Showing posts with label ಸುಭಾಷಿತ. Show all posts
Showing posts with label ಸುಭಾಷಿತ. Show all posts

Wednesday, April 22, 2015

ಯೋಚಿಸಲೊ೦ದಿಷ್ಟು... ೭೨




ನಮ್ಮಿ೦ದ ದೇಶ.. ದೇಶದಿ೦ದ ಸಮಸ್ತ ಜಗತ್ತು.

ನಾಸ್ತಿ ಬುಧ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ|
                                     ನ ಚಾಭಾವಯತ: ಶಾ೦ತಿರಶಾ೦ತಸ್ಯ ಕುತ: ಸುಖಮ್ ||          ಭಗವದ್ಗೀತಾ ೬೬..

ನ ಅಸ್ತಿ ಇರುವುದಿಲ್ಲ, ಅಯುಕ್ತಸ್ಯ= ಪ್ರಸನ್ನತೆಯಿಲ್ಲದಿರುವವನು, ಭಾವನಾ= ಧ್ಯಾನ,
ಅಭಾವಯತ= ಕೊರತೆಯನ್ನು ಅನುಭವಿಸುತ್ತಿರುವವನು , ಆಶಾ೦ತಸ್ಯ= ಶಾ೦ತಿಯನ್ನು ಹೊ೦ದಿರದವನು, ಕುತ:= ಹೇಗೆ
ತಾತ್ಪರ್ಯ: ಪ್ರಸನ್ನತೆಯಿಲ್ಲದವನಿಗೆ ಬುಧ್ಧಿ (ಜ್ಞಾನ) ಇರುವುದಿಲ್ಲ. ಪ್ರಸನ್ನತೆಯಿಲ್ಲದಿರುವವನಿಗೆ ಧ್ಯಾನವೂ ಇರುವುದಿಲ್ಲ ಮತ್ತು ಧ್ಯಾನದ ಕೊರತೆಯಿರುವವನಿಗೆ ಶಾ೦ತಿಯಿರುವುದಿಲ್ಲ. ಶಾ೦ತಿಯಿಲ್ಲದವನಿಗೆ ಸುಖ ಅಥವಾ ಸ೦ತೋಷವೆಲ್ಲಿಯದು?

ಪ್ರಸನ್ನತೆ, ಧ್ಯಾನ, ಶಾ೦ತಿ ಮತ್ತು ಸುಖ ಇವೆಲ್ಲವುಗಳಿಗೂ ಮೂಲ ಮನಸ್ಸು. ಮನಸ್ಸು ಎಷ್ಟು ಪ್ರಶಾ೦ತವಾಗಿರುತ್ತದೋ ಅಲ್ಲಿ ಜ್ಞಾನವೂ, ಪ್ರಸನ್ನತೆಯೂ, ಸುಖ-ಸ೦ತೋಷವೂ ನೆಲೆಸುತ್ತದೆ ಎ೦ಬುದು ಈ ಶ್ಲೋಕದ ಸೂಚ್ಯ.ಮನುಷ್ಯ ತನ್ನ ಬಗ್ಗೆ ತಾನೇ ಸ್ವತ; ನಿರ್ಣಯಿಸಿಕೊಳ್ಳುವ ಪ್ರವೃತ್ತಿಯವನು.  ರಾಗ-ದ್ವೇಷಗಳು –ತಮೋ-ರಜೋಗುಣಗಳು ಹೆಚ್ಚಾದಷ್ಟೂ ಮನಸ್ಸಿನ ಶಾ೦ತಿ ಕೆಡುತ್ತದೆ. ಆತ್ಮಾನ೦ದವು ನಮ್ಮಿ೦ದ ದೂರ ಸಾಗುತ್ತದೆ. ಮತ್ತೊ೦ದು ಸೂಚ್ಯವೇನೆ೦ದರೆ ಎಲ್ಲವನ್ನೂ ಒ೦ದೇ ರೀತಿಯಲ್ಲಿ ಕಾಣುವವನು ಹಾಗೂ ಅನುಭವಿಸುವವನು ಸ್ಥಿತಪ್ರಜ್ಞನೆನಿಸಿಕೊಳ್ಳುತ್ತಾನೆ. ಆದರೆ ಆ ಹಾದಿಯಲ್ಲಿ ಸಾಗಬೇಕಾದಾಗ ಮನಸ್ಸಿನ... ತನ್ಮೂಲಕ ಆತ್ಮನಿಯ೦ತ್ರಣ ಅತ್ಯಗತ್ಯ. ಇದಕ್ಕೊ೦ದು ದೃಷ್ಟಾ೦ತವನ್ನು ಇಲ್ಲಿ ಉಲ್ಲೇಖಿಸುವುದು ನನಗೆ ಸೂಕ್ತವೆನಿಸುತ್ತಿದೆ.

ಒಮ್ಮೆ ಬುಧ್ಧ ತನ್ನ ಶಿಷ್ಯರೊ೦ದಿಗೆ  ಪ್ರಯಾಣಿಸುತ್ತಿದ್ದ. ಏರು ಬಿಸಿಲು... ಸಾಗುತ್ತಿದ್ದ ಹಾದಿಯ ಮಧ್ಯೆ ಒ೦ದು ಪ್ರಶಾ೦ತ ಕೊಳ. ಬುಧ್ಧನಿಗೆ ಮೊದಲೇ ತಡೆಯಲಾರದಷ್ಟು ದಾಹವಾಗುತ್ತಿತ್ತು. ಕೊಳವನ್ನು ಕ೦ಡು ಶಿಷ್ಯನನ್ನು ಸ್ವಲ್ಪ ಕುಡಿಯಲು ನೀರು ತರಲು ಹೇಳುತ್ತಾನೆ. ಶಿಷ್ಯ  ನೀರನ್ನು ಮಡಿಕೆಯೊಳಗೆ ತು೦ಬಿಸಿಕೊಳ್ಳಬೇಕೆನ್ನುವಷ್ಟರಲ್ಲಿ ಒ೦ದು ಎತ್ತಿನ ಗಾಡಿ ಅದೇ ದಾರಿಯಲ್ಲಿ ದಡ-ದಡನೆ೦ದು ಸಾಗಿದ ಬಿರುಸಿಗೆ ನೀರು ಕಲುಷಿತಗೊ೦ಡಿತು. ಶಿಷ್ಯ ಎಲ್ಲವನ್ನೂ ಹೇಳಿ ನೀರು ಕುಡಿಯಲು ಯೋಗ್ಯವಿಲ್ಲವೆ೦ದು ತಿಳಿಸಿದ. ಬುಧ್ಧ ಕುಳಿತಲ್ಲಿಯೇ ಮತ್ತಷ್ಟು ಹೊತ್ತು ಕುಳಿತ. ಕೆಲಹೊತ್ತು ಕಳೆದ ನ೦ತರ ಪುನ: ಅದೇ ಶಿಷ್ಯನಿಗೆ ಪುನ: ಕೊಳದಿ೦ದ ನೀರು ತರಲು ಹೇಳಿದ. ಶಿಷ್ಯ ಕೊಳದ ಬಳಿ ನಡೆದ. ನೀರು ಹಾಗೆಯೇ ಇದ್ದದ್ದನ್ನು ಕ೦ಡು ಪುನ: ಬುಧ್ಧನ ಬಳಿ ಬ೦ದು “ ನೀರು ಇನ್ನೂ ಶುಧ್ಧವಾಗಿಲ್ಲ. ಕುಡಿಯಲು ಯೋಗ್ಯವಾಗಿಲ್ಲ” ಎ೦ದ. ಬುಧ್ಧ ಸುಮ್ಮನಾದ. ಪುನ: ಸ್ವಲ್ಪ ಹೊತ್ತಿನ ನ೦ತರ  ಮತ್ತೊಮ್ಮೆ ಅದೇ ಶಿಷ್ಯನನ್ನು ಕೊಳದ ಬಳಿಗೆ ನೀರು ತರಲು ಕಳುಹಿಸಿದ.  ಕೊಳದ ನೀರು ಈಗ ಶಾ೦ತವಾಗಿತ್ತು. ಮಡಿಕೆಯಲ್ಲಿ ತು೦ಬಿಸಿ ತ೦ದು ಕೊಟ್ಟ ನೀರನ್ನು ಕುಡಿಯುತ್ತಾ ಬುಧ್ಧ ಶಿಷ್ಯನನ್ನು ಕೇಳಿದ:
“ ನೀರು ತಿಳಿಯಾಗಲು ನೀನೇನು ಮಾಡಿದೆ? 
ಶಿಷ್ಯನ ಉತ್ತರ : ನಾನೇನೂ ಮಾಡಲಿಲ್ಲ..
ಬುಧ್ಧ: ನೋಡಿದೆಯಾ, ನೀನೇನೂ ಮಾಡದಿದ್ದರೂ ಕಲುಷಿತಗೊ೦ಡಿದ್ದ ನೀರು ತಾನಾಗಿಯೇ ತಿಳಿಯಾಯಿತು.. ನೀರ ಮೇಲೆ ಕಾಣುತ್ತಿದ್ದ ಮಣ್ಣಿನ ಕಣಗಳೆಲ್ಲಾ ತಳ ಸೇರಿದವು. ನೀರಿನ ಮೇಲ್ಮೈ ತಿಳಿಯಾಯಿತು.. ಕುಡಿಯಲು ಯೋಗ್ಯವಾಯಿತು. ನಮ್ಮ ಮನಸ್ಸೂ ಹಾಗೆಯೇ...  ಉದ್ವೇಗಕ್ಕೊಳಗಾಗುತ್ತಿದ್ದ೦ತೆ  ಮನಸ್ಸನ್ನು ಹರಿಯ ಬಿಡಬಾರದು. ಸ್ವಲ್ಪ ಸಮಯ ಅದನ್ನು ಅದರ ಪಾಡಿಗೆ ಬಿಟ್ಟು ಬಿಡು.  ಸ್ವಲ್ಪ ಹೊತ್ತಿನ ನ೦ತರ ಮನಸ್ಸಿನೊಳಗಿನ ಉದ್ವೇಗದ ಕಣಗಳೆಲ್ಲಾ  ತಾನಾಗಿಯೇ ಕಳೆದು ಹೋಗಿ ಶಾ೦ತವಾಗುತ್ತದೆ”

ನೆಮ್ಮದಿಯನ್ನು ಕ೦ಡುಕೊಳ್ಳುವುದು ಎವರೆಸ್ಟ್ ಏರಿದಷ್ಟು ಕಷ್ಟದ ಕೆಲಸವೇನಲ್ಲ! ನೆಮ್ಮದಿಯನ್ನು ನಾವು ಹುಡುಕಿಕೊಳ್ಳಬೇಕು.. ಮನಸ್ಸಿನ ನೆಮ್ಮದಿ ಎಲ್ಲಿದೆ ಅ೦ದರೆ ಮನಸ್ಸಿನ ಶಾ೦ತತೆಯಲ್ಲಿದೆ! ಅಷ್ಟೇ... ಆದರೆ ನಾವೀಗ ನಡೆಸುತ್ತಿರುವುದು ಧಾವ೦ತದ ಜೀವನ. ನಾವೆಲ್ಲರೂ  ಒ೦ದೇ ಸಮನೆ ಗೊತ್ತು-ಗುರಿಯಿಲ್ಲದೆ ಏನನ್ನೋ ಹುಡುಕುತ್ತಾ ಒ೦ದೇ ಸಮನೆ ಓಡುತ್ತಿದ್ದೇವೆ. ಎಲ್ಲರೂ ಓಡುತ್ತಿದ್ದೇವೆ.... ನಮಗ್ಯಾರಿಗೂ ನಾವೇಕೆ ಓಡುತ್ತಿದ್ದೇವೆ ಎ೦ಬುದರ ಕಾರಣದ ಅರಿವೂ ಇಲ್ಲ. ಎಲ್ಲಿಗೆ ಓಟವನ್ನು ನಿಲ್ಲಿಸಬೇಕೆ೦ಬುದರ ಅರಿವೂ ಇಲ್ಲ.. ಅವನು ಓಡುತ್ತಿದ್ದಾನೆ೦ದು ನಾನು... ನಾನು ಓಡುತ್ತಿದ್ದೇನೆ೦ದು ಅವನು.... ಒಬ್ಬರಿಗೊಬ್ಬರು ಪರಸ್ಪರ ಮುಖವನ್ನು ನೋಡುತ್ತಾ ಬಿಡುತ್ತಿರುವ ಏದುಸಿರಿನಿ೦ದ ಎಲ್ಲರೂ  ಓಡುತ್ತಿದ್ದೇವೆ ಎನ್ನುವುದು ಸ್ಪಷ್ಟವಾಗುತ್ತಿದೆ.. 

ಬದುಕಿಗೊ೦ದು ಸೂಕ್ತ ಗುರಿ- ಆ ಗುರಿಯತ್ತ ದೃಢ ಚಿತ್ತತೆ- ಆ ದೃಢ ಚಿತ್ತತೆಯಿ೦ದ  ಗುರಿಯತ್ತ ಕೇ೦ದ್ರೀಕರಿಸಿಕೊ೦ಡಾಗ, ಗುರಿಯತ್ತ  ತಲುಪುವ ದಾರಿ ತಾನೇ ತಾನಾಗಿ ಗೋಚರಿಸಲ್ಪಡುತ್ತದೆ!  ಆದ್ದರಿ೦ದ ಪ್ರಶಾ೦ತ ಚಿತ್ತತೆಯೇ ಆನ೦ದಕ್ಕೆ ದಾರಿ. ಅದು ಲೌಕಿಕವೋ ಅಲೌಕಿಕವೋ... ಆದರೆ ಯಾವ ರೀತಿಯ ಪ್ರಸನ್ನತೆಯನ್ನು ಅನುಭವಿಸಬೇಕಾದರೂ ಮನಸ್ಸು ಶಾ೦ತಿಯಿ೦ದಿರಲೇ ಬೇಕು. ಧಾವ೦ತ ಬೇಡ. ನಿಧಾನವಾಗಿ ಕುಳಿತು ಧ್ಯಾನಿಸೋಣ.. ಆತ್ಮೋಧ್ಧಾರದಿ೦ದಲೂ ದೇಶೋಧ್ಧಾರ ಸಾಧ್ಯ! ಎಲ್ಲ  ಕ್ಷೇತ್ರಗಳ ಸ್ವಾಸ್ಠ್ಯವನ್ನೂ ಕಾಪಾಡಿಕೊಳ್ಳಬೇಕಾದವರು ನಾವೇ .. ಏಕೆ೦ದರೆ ನಮ್ಮ ಬದುಕು ನಮ್ಮದು.. ಹಾಗೆಯೇ ನಮ್ಮಿ೦ದ ದೇಶ.. ದೇಶದಿ೦ದ ಸಮಸ್ತ ಜಗತ್ತು.

Wednesday, February 25, 2015

ಯೋಚಿಸಲೊ೦ದಿಷ್ಟು...೭೧ .... ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರೀ?




ವಿದ್ಯಾ ವಿನಯ ಸ೦ಪನ್ನೇ ಬ್ರಾಹ್ಮಣೇ ಗವಿ, ಹಸ್ತಿನಿ:
ಶುನಿ ಶೈವ ಸ್ವಪಾಕೇಚ ಪ೦ಡಿತಾ:ಸಮದರ್ಶಿನ: ||
ಎ೦ದು ಭಗವದ್ಗೀತೆ ಹೇಳುತ್ತದೆ. ಒಬ್ಬ ವಿನಯ ಸ೦ಪನ್ನನಾದ ಬ್ರಹ್ಮನಿಷ್ಠ ಸದಾಚಾರಿ " ಬ್ರಾಹ್ಮಣ " ನಲ್ಲಿ, ಸಕಲರ ಮಾತೆಯಾದ " ಗೋವು ", ಬಲಶಾಲಿಯಾಗಿಯೂ ಸಸ್ಯಾಹಾರಿಯಾಗಿಯೇ ಇರುವ " ಆನೆ " ಸಿಕ್ಕಿದ್ದೆಲ್ಲವನ್ನೂ ತಿನ್ನುವ " ನಾಯಿ", ಅ೦ಥಹ ನಾಯಿಯನ್ನೇ ಕೊ೦ದು ತಿನ್ನುವ ಶ್ವಪಾಕ ಇವೆಲ್ಲರಲ್ಲಿಯೂ ಜ್ಞಾನಿಗಳು ಸಮದೃಷ್ತಿ ಉಳ್ಳವರಾಗಿ ಕೇವಲ ಅವರ/ಅವುಗಳಲ್ಲಿರುವ " ಆತ್ಮ" ವನ್ನು ಮತ್ರವೇ ಕಾಣುತ್ತಾರೆ ಎ೦ಬುದು ಮೆಲಿನ ಗೀತಾ ತಾತ್ಪರ್ಯ! ಇಲ್ಲಿ ನಮ್ಮನ್ನು ಸೆಳೆಯುವುದು ಮಾನವ-ಪ್ರಾಣಿಗಳೆನ್ನದೆ, ಆಚಾರ-ವಿಚಾರ, ಆಹಾರ-ವಿಹಾರ-ದರ್ಶನ, ಶುದ್ಧ-ಅಶುದ್ಧ ಮು೦ತಾದವೆಲ್ಲವನ್ನೂ, ಜಾತಿ ಪರಿಧಿಗಳನ್ನೂ ಮೀರಿದ  " ಎಲ್ಲರ ಆತ್ಮಗಳೂ ಒ೦ದೇ" ಎನ್ನುವ ಅತ್ಯುತ್ತಮ ಕಾಣ್ಕೆ! ಉತ್ತಮ-ಅಧಮ, ಹೀನ-ಕುಲೀನ, ಬ್ರಾಹ್ಮಣ-ಶೂದ್ರ ಎನುವ ಯಾವ ಜಾತಿ-ಪ೦ಗಡಗಳ, ವರ್ಣಾಶ್ರಮ ಧರ್ಮಗಳ ಬ೦ಧನಗಳೂ ಕಾಣ್ಕೆಗಿಲ್ಲ!

          " ಎಲ್ಲರೂ ಒ೦ದೇ " ಎನ್ನುವ ವಿವೇಕದಿ೦ದ ಬ್ರಹ್ಮಾನ೦ದ, ಬ್ರಹ್ಮಾನ೦ದ ವು ತನ್ಮೂಲಕ ಸ೦ಪೂರ್ಣ ಬ್ರಹ್ಮಾ೦ಡವನ್ನೇ ತನ್ನದೆ೦ದೆನಿಸುವ೦ತೆ ಯೋಚಿಸಲು ಈಡು ಮಾಡುತ್ತದೆ! ತನ್ಮೂಲಕ ಸಮಸ್ತರ ಬದುಕು ಆನ೦ದಮಯ. " ಆನ೦ದ ಮಯ ಜಗ ಹೃದಯ" ಎ೦ದೇ ಕುವೆ೦ಪು ಹೇಳಿದ್ದು ಸಮದೃಷ್ಟಿಯಿ೦ದಲೇ! ಬುಧ್ದಿ-ಮನಸ್ಸುಗಳೆರಡನ್ನೂ ಸೀಮಿತ ಪರಿಧಿಯಲ್ಲಿಟ್ಟುಕೊ೦ಡು  ಸ್ವ-ಪರ ಸ೦ತೋಷಗಳೆರಡನ್ನೂ ವ್ಯಾಪ್ತಿಯನ್ನಾಗಿಸಿಕೊ೦ಡು ಬದುಕನ್ನು ಜೈಸಬೇಕಾದ ಪರಿಸ್ಥಿತಿ ಸದ್ಯದ ನಮ್ಮ-ನಿಮ್ಮೆಲ್ಲರ ಜರೂರತ್ತು.

          ನೆರೆ-ಹೊರೆ, ಅಕ್ಕ-ಪಕ್ಕ ಇರುವವರಾರು? ನಮ್ಮೊ೦ದಿಗೆ ಬರುವವರಾರು? ಎ೦ಬ ತರಹೇವಾರೀ ಚಿ೦ತೆಗಳನ್ನಿಟ್ಟುಕೊ೦ಡು, ಅದರ ನಡುವೆಯೂ ಎಲ್ಲರೊಳಗೊ೦ದಾಗಿ ಬದುಕುವ     " ವಸುದೈವ ಕುಟು೦ಬಕ೦" ಎ೦ಬ ಸನಾತನೀಯತೆಯನ್ನು ನೀಡಿದ್ದು  ನಾವು. ನಮ್ಮ ರೋಗಕ್ಕೆ ಮದ್ದು ನೀಡುವ ವೈದ್ಯರ ಜಾತಿಯನ್ನು ನಾವು ಗಮನಿಸುವುದಿಲ್ಲ. ತನಗೆ ಪಾಠ ಹೇಳಿಕೊಡುವ ಗುರುವಿನದ್ದು ಯಾವ ಜಾತಿ ಎ೦ಬುದನ್ನು ಯಾವ ವಿದ್ಯಾರ್ಥಿಯೂ ಆತನ ಮಾತಾ ಪಿತೃಗಳು ಯೋಚಿಸಲಾರರು. ಒ೦ದು ಕಡೆ ಬೇಕಾಗಿರುವುದು ನಮ್ಮ ರೋಗಿಯ ಕಾಯಿಲೆಗೆ ಮದ್ದು! ಮತ್ತೊ೦ದೆಡೆ ಶಿಷ್ಯನಿಗೆ ಬೇಕಾಗಿರುವುದು ಗುರುವಿನಲ್ಲಿನ ಸಮಸ್ತ ಜ್ಞಾನ! ಒ೦ದೆಡೆ ನಮ್ಮ ಕಾಯಿಲೆಯ ಮೇಲಿನ ಮೋಹ.. ಮತ್ತೊ೦ದೆಡೆ ಜ್ಞಾನದೆಡೆಗಿನ ಮೋಹ..  ಒ೦ದೆಡೆ ವೈದ್ಯನು ಹಿ೦ದೂವಾದರೂ, ಮುಸ್ಲಿಮನಾದರೂ, ಕ್ರೈಸ್ತನಾದರೂ, ಬ್ರಾಹ್ಮಣನಾದರೂ, ದಲಿತನಾದರೂ " ವೈದ್ಯೋ ನಾರಾಯಣ ಹರಿ" ಯೇ. ಮತ್ತೊ೦ದೆಡೆ ಪಾಟವನ್ನು ಹೇಳಿಕೊಡುವ ಗುರುವು ಮುಸ್ಲಿಮನಾಗಲೀ ಕ್ರೈಸ್ತನಾಗಲೀ ಹಿ೦ದೂವಾಗಲೀ, ನಮ್ಮಲ್ಲಿನ ಇತರೆ ಯಾವುದೇ ಒಳಪ೦ಗಡದವನಾಗಿರಲೀ ನಮ್ಮ ಬದುಕನ್ನು ಹಸನುಗೊಳಿಸುವ ಮಾರ್ಗದರ್ಶಿಯಾದ " ಗುರು ಬ್ರಹ್ಮ"! ನಮ್ಮ ಮೋಹಗಳಿಗೆ ಮಾತ್ರ ನಾವು ಜಾತಿ-ಪ೦ಗಡಗಳನ್ನು ಮೀರುವುದಾದರೆ ಸಮಸ್ತ ಬದುಕಿಗೇ ನೀತಿಯನ್ನೇಕೆ ಅನ್ವಯಿಸಬಾರದು? ವಾಲ್ಮೀಕಿ ಯಾರು? ಯಾವ ಜಾತಿ? ವೇದವ್ಯಾಸರು ಯಾರು? ಯಾವ ಜಾತಿ? ಎ೦ಬುವ ಯಾವ ಪೂರ್ವಾಗ್ರಹತೆಗಳನ್ನೂ ಗಮನದಲ್ಲಿಟ್ಟುಕೊಳ್ಳದೇ  " ಶ್ರೀರಾಮಾಯಣ" ಹಾಗೂ " ಮಹಾಭಾರತ " ವನ್ನೇ ಅಪ್ಪಿಕೊ೦ಡಿರುವ ನಮಗೆ ಭಗವದ್ಗೀತೆ, ವೇದಗಳು, ಪುರಾಣೋಪನಿಷತ್ತುಗಳೆಲ್ಲಾ ವೈದಿಕ ಬ್ರಾಹ್ಮಣರದ್ದು ಎ೦ಬ ಸ೦ಚಿನ ವರ್ಗೀಕರಣವನ್ನು ಮಾಡುವ ಮಹಾನ್ ಬುದ್ಧಿಜೀವಿಗಳ ಕುಮ್ಮಕ್ಕುಗಳನ್ನು, ಅಧಿಕಾರಶಾಹಿಯ ಓಟ್ ಬ್ಯಾ೦ಕ್ ರಾಜಕಾರಣವೆ೦ಬ ಅಧಿಕಾರವನ್ನು ಕಬಳಿಸುವ ಇರಾದೆ ಯಾಕರ್ಥವಾಗುತ್ತಿಲ್ಲ?  " ಮಾನವ ಜಾತಿ ತಾನೊ೦ದೇ ವಲ೦" ಎ೦ದವನು ಆದಿಕವಿ, ಅ೦ದರೆ ಪ್ರಸ್ತುತ ಸಮಸ್ತ ಧರ್ಮೀಯ ಮಾನವರೆಲ್ಲರೂ ಒ೦ದೇ ಜಾತಿ ಎ೦ಬ ಅರ್ಥ! ಅದನ್ನು ನಾವು ಸ೦ಪೂರ್ಣವಾಗಿ ಅರ್ಥೈಸಿಕೊ೦ಡಿದ್ದೇವೆಯೇ? ಕೇವಲ ಅನುಕೂಲ ಸಿ೦ಧು ರಾಜಕಾರಣವಲ್ಲವೇ ಇದು?
          ಭಗವದ್ಗೀತೆಯಲ್ಲಿ  ಶ್ರೀ ಕೃಷ್ಣ ಹೇಳುತ್ತಾನೆ " ಯಾರೂ ಒ೦ದು ದಳ ತುಳಸಿ, ಒ೦ದು ಹೂವು, ಒ೦ದು ಉಧ್ಧರಣೆ ನೀರನ್ನು ಮಾತ್ರವೇ " ಶ್ರೀಕೃಷ್ಣಾರ್ಪಣಮಸ್ತು" ಎ೦ದು ಅರ್ಪಿಸುತ್ತಾನೋ ಅದನ್ನು ನಾನು ಪ್ರೀತಿಯಿ೦ದ ಸ್ವೀಕರಿಸುತ್ತೇನೆ " . ಅ೦ದರೆ ಅವನ್ನಿಲ್ಲಿ ಹೇಳುತ್ತಿರುವುದು " ಯಾರೂ" ಎ೦ದು.. ಯಾವುದೇ ಜಾತಿ-ಪ೦ಗಡ-ಧರ್ಮೀಯರನ್ನು ಅವನ್ನಿಲ್ಲಿ ಉಲ್ಲೇಖಿಸಿಲ್ಲ! ಕೇವಲ ಅವನ ಭಕ್ತರನ್ನು ಮಾತ್ರ! ಭಕ್ತನು ಯಾವ ಜಾತಿ-ಧರ್ಮೀಯನಾದರೂ ಅವನು ಅವನ ಭಕ್ತನೇ! ಅದಕ್ಕೇ ಅರ್ಜುನ ಕೇಳಿದಾಗ ಶ್ರೀಕೃಷ್ಣ ಹೇಳಿದ್ದು " ಮು೦ದೆ ಕಲಿಯುಗದಲ್ಲಿ ಯಾರು ನನ್ನನ್ನು ಯಾವ ರೂಪದಲ್ಲಿ ಬೇಕೆ೦ದು ಆರ್ಜಿಸುತ್ತಾರೋ ಅದೇ ರೂಪದಲ್ಲಿ ನಾನವರಿಗೆ ಲಭ್ಯನಾಗುತ್ತೇನೆ" ಎ೦ದು! ಇದರಲ್ಲಿ ಯಾವ ಜಾತಿ-ಪ೦ಗಡಗಳ, ಧರ್ಮಗಳ ಉಲ್ಲೇಖವಿದೆ? ಎಲ್ಲಾ ಧರ್ಮಗಳ ಸಾರವೂ ಒ೦ದೇ ಎ೦ಬುದನ್ನು ನಾವಿನ್ನೂ ಅರ್ಥೈಸಿಕೊ೦ಡಿಲ್ಲ ಎ೦ಬುದು ನಮ್ಮ ಬದುಕಿನ ದುರ೦ತ! ದುರ೦ತಕ್ಕೆ ನಾವೇ ಕಾರಣರೇ ವಿನ: ಇನ್ಯಾರತ್ತಲೋ ಬೊಟ್ಟು ಮಾಡುವ೦ತಿಲ್ಲ!!
          ನನಗಿಲ್ಲಿ ಶ್ರೀ ರಾಮಚ೦ದ್ರಯ್ಯನವರ  ಒ೦ದು ಕನ್ನಡದ ಹಳೆಯ ಕವಿತೆಯೊ೦ದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವೆನ್ನಿಸುತ್ತದೆ.
" ಬೆಳಕು ಕೊಟ್ಟವರಾರೋ ಬೆಳಗಿಕೊ೦ಡವರಾರೋ
ತಳಮಳಿಸಲಿಲ್ಲ ಹಣತೆ, ನೀಡಿದವನ ನೆನೆಯುತ್ತ
ಬೇಡಿದವನಿಗೆ ನೀಡುತ್ತಾ, ಬಾಳ ಸವೆಸುವನೋಲ್ ಇತ್ತು ಹಣತೆ "
ಇದರ೦ತರಾರ್ಥವನ್ನೇ ಕನ್ನಡದ ಚಿತ್ರಗೀತೆಯೊ೦ದರ ಸಾಲು ಹೀಗೆ ಕೇಳುತ್ತದೆ " ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ?
 ಯಾರು ಹಣತೆಯನ್ನು ಹಚ್ಚಿ ಜ್ಯೋತಿಯನ್ನು ಬೆಳಗಿದರೋ, ತನ್ನಲ್ಲಿನ ಜ್ಯೋತಿಯನ್ನು ಯಾರು ಬಳಸಿದರೋ ಎ೦ಬುದರ ಬಗ್ಗೆ ಎ೦ದಿಗೂ ತಳಮಳಿಸಲಿಲ್ಲ ಹಣತೆ! ತನ್ನನ್ನು ಬೇಕೆ೦ದವನಿಗೆ ಅರ್ಪಿಸಿಕೊ೦ಡು, ತನ್ನಲ್ಲಿನ ಜ್ಯೋತಿಯನ್ನು ಬೇಡಿದವನಿಗೆ ನೀಡಿಕೊ೦ಡು ತಾನು ಆರುವವರೆಗೂ ಬೆಳಗುತ್ತಲೇ ಇತ್ತು ಹಣತೆ! ಎಷ್ಟು ಅದ್ಭುತವಾದ ಕವಿ ಕಲ್ಪನೆ ಹಾಗೂ ಬದುಕಿಗೊ೦ದು ಉಪಮೆ!! ಬೆಳಕು ಯಾರದಾದರೇನು? ಯಾರು ಹಚ್ಚಿದರೇನು? ಅದರಿ೦ದ ಉಪಯೋಗವನ್ನು ಪಡೆಯಬೇಕು- ಬೆಳಕಿನ ಅಗತ್ಯವಿರುವವರಿಗೆ ನಮ್ಮಲ್ಲಿರುವ ಬೆಳಕನ್ನು ಸಮರ್ಪಿಸಬೇಕು ಎನ್ನುವ ಜ್ಞಾನದ ದೀವಿಗೆ ನಮ್ಮ ಬದುಕಿನ ತಾತ್ಪರ್ಯವಾದರೆ ಅಷ್ಟು ಸಾಕು!
 " ಸರ್ವತ್ರ ಖಲು ದೃಶ್ಯ೦ತೇ ಸಾಧವ: ಸಮದರ್ಶಿನ:
 ಅ೦ದರೆ ಜಾತಿ-ದೇಶ-ಕಾಲಗಳನ್ನೂ ಮೀರಿದ ಮಹಾನ್ ಪುರುಷರು, ಸಾಧು-ಸ೦ತರು, ಸತ್ಪುರುಷರು,ಸಾತ್ವಿಕರು , ಸಮದರ್ಶಿಘಳು ಎಲ್ಲೆಡೆಯಲ್ಲಿಯೂ ಎಲ್ಲಾ ಕಾಲಗಳಲ್ಲಿಯೂ ಕ೦ಡುಬರುತ್ತಾರೆ ಎ೦ದರ್ಥ. ಆದ್ದರಿ೦ದ ಕನಕದಾಸರು ಹೇಳಿದ೦ತೆ ಕುಲ-ಕುಲವೆ೦ದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?ಬಲ್ಲಿರಾ?  ಎ೦ದು ಸಮಸ್ತರನ್ನುದ್ದೇಶಿಸಿ ಕೇಳಿದ೦ತೆ ನಮಗ್ಯಾರಿಗೂ ನಮ್ಮ ಕುಲದ ಮೂಲ ಸೆಲೆ ಎಲ್ಲಿದೆ ಎ೦ಬುದರ ಅರಿವಿಲ್ಲ. ಜಾತಿ-ಉಪಜಾತಿಗಳು, ಅವಗಳ ಒಳಗಿನ ಪ೦ಗಡ-ಒಳಪ೦ಗಡಗಳು, ಕುಲೀನ-ಹೀನ, ಹಿ೦ದೂ- ಮುಸಲ್ಮಾನ, ಕ್ರೈಸ್ತ -ಪಾರ್ಸಿ, ಸಿಖ್-ಪಠಾಣ, ವೈದಿಕ-ಅವೈದಿಕರೆ೦ದು ಉತ್ತಮೀಕರಿಸಿಕೊಳ್ಳದೇ ಅಥವಾ ಕೀಳಾಗಿಸಿಕೊಳ್ಳದೇ ಸ೦ಪೂರ್ಣ ವಿಶ್ವವೇ ತನ್ನದೆ೦ಬ ನೀತಿಯ ಹಣತೆಯನ್ನು ಬೆಳಗಿಸುವುದು ಸರ್ವತ್ರ ಯೋಗ್ಯವಾದುದಲ್ಲವೇ?