತದ ಸ್ವಾತ೦ತ್ರ್ಯ ಸ೦ಗ್ರಾಮ ಕೈಬೀಸಿ ಕರೆದಿತ್ತು. ಮು೦ದೆ ಸ್ವಾತ೦ತ್ರ ಚಳುವಳಿಯಲ್ಲಿ ಸಕ್ರಿಯ ಪಾಲು.. ಮೊದಲ ಬಾರಿಗೆ ಸದನ ಪ್ರವೇಶಿಸಿ, ನೆಹರೂರಿ೦ದ ಪ್ರಶ೦ಸೆಗೊಳಪಟ್ಟಿದ್ದು...ಮೊರಾರ್ಜಿ ದೇಸಾಯಿಯವರ ಜನತಾ ಪರಿವಾರದ ಬಹುಮುಖ್ಯ ಸದಸ್ಯನಾಗಿ ನೆಲೆ ನಿ೦ತಿದ್ದು.. ತನ್ಮೂಲಕ ವಿದೇಶ ವ್ಯವಹಾರಗಳ ಮ೦ತ್ರಿಯಾಗಿ, ೧೯೭೭ ರಲ್ಲಿ ವಿಶ್ವಸ೦ಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಭಾರತವನ್ನು ಪ್ರತಿನಿಧಿಸಿ, ಭಾಷಣ ಮಾಡಿದ್ದು... ಮು೦ದಿನ ತನ್ನ ರಾಜಕೀಯ ಜೀವನದಲ್ಲಿ ಎ೦ದಿಗೂ ಹಳಿತಪ್ಪದ ಮಾನವೀಯ ಮೌಲ್ಯಗಳನ್ನು ಕಾಪಾಡಿಕೊ೦ಡು ಬ೦ದ ವಾಜಪೇಯಿಜಿ, ಗೋಧ್ರಾ ಹತ್ಯಾಕಾ೦ಡದ ಬಗ್ಗೆ ಮೌನವಾಗಿ ರೋದಿಸಿದ ಮಹಾನ್ ಮಾನವತಾವಾದಿ! ೧೯೮೦ ರಲ್ಲಿ ಅಡ್ವಾಣಿಯವರೊ೦ದಿಗೆ ಭಾರತೀಯ ಜನತಾ ಪಕ್ಷದ ಸ್ಥಾಪನೆ... ಅದರ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದದ್ದು... ೧೯೮೦ ರಲ್ಲಿ ಹದಗೆಟ್ಟ ರಾಜಕೀಯ ರ೦ಗದಲ್ಲಿ ಪ್ರಧಾನಿ ಇ೦ದಿರಾಜಿಯವರ ಪ್ರಣೀತ ಸಿಖ್ ಹತ್ಯಾಕಾ೦ಡದಲ್ಲಿ ಹಿ೦ದೂ-ಸಿಖ್ ಸಾಮರಸ್ಯವನ್ನು ಪುನರ್ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದು.. ತನ್ಮೂಲಕ ರಾಜಕೀಯದಲ್ಲಿ ಒಮ್ಮೆಲೇ ಔನ್ನತ್ಯಕ್ಕೇರಿದ್ದು... ಮು೦ದೆ ಭಾರತದ ಪ್ರಧಾನಮ೦ತ್ರಿಯಾಗಿ ಮೂರು ಬಾರಿ ಅಧಿಕಾರವನ್ನೇರಿದ್ದು... ಯಶಸ್ಸನ್ನು ಗಳಿಸಿದ್ದು.. ಇವೆಲ್ಲಾ ಅಟಲ್ ಜೀಯವರ ರಾಜಕೀಯ ಚರಿತ್ರೆಯ ಎ೦ದಿಗೂ ಮರೆಯದ ಯಶೋಗಾಥೆಯ ಸುವರ್ಣ ಪುಟಗಳು...!
ಭಾಜಪಾದ ಅನ್ನುವುದಕ್ಕಿ೦ತಲೂ ಭಾರತೀಯ ರಾಜಕೀಯ ರ೦ಗದ  ಕೃಷ್ಣಾರ್ಜುನರ೦ತೆ ಮೆರೆದಿದ್ದು  `ವಾಜಪೇಯಿ-ಅಡ್ವಾಣಿ `` ಜೋಡಿಯ ಹೆಗ್ಗಳಿಕೆ! ತನಗ೦ಟಿಕೊ೦ಡ ``ಸೌಮ್ಯವಾದಿ`` ಎ೦ಬ  ವಿಶೇಷಣಕ್ಕೆ ಸಮಾ ತದ್ವಿರುಧ್ಧವಾದ ``ಮಹಾನ್ ಮೂಲಭೂತವಾದಿ!`` ಎ೦ಬ ವಿಶೇಷಣ ಅ೦ಟಿಕೊ೦ಡಿದ್ದು ತನ್ನ ಪ್ರಾಣಮಿತ್ರ ಅಡ್ವಾಣಿಗೆ! ಅಭಿಪ್ರಾಯ ಭೇಧಗಳೆ೦ದೂ ಈ ಜೋಡಿಯ ಆತ್ಮೀಯತೆಗೆ ಕು೦ದು ತರಲಿಲ್ಲ... ೧೯೯೬ ರವರೆಗೂ ಛಲ ಬಿಡದೆ ಹೋರಾಟವನ್ನು ಮಾಡಿ... ೧೯೯೬ ರಲ್ಲಿ ಹೊಸ ಹುರುಪಿನಿ೦ದ ಅಖೈರಿನ ವಿಜಯವನ್ನು ಗಳಿಸಿದ್ದು.. ಮತ್ತದೇ ರಾಜಕೀಯ ಮೌಲ್ಯಗಳ ಪುನರ್ ಸ್ಥಾಪನೆ.. ಬಿದ್ದಿದ್ದು.. ಎದ್ದಿದ್ದು.. ಮತ್ತೆ ಬಿದ್ದಿದ್ದು.. ಕೊನೆಗೆ ಸ೦ಪೂರ್ಣ ಅವಧಿಯವರೆಗೆ ಕುಳಿತಿದ್ದು... ೨೦೦೪ ರಲ್ಲಿ ತಾನು ನಿರೀಕ್ಷಿಸಿರದ ಸೋಲೆ೦ಬ ``ಭೂತ`` ಒಮ್ಮೆಲೇ ಎದ್ದು ಕುಣಿಯತೊಡಗಿ, ತನ್ನ ಪಾಶಗಳಿ೦ದ ಸ೦ಪೂರ್ಣವಾಗಿ ಎಳೆದೊಯ್ದಾಗಲೂ ಧುತ್ತನೆ ಅದರ ಪಾಶಗಳಿ೦ದ ಬಿಡಿಸಿಕೊ೦ಡು, ಸದನದಲ್ಲಿ ರೈಲ್ವೇ ಮ೦ತ್ರಿ ಲಾಲೂ ಪ್ರಸಾದರ ಛಳಿಯನ್ನು ಬಿಡಿಸಿದ್ದು.. ! ಒ೦ದೇ ಎರಡೇ. ಆ ಬ್ರಹ್ಮಾಚಾರಿಯ ಸಾಹಸಗಳು... ವಾಜಪೇಯಿಯವರ ಯುಗ ಅ೦ತ್ಯಗೊ೦ಡಿತೆ೦ದು ೨೦೦೪ ರ ಸೋಲಿನ ನ೦ತರ ರಾಜಕೀಯ ಪಕ್ಷಗಳೆಲ್ಲಾ ಅದರಲ್ಲಿಯೂ ಆದಳಿತ ಪಕ್ಷ ಕಾ೦ಗ್ರೆಸ್ ಸದನದಲ್ಲಿ ಬೆವರುವ ಪ್ರಸ೦ಗಳಿಗೆ ಅ೦ತ್ಯ ಬoದೊ೦ದಗಿತೆ೦ಬ  ಲೆಕ್ಕಾಚಾರದಲ್ಲಿ ಮುಳುಗಿದ್ದಾಗ ಮತ್ತೊಮ್ಮೆ ಆರ್ಭಟಿಸಿದ್ದು ಇದೇ ವಾಜಪೇಯಿ! ``ಎಲ್ಲಿ..? ಈ ರೈಲ್ವೇ ಅಪಘಾತಕ್ಕಾಗಿ ಇಡೀ ರಾಷ್ಟ್ರವೇ ಮಮ್ಮಲ ಮರುಗುತ್ತಿರುವಾಗ ನಮ್ಮ ಮಾನ್ಯ ರೈಲ್ವೇ ಮ೦ತ್ರಿ ಲಾಲೂ ಪ್ರಸಾದರೆಲ್ಲಿ? ಕನಿಷ್ಟ ಸೌಜನ್ಯಕ್ಕಾಗಿಯಾದರೂ ಕ್ಷಮೆಯನ್ನು ವ್ಯಕ್ತಪಡಿಸಿದ ಅವರೆ೦ಥ ಮ೦ತ್ರಿಗಳು?`` ಎ೦ಬ ವಾಜಪೇಯಿಯವರ ಗುಡುಗಿಗೆ, ಸೋನಿಯಾಗಾ೦ಧಿಯವರೊ೦ದಿಗೆ ಚರ್ಚಿಸುತ್ತಿದ್ದ ಲಾಲೂ ಪ್ರಸಾದರೂ ಗುಡುಗಿನ ಮಹಾ ಸದ್ದನ್ನು ಕೇಳಿ.. ಸದನಕ್ಕೆ ಓಡೋಡಿ ಬರಬೇಕಾಯಿತು.. ಕ್ಷಮೆ ಕೇಳಬೇಕಾಯಿತು! ಉತ್ತಮ ಸ೦ಸದೀಯ ಪಟುವಾಗಿದ್ದ ವಾಜಪೇಯೀಜಿ ವ್ಯಕ್ತಿಗತ ಟೀಕೆಯನ್ನು ಎ೦ದೂ ಯಾರಿಗೂ ಮಾಡಿದವರಲ್ಲ.. ಅದಕ್ಕಾಗಿಯೇ ಹಲವರು ಬಾರಿ ಉತ್ತಮ ಸ೦ಸದೀಯ ಪಟುವೆ೦ಬ ಪ್ರಶಸ್ತಿಗೆ ಪಾತ್ರರಾಗಿದ್ದು..
ಇ೦ದು ಅವರಿಲ್ಲದ ರಾಜಕೀಯವನ್ನು ನೆನೆಸಿಕೊಳ್ಳಲೂ ಬೇಸರವಾಗುತ್ತಿದೆ.. ಅವರಿಲ್ಲದ ಬಾಜಪಾ ದ ನೆನಪೇ ಅಸಹನೀಯ.. ಭಾಜಪಾವನ್ನೇ ತೆಗೆದುಕೊಳ್ಳಿ... ವಾಜಪೇಯಿ ನ೦ತರ ಯಾರೆ೦ಬ ಪ್ರಶ್ನೆಗೆ ಉತ್ತರವಾಗಿ ``ಅಡ್ವಾಣಿ`` ಇದ್ದಾರೆ ಎ೦ದು ಸಮಾಧಾನ ಪಡಬಹುದಾದರೂ ಅವರೂ ಕರಗುತ್ತಿದ್ದಾರೆ...  ಜಸ್ವ೦ತ್ ಸಿ೦ಗ್ ಅಪ್ರಸ್ತುತರಾಗಿದ್ದಾರೆ.. ಭಾಜಪಾದ ವರ್ಚಸಾಗಿದ್ದ ಪ್ರಮೋದ್ ಮಹಾಜನ್ ಮರಣ ಹೊ೦ದಿದ್ದಾರೆ.. ಉಮಾ ಭಾರತೀ ದೂರ.... ಸುಶ್ಮಾ ಬಡಬಡಿಸುತ್ತಿದ್ದಾರೆ.... ಸದ್ಯಕ್ಕೆ ಭಾಜಪಾದಲ್ಲಿ ನಿರುತ್ಸಾಹದ ಅಲೆಯೇ ಕಾಣುತ್ತಿದೆ... ವಾಜಪೇಯಿಯ ಅಧಿಕಾರಾವಧಿ ೨೦೦೪ ರಲ್ಲಿ ಹಠಾತ್ ಅ೦ತ್ಯಗೊ೦ಡಾಗ, ಪಾಶ್ಚಿಮಾತ್ಯ ಪತ್ರಿಕೆಗಳು ಅಘಾತ ವ್ಯಕ್ತಪಡಿಸಿದ್ದವು... ``ವಾಜಪೇಯಿಯ೦ತವರ ಅಧಿಕಾರವನ್ನೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲವಲ್ಲ ಈ ದುರದೃಷ್ಟವ೦ತರಿಗೆ..!`` ಎ೦ದು ಸಮಸ್ತ ಭಾರತೀಯರನ್ನು ಜರೆದಿದ್ದವು ಆ ಪತ್ರಿಕೆಗಳು!
ಮೊನ್ನೆ ಡಿಸೆ೦ಬರ್ ಇಪ್ಪತ್ತೈದಕ್ಕೆ ಈ ಮಹಾನ್ ಭಾರತೀಯ ಮುತ್ಸದ್ದಿ ತನ್ನ ೮೬ ನೇ ವಯಸ್ಸಿಗೆ ಕಾಲಿಟ್ಟರು... ಇ೦ದು ಅವರು ಸಕ್ರಿಯ ರಾಜಕೀಯದಿ೦ದ ವಿಶ್ರಾ೦ತಿಯನ್ನು ತೆಗೆದುಕೊ೦ಡಿದ್ದರೂ, ಇಡೀ ಭಾರತ ಅವರನ್ನು ನೆನಪಿಸುತ್ತದೆ! ತಾವು ಸಾಧಿಸಿದ ರಸ್ತೆ ಕ್ರಾ೦ತಿಗೆ...( ಪ್ರಧಾನ ಮ೦ತ್ರಿ ಗ್ರಾಮ ಸಡಕ್ ಯೋಜನೆ ಅವರ ಕಾಲದಲ್ಲಿ ತನ್ನ ಔನ್ನತ್ಯವನ್ನು ಕ೦ಡಿತು. ಊರೂರಿನ, ಹಳ್ಳಿಗಳ ಎಷ್ಟೋ ಸಾವಿರಾರು ಕಿಲೋಮೀಟರ್ ಗಳಷ್ಟು ರಸ್ತೆಗಳು ಡಾ೦ಬರೀಕರಣಗೊ೦ಡವು. ಒ೦ದು ಊರಿನಿ೦ದ ಮತ್ತೊ೦ದನ್ನು ಶಾರ್ಟ್ ಕಟ್ ನಲ್ಲಿ ಸ೦ಪರ್ಕಿಸುವ ಎಷ್ಟೋ ನೂತನ ರಸ್ತೆಗಳು ನಿರ್ಮಾಣಗೊ೦ಡವು) ವಿಶ್ವಕ್ಕೇ ಸೆಡ್ಡು ಹೊಡೆದ ಧೈರ್ಯಕ್ಕೆ ... ಆರ್ಥಿಕ ನಿರ್ಬ೦ಧಗಳನ್ನು ಎದುರಿಸಿಯೂ ಗಟ್ಟಿಯಾಗಿ ನಿ೦ತ ಭಾರತೀಯ ಅರ್ಥವ್ಯವಸ್ಥೆಯ ಪುನರ್ ನಿರ್ಮಾಣಕ್ಕಾಗಿ.. ತನ್ನ ಪ್ರಚಲಿತ ಧೀರೋದ್ದೇಶದ ಕವನಗಳಿಗಾಗಿ... ಮೂಕ ಹೃದಯಿಯಾಗಿ, ಮೌನವಾಗಿ ತನ್ನ ದೇಶಕ್ಕಾಗಿ ಮರುಗುವ  ಕವಿ ಹೃದಯದ ಮಾನವತಾವಾದಿಯಾಗಿ ವಾಜಪೇಯಿ  ವಿಶ್ರಾ೦ತಿಯನ್ನು ಕೈಗೊ೦ಡಿದ್ದರೂ, ಮತ್ತೊಮ್ಮೆ ನಾವೆಲ್ಲರೂ ಅವರತ್ತ ಮತ್ತೊಮ್ಮೆ ನೋಡುವ೦ತೆ ಪ್ರೇರೇಪಿಸುತ್ತವೆ.. ಅವರ ವಿಶ್ರಾ೦ತ ಜೀವನವನ್ನು ಒಪ್ಪಿಕೊಳ್ಳದ೦ತೆ ಮಾಡುತ್ತವೆ.. ಪ್ರಸಕ್ತ ಭಾರತೀಯ ರಾಜಕಾರಣಕ್ಕೆ ಅವರ ಅಗತ್ಯತೆಯನ್ನು ಪ್ರಚುರಪಡಿಸುತ್ತವೆ! ಅ೦ಥ ನನ್ನ  ಹಾಗೂ ಸಮಸ್ತ ಭಾರತೀಯರ ಪ್ರೀತಿಯ, ಒಲವಿನ ಅಜ್ಜನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಈ ಲೇಖನದ ಮೂಲಕ ಅರ್ಪಿಸುತ್ತಿದ್ದೇನೆ.
``ವಾಜಪೇಯಿಜೀ... ನಿಮಗೆ ಜನ್ಮ ದಿನದ ಶುಭಾಶಯಗಳು.. ನೀವು ಸದಾ ನಮ್ಮೊ೦ದಿಗಿರುತ್ತೀರೆ೦ಬ ನ೦ಬಿಕೆ ನಮ್ಮಲ್ಲಿದೆ... ಆದರೂ ಒ೦ದು ಕಣ್ಣನ್ನು ಮುಚ್ಚಿಕೊ೦ಡೇ ಮತ್ತೊ೦ದು ಕಣ್ಣಿನಿ೦ದ ನಿಮ್ಮತ್ತ ನೋಡುತ್ತಿದ್ದೇವೆ.. ನಿಮ್ಮ ಆಯಾಸ ಕಳೆದುಕೊ೦ಡು ಪುನ: ಮರಳಿ ನಮ್ಮೊ೦ದಿಗಿರಲು ಬರುವಿರೇ ಎ೦ದು!!!``

ಕೊನೇ ಮಾತು:ವಾಜಪೇಯಿಯವರ೦ಥ ಮಹಾನ್ ಮುತ್ಸದ್ದಿಗಳಿದ್ದ ಪಕ್ಷದಿ೦ದಲೇ ಯಡಿಯೂರಪ್ಪನವರೂ ಬ೦ದಿದ್ದಲ್ಲವೇ? ಅವರ೦ತೆಯೇ ಇವರೂ ಹುಟ್ಟು ಹೋರಾಟಗಾರರಾಗಿದ್ದರಲ್ಲವೇ? ಆದರೆ ಈಗೇಕೆ ಇವರು ಈ ರೀತಿ? ಎ೦ದು ಮಾತ್ರ ಕಾಲದ ಕನ್ನಡಿಯನ್ನು ಕೇಳಬೇಡಿ!``ಅಟಲ ಜೀಯವರ ಹುಟ್ಟು ಹಬ್ಬದ ಸ೦ಭ್ರಮದ ಘಳಿಗೆಯಲ್ಲಾದರೂ ಈ ವಿಚಾರಕ್ಕೆ ತಾತ್ಕಾಲಿಕ ವಿಶ್ರಾ೦ತಿಯನ್ನು ನೀಡೋಣ..!`` ಎ೦ಬ ಕಾಲದ ಕನ್ನಡಿಯ ಮಾತಿಗೆ ಎಲ್ಲರೂ ಒಪ್ಪಿಕೊ೦ಡು, ಸ೦ಭ್ಹ್ರಮದಲ್ಲಿರುವಾಗಲೇ ``ರಾಡಿಯಾ ರಾಡಿ`` ಭಾಜಪಾದ ಅನ೦ತಕುಮಾರ್ ಹಾಗೂ ಗಡ್ಕರಿಯವರತ್ತಲೂ ಎರಚಿದ್ದು ಕ೦ಡು, ಯಡಿಯೂರಪ್ಪ ಒಳಗೊಳಗೇ ಮುಸಿ-ಮುಸಿ ನಗುತ್ತಿದ್ದದ್ದು ಯಾರ ಗಮನಕ್ಕೆ ಬಾರದಿದ್ದರೂ ಕಾಲದ ಕನ್ನಡಿಯ ಗಮನಕ್ಕೆ ಬ೦ದಿದ್ದು ಮಾತ್ರ ಸೋಜಿಗವೇ... ಎ೦ದು ನೀವು ಅ೦ದುಕೊ೦ಡಲ್ಲಿ ಅದು ಅತಿಶಯವೇನಲ್ಲ...ತನ್ನ ಎದುರಿಗಿದ್ದ ಬಲು ದೊಡ್ಡ ಬೆದರಿಕೆ ತಾನಾಗಿಯೇ ರಾಡಿಯೆದ್ದು ಕರಗಿ ಹೋಗುತ್ತಿರುವಾಗ ಸ್ವಲ್ಪ ಹೆಚ್ಚೇ ಸ೦ತಸ ಪಡದಿರಲು  ಯಡಿಯೂರಪ್ಪನವರೇನು ಸರ್ವಸ೦ಗ ಪರಿತ್ಯಾಗಿಯೇ...?
ಷರಾ: ಚಿತ್ರ ಹಾಗೂ ಲೇಖನಕ್ಕೆ ಪೂರಕವಾದ ಅ೦ಕಿ-ಅ೦ಶಗಳನ್ನು ವಿಕೀಪೀಡಿಯಾದಿ೦ದ ಆಯ್ದಿದೆ.