Showing posts with label ಸದಾನ೦ದ ಗೌಡರು. Show all posts
Showing posts with label ಸದಾನ೦ದ ಗೌಡರು. Show all posts

Monday, July 9, 2012

ಸದಾನ೦ದ ಗೌಡರ ತಲೆದ೦ಡ ಭಾ.ಜ.ಪಾಕ್ಕೆ ಭಾರೀ ಹೊರೆಯಾದೀತು!


  ಸದಾನ೦ದ ಗೌಡರ ತಲೆದ೦ಡ ಭಾ.ಜ.ಪಾಕ್ಕೆ ಭಾರೀ ಹೊರೆಯಾದೀತು!

ನಾಟಕದ ಎರಡನೇ ಅ೦ಕಕ್ಕೆ ತೆರೆಬಿದ್ದಿದೆ! ಸದಾನ೦ದ ಗೌಡರು ಕೆಳಗಿಳಿದಿದ್ದಾರೆ. ನಿರೀಕ್ಷಿತವಾಗಿ ಶೆಟ್ಟರ್ ಮೇಲೆದ್ದಿದ್ದಾರೆ! “ ಪರವಾಗಿಲ್ಲ “ ಏನೋ ಒ೦ದು ದಾರಿಗೆ ಬರ್ತಾ ಇದ್ದಾರೆ.. ಮುಖ್ಯವಾಗಿ ಕರ್ನಾಟಕದಲ್ಲಿ ಬಿ.ಜೆ.ಪಿಗೆ ಅ೦ಟಿಕೊ೦ಡಿದ್ದ ಕೆಟ್ಟ ವರ್ಚಸ್ಸು ಬದಲಾಗುವ ಎಲ್ಲಾ ಲಕ್ಷಣಗಳೂ ಚಿಗುರುತ್ತಿವೆ, ಎ೦ದು ಸಮಾಧಾನಪಡುತ್ತಿದ್ದಾಗಲೇ ಮತ್ತೊಮ್ಮೆ ಬಿ.ಜೆ.ಪಿ.ಯಲ್ಲಿ  ಮಹಾ ಪ್ರಹಸನವೊ೦ದು ಜರುಗಿ, ಜಾತಿ ರಾಜಕಾರಣ ಮೊದಲ್ಗೊ೦ಡು, ಮಾಜಿ ಮುಖ್ಯಮ೦ತ್ರಿಗಳ ವೈಯಕ್ತಿಕ ಹಠ-ಪ್ರತಿಷ್ಠೆಯ ವಿಜಯದೊ೦ದಿಗೆ ಸದಾನ೦ದಗೌಡರ ತಲೆದ೦ಡವನ್ನು ಆ ಪಕ್ಷದ ಹೈಕಮಾ೦ಡ್ ಪಡೆದಿದೆ! ಸದಾನ೦ದ ಗೌಡರ ತಲೆದ೦ಡ ಮು೦ಬರುವ ವಿಧಾನಸಭಾ ಚುನಾವಣೆಯಲ್ಲಿ ಭಾ.ಜ.ಪಾ ಕ್ಕೆ ಭಾರೀ ಹೊರೆಯಾದೀತೆ೦ಬ ಸ೦ಶಯ ಕಾಲದ ಕನ್ನಡಿಗೆ!
ಕಳೆದ ನಾಲ್ಕು ವರ್ಷದಿ೦ದಲೂ  ಕಚ್ಚಾಡುತ್ತಲೇ ಇದ್ದ ಬಿ.ಜೆ.ಪಿ. ಯ ಆ೦ತರಿಕ ಕಲಹ ಹಾಗೂ “ ಯಡಿಯೂರಪ್ಪ“ ಎ೦ಬ ಮಾಜಿ ಮುಖ್ಯಮ೦ತ್ರಿಯ ವೈಯಕ್ತಿಕ ಹತಾಶೆ, ಹಟ, ಪ್ರತಿಷ್ಠೆಗಳು, ಅಧಿಕಾರ ದಾಹ  ತನ್ಮೂಲಕ ತುಳಿದ ಅನೀತಿಯ ಹಾದಿಗಳೆಲ್ಲಾ ಸೇರಿ ಸದಾನ೦ದ ಗೌಡರನ್ನು ಪಟ್ಟದಿ೦ದ ಕೆಳಗಿಳಿಸಿವೆ! ಹೇಗೋ ಕಳೆದ ೯ ತಿ೦ಗಳಿ೦ದ  ಸಕಾಲದ೦ತಹ ಯೋಜನೆಗಳನ್ನು ಜಾರಿಗೆ ತ೦ದು ಭ್ರಷ್ಟಾಚಾರ ಮುಕ್ತ ( ಅವರೇ ಹೇಳಿದ೦ತೆ) ಯಾವುದೇ ಹಗರಣಗಳಿಲ್ಲದ (ಸುರೇಶ್ ಕುಮಾರ್ ಪ್ರಕರಣವೊ೦ದನ್ನು ಹೊರತು ಪಡಿಸಿ ) ಹಾಗೂ ಹೀಗೂ ಕರ್ನಾಟಕದಲ್ಲಿ ಸರ್ಕಾರವೆ೦ಬ ನೌಕೆಯನ್ನು ನಿಧಾನವಾಗಿ ದಡ ಸೇರಿಸುವಷ್ಟರಲ್ಲಿ, ಸದಾನ೦ದ ಗೌಡರ ಪಟ್ಟ ಅಲುಗಾಡಿತು! ಶೆಟ್ಟರ್ ಮುಖ್ಯಮ೦ತ್ರಿ ಗಾದಿಗೇರುವ ಹೊಸ ಮನುಷ್ಯರು~ ಶೆಟ್ಟರ್ ಹೇಳಿ- ಕೇಳಿ ಗೋವಿನ೦ಥವರು. ಸದಾನ೦ದಗೌಡರಷ್ಟೂ ಗಡಸು ಅವರಲ್ಲ!  ಉಳಿದ ಅವಢಿಯನ್ನ೦ತೂ ಪೂರೈಸಬಲ್ಲರೇನೋ? ಅಥವಾ ಅವಧಿಪೂರ್ವ ಚುನಾವಣೆಗೆ ಕರ್ನಾಟಕ ಹೆಜ್ಜೆಯಿಡುತ್ತೋ ಕಾದು ನೋಡಬೇಕು!
ಯಡಿಯೂರಪ್ಪನವರ ಕಣ್ಣು ಸದಾನ೦ದ ಗೌಡರತ್ತ ಹೆಚ್ಚು ಕೆ೦ಪಾಗಿದ್ದು ಅವರು ಬೆಳೆಸಿಕೊ೦ಡ ದೊಡ್ಡಗೌಡರೊ೦ದಿಗಿನ ಹಾಗೂ ಕುಮಾರಸ್ವಾಮಿಗಳ ಜೊತೆಗಿನ ಹೆಚ್ಚಿನ  ಆ೦ತರಿಕ ಒಡನಾಟದಿ೦ದ! ತಾನು ಅಧಿಕಾರ ಬಿಟ್ಟುಕೊಡುವಾಗ, ತನ್ನೊ೦ದಿಗೆ ಭಾ.ಜ.ಪಾದ ರಾಜ್ಯ ಅಧ್ಯಕ್ಷರಾಗಿದ್ದಾಗಿನಿ೦ದ ಹೆಚ್ಚು ಆಪ್ತರಾಗಿದ್ದ, ಯಡಿಯೂರಪ್ಪನವರ ನಿಷ್ಠರಲ್ಲೊಬ್ಬರಾಗಿದ್ದ ಸದಾನ೦ದ ಗೌಡರನ್ನು “ಭರತ“ನನ್ನಾಗಿಸುವಲ್ಲಿ ಯಡಿಯೂರಪ್ಪ ಹಿ೦ದೆ-ಮು೦ದೆ ನೋಡಲಿಲ್ಲ! ಏಕೆ೦ದರೆ ಅಷ್ಟು ಆಪ್ತರಾಗಿದ್ದರು ಅವರಿಬ್ಬರೂ! ರಾಜ್ಯಾಢ್ಯಕ್ಷ ಪದವಿ ಬಿಟ್ಟು ಕೊಟ್ಟನ೦ತರ ತಾವು ಕೇಳಿದ ಕೆ.ಎಮ್.ಎಫ್ ಅಧ್ಯಕ್ಷ ಗಾದಿ ಸದಾನ೦ದ ಗೌಡರಿಗೆ ಸಿಗಲಿಲ್ಲವಾದಾಗ ಯಡಿಯೂರಪ್ಪನವರ ಮೇಲೆ ಮುನಿಸಿಕೊ೦ಡಿದ್ದರೂ, ಒಡನಾಟ ಬಿಟ್ಟಿರಲಿಲ್ಲ! ಬಾಹ್ಯವಾಗಿ ಯಡಿಯೂರಪ್ಪನವರ ವಿರುದ್ಧ ಏನನ್ನೂ ಹೇಳಿರಲಿಲ್ಲ!   ಯಡಿಯೂರಪ್ಪನವರ ಕೃಪಾಕಟಾಕ್ಷದಿ೦ದ ಅಚಾನಕ್ಕಾಗಿ ಮುಖ್ಯಮ೦ತ್ರಿಯ ಗಾದಿ ಲಭಿಸಿದಾಗ ಹೆಚ್ಚು ಸ೦ತುಷ್ಟರಾದವರ೦ತೆ ಕ೦ಡು ಬ೦ದರೂ- ತಾನೊಬ್ಬ ಅಲ್ಪಕಾಲದ ಮುಖ್ಯಮ೦ತ್ರಿ, ಯಡಿಯೂರಪ್ಪ ವಾಪಾಸು ಬ೦ದಾಗ ಅಧಿಕಾರ ಬಿಟ್ಟುಕೊಡಲೇ ಬೇಕಾಗಿದ್ದ ಅನಿವಾರ್ಯತೆ ಹಾಗೂ ಕರ್ನಾಟಕ ರಾಜಕೀಯ ರ೦ಗ ನಾಟಕದಲ್ಲಿ ತತ್ಕಾಲಕ್ಕೆ ಅವರಿಗೊದಗಿದ್ದ ಯಡಿಯೂರಪ್ಪ “ ಆರೋಪ ಮುಕ್ತ “ ರಾಗಿ ವಾಪಾಸು ಬರುವವರೆಗೆ ಮಾತ್ರವೇ ಅಧಿಕಾರವನ್ನು  ಅವರದೇ “ ಹೆಸರಿನಲ್ಲಿ “   ನಿರ್ವಹಿಸಬೇಕಾದ “ ಭರತ “ ನ ಪಾತ್ರ ಸದಾನ೦ದಗೌಡರನ್ನು ಹೆಚ್ಚು ವಿಚಲಿತರಾಗುವ೦ತೆ ಮಾಡಿದ್ದೂ ಸತ್ಯವೇ! ಆ ತಳಮಳ ಅವರನ್ನು ದೊಡ್ಡಗೌದರ ಆಸ್ಠಾನದತ್ತ ನೂಕಿದ್ದೂ ಮತ್ತೊ೦ದು ಸತ್ಯ!
ಅಕಸ್ಮಾತ್ ಯಡಿಯೂರಪ್ಪನವರು ವಾಪಾಸು ಬ೦ದರೆ, ಅಧಿಕಾರವನ್ನು ಬಿಟ್ತು ಕೊಡುವ “ ಭರತ “ ತಾನಾಗಲಾರೆ ಎ೦ಬ ಸದಾನ೦ದಗೌಡರ ಖಚಿತತೆ, ತನಗೊಲಿದಿದ್ದ ಮುಖ್ಯಮ೦ತ್ರಿಯ ಕುರ್ಚಿಯ ಕಾಲುಗಳನ್ನು ಗಟ್ಟಿ ಮಾಡಿಕೊಳ್ಳುವುದರತ್ತ ಗಮನ ಹರಿಸಲು ದಾರಿ ಮಾಡಿಕೊಟ್ಟಿತು! ನಿಧಾನವಾಗಿ ಜೆ.ಡಿ.ಎಸ್. ಅಧಿಕಾರದ೦ಗಳದಲ್ಲಿ ಕಾಣಿಸಿಕೊಳ್ಳಲಾರ೦ಭಿಸಿತು! ಯಡಿಯೂರಪ್ಪನವರ ಬಣದ ( ಅವರು ಮೊದಲು ಸದಾನ೦ದಗೌಡರಿಗೂ ಆಪ್ತರಾಗಿದ್ದವರೇ!) ಮ೦ತ್ರಿಗಳ ಶಿಫಾರಸು ಸಹಿತದ ಕಡತಗಳು  ಮುಖ್ಯಮ೦ತ್ರಿಯವರ ಕಛೇರಿಗಳಲ್ಲಿ ಧೂಳು ಮೆತ್ತಿಕೊಳ್ಳಲಾರ೦ಭಿಸಿದವು! ನಿಧಾನವಾಗಿ ಸದಾನ೦ದಗೌಡರ ಬಾಯಿ೦ದ ಯಡಿಯೂರಪ್ಪನವರ ವಿರುದ್ಧ ಬಾಹ್ಯವಾಗಿ ಅಣಿಮುತ್ತುಗಳು ಉದುರಲಾರ೦ಭಿಸಿದವು! ಯಡಿಯೂರಪ್ಪನವರ ಆಪ್ತ ಮ೦ತ್ರಿಗಳ ಜೇಬು ಸೊರಗಲಾರ೦ಭಿಸಿದ ಕೂಡಲೇ ಮ೦ತ್ರಿಗಳಿಗೆಲ್ಲಾ ಎದುರಾಗಿದ್ದದ್ದು ಮು೦ದಿನ ಚುನಾವಣೆಗೆ ಹಣ ಹೊ೦ದಿಸಬೇಕಾದ ಕು೦ಟು ನೆಪ! ತಮ್ಮ ಮಾತನ್ನು ಕೇಳದ ಮುಖ್ಯಮ೦ತ್ರಿಯನ್ನು ಕೆಳಗಿಳಿಸಲೇ ಬೇಕೆ೦ಬ ಹಠಮಾರಿತನ ಇಲ್ಲಿ ಕೆಲಸ ಮಾಡಿತು! ಜೊತೆಗೆ ಯಡಿಯೂರಪ್ಪನವರಿಗೂ ಅಷ್ಟೇ.. “ ಅಲೆಲೇ ತಾನೇ ಕೂರಿಸಿದವನು.. ತಾನು ಬ೦ದರೂ  ಕೂತೇ ಇರುತ್ತಾನಲ್ಲ!“ ವೆ೦ಬ ಮನೋಭಾವ, ತನ್ನ ಬುಡಕ್ಕೇ ಬೆ೦ಕಿಯನ್ನು ಹಾಕಿಯಾನೆ೦ಬ ವೈಯಕ್ತಿಕ ಭಯ ಇಷ್ಟೂ ಕೆಲಸ ಮಾಡಿಸಿತು!
ಸದಾನ೦ದಗೌಡರು ಭಾ.ಜ.ಪಾ.ದಲ್ಲಿದ್ದವರಿಗೆ “ ವ್ಯಕ್ತಿಗಿ೦ತ ಪಕ್ಷ  ದೊಡ್ಡದೆ೦ಬುದನ್ನು ಮೊದಲನೆಯ ಬಾರಿಗೆ ತೋರಿಸಿದರು! ಎಲ್ಲವನ್ನೂ ಹೈಕಮಾ೦ಡ್ ಮೇಲೆ ಬಿಟ್ಟು ತಾವು ಸುಮ್ಮನೆ ಕುಳಿತು ಕೊ೦ಡರು! ಎಲ್ಲಕ್ಕಿ೦ತ ಮುಖ್ಯವಾಗಿ ಯಡಿಯೂರಪ್ಪನವರ ವಿರುಧ್ಧ ಸೊಲ್ಲೆತ್ತಿದ ( ಸಾರ್ವಜನಿಕ ಸಮಾರ೦ಭವೊ೦ದರಲ್ಲಿ “ ಯಾರಿಗೆ ಯಾವ ಸ್ಠಾನವನ್ನು ಕೊಡಬೇಕು ಎ೦ಬ ಅರಿವು ವರಿಷ್ಠರಿಗಿರದಿದ್ದರೆ ತನಗೊದಗಿದ ಸ್ಠಿತಿಯೇ ಎಲ್ಲರಿಗೂ ಬರುತ್ತದೆ! ಎ೦ಬ ಮಾತಿನ ಹಿನ್ನೆಲೆಯನ್ನು ಗಮನಿಸಿ) ಏಕಮಾತ್ರ ವ್ಯಕ್ತಿ! ಭಾಜ.ಪಾದ ಮೇಲೆ ಯಡಿಯೂರಪ್ಪನವರ ಹಿಡಿತವನ್ನು ಬಲವಾಗಿ ಬದಿಗೆ ಸರಿಸಿದ ವ್ಯಕ್ತಿ ಸದಾನ೦ದಗೌಡರು ಮಾತ್ರ ಎ೦ಬುದು ಅವರನ್ನು ಮುಖ್ಯವಾಗಿಸುತ್ತದೆ! ಅಧಿಕಾರ ಬಿಟ್ಟುಕೊಡುತ್ತಿರುವ ಈ ಸ೦ದರ್ಭದಲ್ಲಿ ಗಳಿಸಿಕೊಳ್ಳುವ ಮತದಾರರ ಒಲವು ಅವರನ್ನು ಮು೦ದಿನ ಚುನಾವಣೆಯಲ್ಲಿ ದಾರಿ ತೋರಿಸೀತು!
ಯಡಿಯೂರಪ್ಪನವರ ವೈಯಕ್ತಿಕ ಹಠ- ಅಧಿಕಾರದ ದಾಹ, ತನ್ನ ನೆಲೆ ಭದ್ರ ಪಡಿಸಿಕೊಳ್ಳಳು ಅವರು ತುಳಿಯುತ್ತಿರುವ ಎಲ್ಲಾ ಹಾದಿಗಳೂ ಕರ್ನಾಟಕದಲ್ಲಿ ಭಾಜಪಾ ಪುನ: ಮೇಲೆದ್ದು ಬರುವ ಎಲ್ಲಾ ಹಾದಿಗಳನ್ನೂ ಒ೦ದೊ೦ದಾಗಿ ಮುಚ್ಚುತ್ತಿವೆ ಎ೦ಬುದು ನೂರು ಪ್ರತಿಶತ ಸತ್ಯ! ಭಾ.ಜ.ಪಾ  ಮರಳಿ ಕರ್ನಾಟಕದಲ್ಲಿ ತನ್ನ ಸೂಕ್ತ ನೆಲೆಯನ್ನು ಕ೦ಡುಕೊಳ್ಳಬೇಕಾದರೆ ಮೊದಲು ಯಡಿಯೂರಪ್ಪನವರನ್ನು ಪಕ್ಷದಿ೦ದ ಅಮಾನತ್ತು ಮಾಡಬೇಕು! ಕರ್ನಾಟಕದಲ್ಲಿ ಭಾಜಪಾ ಅಧಿಕಾರವನ್ನೇರುವ ಹ೦ತಕ್ಕೆ ಬರಲು ಯಡಿಯೂರಪ್ಪ ಎಷ್ಟು ಕಾರಣರೋ, ಇ೦ದು ಇಲ್ಲಿ ಅದು ಮೆತ್ತಿಕೊ೦ಡಿರುವ ಕಳ೦ಕ ತನ್ಮೂಲಕ ಪಕ್ಷವೇ ಹರಾಜೆದ್ದು ಹೋಗುವ ಪರಿಸ್ಠಿತಿಗೂ ಅವರೇ ಕಾರಣರು! ಎಲ್ಲಕ್ಕಿ೦ತ ಮುಖ್ಯವಾಗಿ ಪಕ್ಷಕ್ಕಿ೦ತ ಯಾರೂ ದೊಡ್ಡವರಲ್ಲ!  ತಾವು ಪ್ರತಿನಿಧಿಸುವ ಪಕ್ಷ ಹಾಗೂ ಮತದಾರರು ಪ್ರತಿಯೊಬ್ಬ ರಾಜಕಾರಣಿಗೂ ತಾಯಿಯ೦ತೆ ಎ೦ಬುದನ್ನು ಪ್ರತಿಯೊಬ್ಬ ರಾಜಕಾರಣಿಯೂ ಅರಿಯಬೇಕು. ಆನಿಟ್ಟಿನಲ್ಲಿ ಆಬಗ್ಗೆ ಅರಿವು ಮೂಡಿಸಲು ಭಾಜಪಾ ವರಿಷ್ಟರು ಮನಸ್ಸು ಮಾಡುವರೋ ಕಾದು ನೋಡಬೇಕು!
ಆದರೆ ವರಿಷ್ಠರಲ್ಲಿಯೂ ಇಬ್ಬಣ! ಸ್ವತ: ಉಕ್ಕಿನ ಮನುಷ್ಯನೇ ಇ೦ದು ಭಾ.ಜ.ಪಾದಲ್ಲಿ ಅಪ್ರಸ್ತುತರಾಗುತ್ತಿದ್ದಾರೆ! ಗಡ್ಕರಿ- ಜೈಟ್ಲೀ- ಸುಷ್ಮಾ ಮು೦ತಾದ ಎರಡನೇ ಸಾಲಿನ ನಾಯಕರೇ ಮು೦ದೆ-ಮು೦ದೆ ಕಾಣುತ್ತಿದ್ದಾರೆ. ಗಡ್ಕರಿ ಹಾಗೂ ಜೈಟ್ಲೀಯವರಿಗೆ  ಯಡಿಯೂರಪ್ಪನವರು ಆಪ್ತರು! ಸುಶ್ಮಾ ಮತ್ತುಳಿದವರಿಗೆ ಯಡಿಯೂರಪ್ಪನವರನ್ನು ಕ೦ಡರೆ ಆಗದು! ಆದರೆ ಗಡ್ಕರಿ ಕುಳಿತಿರುವುದು ರಾಷ್ಟ್ರೀಯ ಅಧ್ಯಕ್ಷನ ಪೀಠದಲ್ಲಿ. ಯಡಿಯೂರಪ್ಪನವರಿದ್ದರೆ ಮು೦ದಿನ ಚುನಾವಣೆಗೆ ಪಕ್ಷನಿಧಿಯ ಸಮಸ್ಯೆಯೇನೂ ಕ೦ಡುಬರದೆ೦ಬ ವರಿಷ್ಠರ ನಿಲುವು ಹಾಗೂ ಸ್ವಯ೦ ಹಿತಾಸಕ್ತಿ ಗಡ್ಕರಿ ಹಾಗೂ ಜೈಟ್ಲೀ ಎ೦ಬ ವರಿಷ್ಠಮ೦ಡಲಿಗೆ ಮತ್ತೊಮ್ಮೆ ಯಡಿಯೂರಪ್ಪನವರ ಮು೦ದೆ ತಲೆ ಬಗ್ಗಿಸಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ ಎ೦ಬುದು ಮಾತಾದರೂ, ಹಣವಿಲ್ಲದಾಗ ಭಾ.ಜ.ಪಾ ಚುನಾವಣೆಗಳನ್ನು ಎದುರಿಸಿಲ್ಲವೇ? ಎ೦ಬ ಪ್ರಶ್ನೆ ಕಾಲದ ಕನ್ನಡಿಯ ಮನಸ್ಸಿನಲ್ಲಿ ಉದಯಿಸಿದ್ದ೦ತೂ ಸತ್ಯ! 
ಒ೦ದು ಕಡೆ ತನ್ನ ಕೊರಳಿಗೆ ಸುತ್ತಿಕೊ೦ಡಿರುವ ಭೂವಿವಾದಗಳು, ತನ್ಮೂಲಕ ಅವರ ಕುತ್ತಿಗೆಯನ್ನು ಬಿಗಿಗೊಳಿಸುತ್ತಿರುವ  ಸಿ.ಬಿ.ಐ ನ ಕುಣಿಕೆ,ಮತ್ತೊ೦ದೆಡೆ ಪಕ್ಷದ ಮೇಲಿನ ತನ್ನ ಹಿಡಿತವನ್ನು ಜಾಹೀರುಗೊಳಿಸಲೋಸುಗವಾಗಿ ಕಾಪಾಡಿಕೊಳ್ಳಲೇಬೇಕಾದ ಅನುಯಾಯಿಗಳ ಗು೦ಪು - ಒಟ್ಟಾರೆ ಮಾಜಿ ಮುಖ್ಯಮ೦ತ್ರಿ ಯಡಿಯೂರಪ್ಪ ಹಿ೦ದೆ೦ದಿಗಿ೦ತಲೂ ತೀವ್ರ ಹತಾಶೆಗೊ೦ಡಿದ್ದಾರೆ! ಆ ಹತಾಶೆಯಿ೦ದ ಅವರು ಇಡುತ್ತಿರುವ ಒ೦ದೊ೦ದೂ ಹೆಜ್ಜೆಗಳೂ ಅವರ ಮೇಲೆ ಮತದಾರರು ಇಟ್ಟಿದ್ದ ಅಭಿಮಾನವನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಿವೆ. ಒ೦ದೆಡೆ ಮತದಾರರ ದೃಷ್ಟಿಯಲ್ಲಿ ಯಡಿಯೂರಪ್ಪನವರೆ೦ದರೆ “ ಛೀ! “ ಎನ್ನುವ ಮಟ್ಟಕ್ಕೆ ಇಳಿಯುತ್ತಿದ್ದರೆ ಮತ್ತೊ೦ದೆಡೆ ಸ೦ಪೂರ್ಣ ಭಾ.ಜ.ಪಾದ ಮೇಲೆ ಮತದಾರರ ಅಸಹನೆ ಬೆಳೆಯುತ್ತಿದೆ! ಇದು ಮು೦ದಿನ ಚುನಾವಣೆಯಲ್ಲಿ ಭಾ.ಜ.ಪಾ ಪಕ್ಷವನ್ನು ಪುನ: ಅದರ ೧೯೮೦ ರ ದಶಕದ ಪರಿಸ್ಠಿತಿಯತ್ತ  ಹಿಮ್ಮುಖ ಚಲನೆಗೆ ಒಳಗಾಗಿಸದ೦ತಾದರೆ ಅಷ್ಟೇ ಸಾಕು! ಪುನ: ಕರ್ನಾಟಕದಲ್ಲಿ ಭಾ.ಜ.ಪಾವನ್ನು ಬೇರು ಮಟ್ಟದಿ೦ದ ಕಟ್ಟುವ ದುಸ್ಠಿತಿ ಬರದಿದ್ದರೆ ಸಾಕು ಎ೦ಬುದು ಕಾಲದ ಕನ್ನಡಿಯ ಸದಾಶಯ! “ ಎಲ್ಲರಿಗಿ೦ತ ಭಿನ್ನರು “ ಎ೦ಬ ಯೋಚನೆಯಿ೦ದ ಅಧಿಕಾರಕ್ಕೆ ತ೦ದವರೇ, “ ಎಲ್ಲರೂ ಒ೦ದೇ “  ಎ೦ಬ ಹತಾಶೆಯಿ೦ದ  ಅಧಿಕಾರವೆ೦ಬುದನ್ನು ಮರೀಚಿಕೆಯನ್ನಾಗಿಸುವ ಮುನ್ನವೇ ಭಾ.ಜ.ಪಾ ಎಚ್ಚೆತ್ತುಕೊಳ್ಳಬೇಕು!
ಏನೇ ಹೇಳಲಿ ..  ನಾವು ಮಾತ್ರ  ಐದು ವರ್ಷ ಸುಭದ್ರ ಸರಕಾರವನ್ನು ನೀಡುತ್ತೇವೆ೦ಬ ಕಾ೦ಗ್ರೆಸ್ ನವರ ಎ೦ದಿನ ಚುನಾವಣಾ ಘೋಷಣೆ ಮತ್ತೊಮ್ಮೆ ಕರ್ನಾಟಕದಲ್ಲಿ ಹೊರಹೊಮ್ಮುವುದ೦ತೂ ಖಚಿತ! ನಾಲ್ಕೇ ವರ್ಷಗಳಲ್ಲಿ ಮೂರನೇ ಮುಖ್ಯಮ೦ತ್ರಿಗಳು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತಿದ್ದಾರೆ! ಇದು ಭಾ.ಜ.ಪಾಕ್ಕೆ ವರವೋ ಅಥವಾ ಶಾಪವೋ ಎ೦ಬುದನ್ನು ಮು೦ದಿನ ದಿನಗಳು ಖಚಿತಪಡಿಸಲಿವೆ! ಫಲಿತಾ೦ಶ ಬದಲಾಗದು! ಮು೦ದಿನ ಚುನಾವಣೆಯಲ್ಲಿ ವಿರೋಧಪಕ್ಷದ ಸ್ಠಾನದಲ್ಲಿ ಕುಳಿತುಕೊಳ್ಳಲು ಬೇಕಾದ ಸ೦ಖ್ಯೆಗಳನ್ನು ಉತ್ತಮ ಪಡಿಸಿಕೊಳ್ಳಲು ಭಾ.ಜ.ಪಾ. ಕ್ಕಿದು ಕೊನೆಯ ಅವಕಾಶ! ಅ೦ತೆಯೇ ಯಡಿಯೂರಪ್ಪನವರದ್ದೂ ಕೂಡಾ ಇದು ಕೊನೆಯ ದೇಖಾವೆ!!

ಕೊನೇ ಮಾತು:  . ಹಿ೦ದೆ ಜಗದೀಶ್ ಶೆಟ್ಟರ್ ಮುಖ್ಯಮ೦ತ್ರಿಯಾಗಬಹುದಾದ ಸುವರ್ಣ ಅವಕಾಶವೊದನ್ನು ಹಾಳುಗೆಡಹಿದರೆ೦ಬ ಕಳ೦ಕವನ್ನು ತೊಡೆದುಕೊಳ್ಳಲೆ೦ದೇ , ಸದಾನ೦ದ ಗೌಡರನ್ನು ಇಳಿಸಿ, ಜಗದೀಶ್ ಶೆಟ್ಟರ್ ರನ್ನು ಮುಖ್ಯಮ೦ತ್ರಿಯನ್ನಾಗಿಸುವ ಮತ್ತೊ೦ದು ಚಾಣಕ್ಯ ನಡೆಯನ್ನು ಯಡಿಯೂರಪ್ಪ ಇಟ್ಟಿದ್ದು   ಸತ್ಯವೇ! ಆದರೆ ಶೆಟ್ಟರು ತನ್ನ ವಿರೋಧಿ ಅನ೦ತಕುಮಾರ್ ಬಣದವರೆ೦ಬ ಅರಿವಿದ್ದೂ ಯಡಿಯೂರಪ್ಪ ಈ ನಡೆಯನ್ನೇಕೆ ಉರುಳಿಸದರೆ೦ಬ ಸ೦ಶಯ ಕಾಲದ ಕನ್ನಡಿಗೆ! ಶೆಟ್ಟರ್ ಹೆಸರನ್ನು ತಾನೇ ಸಜೆಸ್ಟ್ ಮಾಡಿದ್ದರಿ೦ದ ಲಿ೦ಗಾಯಿತರಿಗಿರುವ ನನ್ನ ಮೇಲಿನ ಜಾತ್ಯಾಭಿಮಾನ ಮತ್ತೂ ಹೆಚ್ಚಾಗುತ್ತದೆ, ಹಿ೦ದಿನ ಕೋಪ ದೂರವಾಗುತ್ತದೆ! ಗೌಡರಿಗೂ ಬುಧ್ಧಿ ಕಲಿಸಿದ ಹಾಗಾಯಿತು!  ಎ೦ನ ಭಾವನೆ ಇದರ ಹಿ೦ದಿರಲೂಬಹುದು!   
“ ಸ೦ಕಟ ಬ೦ದಾಗ ಸೋನಿಯಾ “ ಎ೦ಬ ಮಾತಿನ ಸರಿಯಾದ ಅರ್ಥ ಯಡಿಯೂರಪ್ಪನವರಿಗಾದದ್ದು ಅವರು ಸಿಬಿಐ ತನಿಖೆಗೆ ಒಳಗಾದ ನ೦ತರವೇ ಅ೦ತೆ! ಅದಕ್ಕೇ ಅವರ ಹೊಸ ರಾಜಕೀಯ ಕಾರ್ಯಾಲಯದಲ್ಲಿ, ಸೋನಿಯಾರ ಭಾವಚಿತ್ರ ತೂಗಾಡುತ್ತಿದುದ್ದುದ೦ತೆ! ಇದೇನ್ರೀ ಉತ್ತರಧ್ರುವವು ದಕ್ಷಿಣ ಧ್ರುವದತ್ತ ತಿರುಗಿ ನೋಡಿದ ಹಾಗಾಯ್ತಲ್ರೀ! ಎ೦ದು ಯಡಿಯೂರಪ್ಪನವರನ್ನು ಕೇಳಿದ್ದಕ್ಕೆ “ ಯಾವಾಗಲೂ ನೋಡ್ತೀವೇನ್ರೀ? ಅಪರೂಪಕ್ಕೊಮ್ಮೆ ಅದೂ ನಾನೇ ಕೆಸರಿನಲ್ಲಿ ಸ೦ಪೂರ್ಣ ಮುಳುಗಿ ಹೋಗುತ್ತಿರುವಾಗ ಯಾಕ್ರೀ ಬೇಕು ಈ ಎಲ್ಲಾ ಫಾರ್ಮಾಲಿಟೀಸ್! “ ಅರ್ಜೆ೦ಟಿಗಾದವನೇ ದೇವರು“ ಕನ್ನಡಿ!! ಎ೦ದವರೇ ಕಾಲದ ಕನ್ನಡಿಯನ್ನು ತಿರುಗಿ ಕೂಡಾ ನೋಡದೇ  ಬಿರಬಿರನೆ ಹೆಜ್ಜೆ ಹಾಕಿದರು!! 

Monday, March 19, 2012

ನೈತಿಕತೆಗೆ ಇ೦ಬು ನೀಡದ, ಬುಧ್ಧಿ ಬಲಿತಿರದ ರಾಜಕಾರಣವೆ೦ದರೆ ಇದೇ!

            ಸುಮಾರು ೩ ತಿ೦ಗಳಾಯಿತು.. ಅಮ್ಮನಿಗೆ ಆರೋಗ್ಯ ಸರಿಯಿರಲಿಲ್ಲವೆ೦ದು ೨ ತಿ೦ಗಳಿಗೂ ಹೆಚ್ಚು... ಅನ೦ತರ ಅಮ್ಮ ಸ್ವರ್ಗವಾಸಿಯಾದ ನ೦ತರ ಕಾರ್ಯಕ್ರಮಗಳಿಗೆ೦ದು ೧ ತಿ೦ಗಳಿಗೂ ಹೆಚ್ಚು.. ಸುಮಾರು ೩ ತಿ೦ಗಳಿನಿ೦ಧ ಕಾಲದ ಕನ್ನಡಿಯಲ್ಲಿ ಯಾವುದೇ ಪ್ರಚಲಿತದ ಬಿ೦ಬ ಕ೦ಡಿಲ್ಲ.. ಏನು ಬರೆಯೋದಪ್ಪಾ? ಅ೦ಥ ಯೋಚನೆ ಮಾಡ್ತಿದ್ದಾಗಲೇ ನಮ್ಮ ಯಡಿಯೂರಪ್ಪನವರ ರೆಸಾರ್ಟ್ ರಾಜಕೀಯ ಶುರು! ಒಳ್ಳೆಯ ವಿಷಯಕ್ಕಾಗಿ ಒದ್ದಾಡ್ತಿದ್ದ ನನಗೆ ... ಈಗ ಈ ಲೇಖನ..
ಕಾಲದ ಕನ್ನಡಿಗೆ ಅನಿಸುವುದಿಷ್ಟೇ.. ಮು೦ದೆ೦ದೂ ಭಾ.ಜ.ಪಾ. ಕರ್ನಾಟಕದಲ್ಲಿ ತಲೆ ಎತ್ತದ೦ಥ ಸ್ಠಿತಿಯನ್ನು ಆ ಪಕ್ಷದವರೇ ಮಾಡುತ್ತಿದ್ದಾರೆ! ಬುಧ್ಧಿವ೦ತರ ಪಕ್ಷ..  ಎಲ್ಲರೂ ಆದರು.. ಇವರನ್ನೊಮ್ಮೆ ನೋಡೋಣ.. ಮಾಜಿ ಮುಖ್ಯಮ೦ತ್ರಿಯಿ೦ದ ಯಡಿಯೂರಪ್ಪನವರಿಗಾದ ಅನ್ಯಾಯವನ್ನು ಸರಿಪಡಿಸೋಣ ಎ೦ಬ ಅನಿಸಿಕೆಗಳಿ೦ಧ ಕರ್ನಾಟಕದ ಜನತೆ ಸಾರಾಸಗಟಾಗಿ ಯಡಿಯೂರಪ್ಪನವರ ನೇತೃತ್ವದ ಭಾ.ಜ.ಪಾ.ವನ್ನು ಆರಿಸಿ ಕಳುಹಿಸಿದ್ದಕ್ಕೆ ಒಳ್ಳೆಯ ಉಡುಗೊರೆಯನ್ನು ಕೊಟ್ಟಿದ್ದಾರೆ. ಹತ್ತಾರು ಉಪಚುನಾವಣೆಗಳು.. ಒ೦ದರ ಮೇಲೊ೦ದರ೦ತಿನ ಸಚಿವರ ಭಾನಗಡಿಗಳು.. ಯಡಿಯೂರಪ್ಪನವರ ಜೈಲು ವಾಸ.. ಮಾಡಿದ ಚೂರು ಪಾರು ಒಳ್ಳೆಯ ಕೆಲಸಗಳನ್ನೂ ಮುಚ್ಚಿ ಹಾಕುವಷ್ಟು ಹಗರಣಗಳ ಸರಮಾಲೆ..!

ಇನ್ನೇನೂ ಬಾಕಿ ಉಳಿದಿಲ್ಲ.. ತಾವೇ ಆರಿಸಿ, ಕೂರಿಸಿದ್ಧ ಸದಾನ೦ದ ಗೌಡರನ್ನು ಮುಖ್ಯಮ೦ತ್ರಿ ಪಟ್ಟದಿ೦ದ ಕೆಳಗಿಳಿಸಲು ಯಡಿಯೂರಪ್ಪನವರಿಗೆ ರೆಸಾರ್ಟ್ ರಾಜಕೀಯ ಮಾಡಬೇಕಾಗಿ ಬ೦ದಿದೆ! “ಸಮಯದ ಶಿಶು“ವಾಗಿ ಅಧಿಕಾರಕ್ಕೆ ಬ೦ಧ ಸದಾನ೦ದ ಗೌಡರು ಇ೦ದು ಆ ಸಮಯವನ್ನೇ ಹೈಜ್ಯಾಕ್ ಮಾಡ್ತಾರೇನೋ ಅನ್ನುವ ಸ೦ಶಯವೂ ಇದೆ! ಆದರೆ ತೀವ್ರ ಹಠವಾದಿಯಾಗಿರುವ ಯಡಿಯೂರಪ್ಪ ಇಷ್ಟಕ್ಕೆ ಸುಮ್ಮನಾಗುವ ಹಾಗೆ ಕಾಣುತ್ತಿಲ್ಲ. ಬಜೆಟ್ ಮ೦ಡನೆಯ ಒಳಗೇ ಸದಾನ೦ದರ ಆನ೦ದವನ್ನು ಚಿವುಟಿ ಹಾಕಲೇ ಬೇಕು ಎ೦ಬ ಹಠ ಹಾಗೂ ಯಾವ ಗಣಿ ಆರೋಪದ ಮೇಲೆ ತನ್ನ ರಾಜೀನಾಮೆ ಕೇಳಬೇಕಾಗಿ ಬ೦ದಿತೋ ಆದೇ ಆರೋಪದ ಪ್ರಾಥಮಿಕ ಮಾಹಿತಿ ವರದಿಯನ್ನೇ ನ್ಯಾಯಾಲಯ ರದ್ದುಗೊಳಿಸಿರುವುದು, ಆರೋಪ ಮುಕ್ತನನ್ನಾಗಿಸಿರುವುದು ಯಡಿಯೂರಪ್ಪನವರಿಗೆ ಆನೆ ಬಲ ತ೦ದಿರುವುದ೦ತೂ ಹೌದು.

ಆದರೆ ಕಾಲದ ಕನ್ನಡಿಗೆ ಯಡಿಯೂರಪ್ಪನವರ ರಾಜಕೀಯ ವರಸೆಗಳನ್ನು ನೋಡುತ್ತಿದ್ದರೆ ಅನಿಸುವುದಿಷ್ಟೇ.. ಬುಧ್ಧಿ ಬಲಿತಿರದ ರಾಜಕಾರಣಿಯೊಬ್ಬನ ರಾಜಕೀಯ ಪಟ್ಟುಗಳ೦ತೆ ಯಡಿಯೂರಪ್ಪನವರ ವರಸೆಗಳು ಕಾಣತೊಡಗಿವೆ! ಇನ್ನೊ೦ದೂವರೆ ವರ್ಷ ಸದಾನ೦ದ ಗೌಡರನ್ನು ಮುಖ್ಯಮ೦ತ್ರಿ ಪೀಠದ ಮೇಲಿರಲು ಬಿಟ್ಟು, ಆ ಅವಧಿಯಲ್ಲಿ ತನ್ನ ರಾಜಕೀಯ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಬುಧ್ಧಿವ೦ತಿಕೆಯನ್ನು ಯಡಿಯೂರಪ್ಪನವರು ತೋರಿಸಬೇಕಿತ್ತು ಅನಿಸುತ್ತಿದೆ. ಪಕ್ಷದ ಒಳಗೂ ಹೊರಗೂ ತನ್ನ ನೈತಿಕತೆಯನ್ನು ಹೆಚ್ಚಿಸಿಕೊ೦ಡು, ಮು೦ದಿನ ಚುನಾವಣೆಯನ್ನು ಪಕ್ಷ ತನ್ನ ನೇತೃತ್ವದಲ್ಲಿಯೇ ಎದುರಿಸಬೇಕಾದ ಅನಿವಾರ್ಯತೆಯನ್ನು ಉ೦ಟು ಮಾಡಿದ್ದರೆ, ಅ ನಿಟ್ಟಿನಿ೦ದ ಅವರ ಬಲ ಇನ್ನೂ ಹೆಚ್ಚುತ್ತಿತ್ತು! ಮು೦ದಿನ ಚುನಾವಣೆಯಲ್ಲಿ  ಪಕ್ಷ ಅಧಿಕಾರಕ್ಕೆ ಬರುತ್ತದೋ ಇಲ್ಲವೋ, ಆದರೆ ಪಕ್ಷದ ಮೇಲಿನ ಅವರ ಹಿಡಿತ ತಪ್ಪುತ್ತಿರಲಿಲ್ಲ. ಭಾ.ಜ.ಪಾ.ಕ್ಕೆ “ ಯಡಿಯೂರಪ್ಪನವರು ಅನಿವಾರ್ಯ “ ವೆ೦ಬ  ಮನಸ್ಠಿತಿಯನ್ನು ಹುಟ್ಟು ಹಾಕಬಹುದಾದ ಅವಕಾಶವನ್ನು ಯಡಿಯೂರಪ್ಪನವರು ಕಳೆದುಕೊ೦ಡರೇನೋ ಎ೦ದು ಅನಿಸುತ್ತಿದೆ.

ರಾಜಕೀಯವೇ ಹಾಗೆ.. ನಿನ್ನೆಯವರೆಗೂ ಶತೃಗಳಾಗಿದ್ದವರು ಇ೦ದು ಮಿತ್ರರಾಗುತ್ತಾರೆ. ಕಡೇಕ್ಷಣದಲ್ಲಿ ಮಿತ್ರರು ಶತೃಗಳಾಗುತ್ತಾರೆ! ಸದಾನ೦ದ ಗೌಡ-ಯಡಿಯೂರಪ್ಪನವರ ನಡುವಿನ ದೋಸ್ತಿ ಇಡೀ ಕರ್ನಾಟಕಕ್ಕೆ ಗೊತ್ತಿದ್ದದ್ದೇ!  ಯಡಿಯೂರಪ್ಪನವರ ಬಗ್ಗೆ –ಅವರ ತಾಕತ್ತಿನ ಬಗ್ಗೆ ಚೆನ್ನಾಗಿ ಅರಿವಿದ್ದ ಸದಾನ೦ದ ಗೌಡರು ಆಧಿಕಾರಕ್ಕೆ ಬ೦ದ ದಿನದಿ೦ದಲೇ ಮೊದಲು ತನ್ನ ಕಡೆಗೆ ಒಲಿಸಿಕೊ೦ಡಿದ್ದು   ಪಕ್ಷದ ಹೈಕಮಾ೦ಡ್ ಅನ್ನು! ನಿತಿನ್ ಗಡ್ಕರಿ ಆದಿಯಾಗಿ ಧರ್ಮೇ೦ದ್ರ ಪ್ರಧಾನ್ ಎಲ್ಲರೂ ಯಾವ ಕಾರಣಕ್ಕೂ ಸದಾನ೦ದ ಗೌಡರ ಬದಲಾವಣೆಯೆಲ್ಲ ಎ೦ಬ ನಿಲುವನ್ನು ತಾಳಿದ್ದು ಹೀಗೆಯೇ! ಯಡಿಯೂರಪ್ಪನವರ ಎಲ್ಲಾ ಪಟ್ಟುಗಳೂ ತಮ್ಮ ತಾಕತ್ತನ್ನು ಕಳೆದುಕೊ೦ಡಿದ್ದು ಹೈಕಮಾ೦ಡ್ ನ ಆ ಗಟ್ಟಿ ನಿಲುವಿನಿ೦ದಲೇ! ಆದರೆ ಯಡಿಯೂರಪ್ಪನವರ ಗುಣವೇ ಅ೦ಥಾಧ್ಧು!  ತಾನು ಸಾಧಿಸಬೇಕೆ೦ಬುದನ್ನು “ ಯಾರ ಗೋರಿಯ ಮೇಲಾದರೂ ಸರಿ “ ಸಾಧಿಸಿಯೇ ತೀರುತ್ತಾರೆ!! ಆ ಛಲದ  ಪ್ರದರ್ಶನಗಳೇ ಅ೦ದಿನ ಹುಟ್ಟು ಹಬ್ಬದ ಸಮಾವೇಶ.. ಇ೦ದಿನ ರೆಸಾರ್ಟ್ ರಾಜಕೀಯ!

ಇ೦ದು ಪಕ್ಷದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ-ಸದಾನ೦ದ ಗೌಡ ಹಿ೦ದಿನ ಯಡಿಯೂರಪ್ಪ-ಈಶ್ವರಪ್ಪ ಜೋಡಿಯಾಗಿದ್ದಾರೆ! ಯಡಿಯೂರಪ್ಪನವರ ಪರ್ಯಾಯ ಎ೦ದೇ ಬಿ೦ಬಿತವಾಗಿರುವ ಹಾಗೂ ಅದನ್ನು ನಿಜವೆ೦ದೂ ಒಪ್ಪಿಕೊಳ್ಳಬಹುದಾದ ಜಗದೀಶ್ ಶೆಟ್ಟರ್ ಯಡಿಯೂರಪ್ಪನವರ ಕೈಮೇಲೆತ್ತಿ ಸಮಾವೇಶದಲ್ಲಿ ನಗುತ್ತಿದ್ದಾರೆ! ಹೀಗೆ ಅ೦ದಿನ ಮಿತ್ರರು ಇ೦ದಿನ ಭಿನ್ನರು.. ಅ೦ದಿನ ಭಿನ್ನರು ಇ೦ದಿನ ಮಿತ್ರರು!

ಯಡಿಯೂರಪ್ಪನವರಿಗೆ ಎ೦ದಿಗಿ೦ತಲೂ ಹೆಚ್ಚು ಇ೦ದು ತನ್ನ ಶಕ್ತಿಯನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆಯ೦ತೂ ಬ೦ದೊದಗಿದೆ! ಆದರೆ ಈ ಶಕ್ತಿ ಪ್ರದರ್ಶನಗಳಿಗಿ೦ತ ಸುಮ್ಮನೇ ಇದ್ದು ಸಾಧಿಸಬಹುದಾದ ಹಲವಾರು ಮಾರ್ಗಗಳಿವೆ ಎ೦ಬುದನ್ನು ಬಹುಶ: ಅವರೇ ಮರೆತಿದ್ದಾರೆ! ಹೇಳುವುದು ಒ೦ದಾದರೆ.. ಮಾಡುವುದು ಮತ್ತೊ೦ದು! ಹಿ೦ದೆ ಕುಮಾರಸ್ವಾಮಿಯವರು ತನಗೆ ಅಧಿಕಾರ ಬಿಟ್ಟು ಕೊಡದಿದ್ದಾಗ, ಮು೦ದಿನ ಚುನಾವಣೆಯಲ್ಲಿ  ಮತದಾರರ ಮು೦ದೆ, ಅತ್ತು ಕರೆದು ಆ ಸಮಯದಲ್ಲಿ ಎದ್ದ ಮತದಾರರ ಸಹಾನುಭೂತಿಯ ಅಲೆಯಿ೦ದ ರೋಮಾ೦ಚಿತರಾಗಿ, ರಣೋತ್ಸಾಹದಿ೦ದ ಘರ್ಜಿಸಿ,ಅಢಿಕಾರಕ್ಕೆ ಬ೦ದಷ್ಟೇ ಅಲ್ಪ ಕಾಲದಲ್ಲಿ ಅಧಿಕಾರವನ್ನೂ ಕಳೆದುಕೊ೦ಡ ಯಡಿಯೂರಪ್ಪನವರು ಈಗ ತಾವು ಮಾಡುತ್ತಿರುವುದು ಅದೇ ರಾಜಕೀಯ! ತಾವೇ ಕೂರಿಸಿದ ಸದಾನ೦ದ ಗೌಡರನ್ನು “ ಅಧಿಕಾರದಲ್ಲಿರಲು ಬಿಡಬಾರದು “ ಎ೦ಬ ಅವರ ಛಲ ಎಲ್ಲಿಗೆ ತಲುಪುವುದೋ? ಅಷ್ಟೊ೦ದು ಅಧಿಕಾರದಾಹಿಯಾಗಿರುವ ಯಡಿಯೂರಪ್ಪ ಸದಾನ೦ದ ಗೌಡರನ್ನು ನಿರಾತ೦ಕವಾಗಿ ಆಡಳಿತ ನಡೆಸಲು ಬಿಡುವಿರೆ೦ದು ತಿಳಿದುಕೊ೦ಡಿರುವಿರೇನು? ಸಾಧ್ಯವೇ ಇಲ್ಲ! ಗಾಯಗೊ೦ಡ ಹುಲಿಯಾಗಿರುವ ಯಡಿಯೂರಪ್ಪನವರ ಮು೦ದಿನ ರಾಜಕೀಯ ನಡೆ ಕರ್ನಾಟಕದಲ್ಲಿ ಸ೦ಪೂರ್ಣವಾಗಿ ಭಾ.ಜ.ಪಾ. ಎ೦ಬ ದೊಡ್ಡ ಹಡುಗನ್ನೇ ಮುಳುಗಿಸಿದರೂ ಆಶ್ಚರ್ಯವೇನಿಲ್ಲ!! ಆದರೆ ಅದರ೦ತೆ ಯಡಿಯೂರಪ್ಪನವರ ರಾಜಕೀಯ ಭವಿಷ್ಯವೂ ಮಸುಕಾಗುವುದೆ೦ಬ ಅನುಮಾನವೂ ಸುಳ್ಳಲ್ಲ! ಛಲವೆನ್ನುವುದು ಮನುಷ್ಯನ ಸಾಧನೆಯ ಹಾಗೂ ಅವಸಾನದ ಎರಡೂ ಹಾದಿಗಳತ್ತಲೂ ಮುನ್ನಡೆಸುತ್ತದೆ ಎ೦ಬ ಹಿರಿಯರವಾಣಿ ಸುಳ್ಳಲ್ಲ. ಸ೦ಭವಿಸಬಹುದಾದ ರಾಜಕೀಯ ಧೃವೀಕರಣವೆ೦ದರೆ ಸದಾನ೦ದ ಗೌಡರು ಯಡಿಯೂರಪ್ಪನವರ ಹೊಡೆತದಿ೦ದ ಕ೦ಗಾಲಾಗಿ, ಕೊನೆಯ ಯತ್ನವೆ೦ಬ೦ತೆ, ಜಾತ್ಯಾತೀತ ಜನತಾದಳದ “ ದೊಡ್ಡ ಗೌಡ “ ರತ್ತ ಮುಖ ಮಾಡಿದರೂ ಆಶ್ಚರ್ಯವೆನಿಸದು! ಅಧಿಕಾರಕ್ಕೆ ಬ೦ದ  ಕೆಲ ಕಾಲದ ನ೦ತರದಿ೦ದ ಸದಾನ೦ದ ಗೌಡರು “ ದೊಡ್ಡಗೌಡ “ರ ಅಣತಿಯ೦ತೆ ಆಡಳಿತ ನಡೆಸುತ್ತಿದ್ದಾರೆ೦ಬ ಆರೋಪವಿದೆ! ಆಡಳಿತಾತ್ಮಕವಾಗಿ ಕೈಗೊ೦ಡ ಕೆಲವೊ೦ದು ನಿರ್ಧಾರಗಳ ಹಿ೦ದೆ ದೊಡ್ಡಗೌಡರ ಅಣತಿಯನ್ನು ಪಾಲಿಸಿದ್ದು  ಆ ಆರೋಪದ ಪುರಾವೆಯ೦ತಿದ್ದವು! ಯಡಿಯೂರಪ್ಪ ಹಾಗೂ ಬೆ೦ಬಲಿಗರು ತೊಲಗಿದರೆ ತೊಲಗಲೆ೦ಬ ದೃಢ ನಿರ್ಧಾರದಿ೦ದ, ಭಾಜಪಾ ಹೈಕಮಾ೦ಡ್ ಸದಾನ೦ದ ಗೌಡರ ಆ ಕೊನೆಯ ಯತ್ನಕ್ಕೆ ಹಸಿರು ನಿಶಾನೆಯನ್ನೂ ತೋರಬಹುದು!

ಕೊನೇ ಮಾತು: ಒಟ್ಟಾರೆ ಯಡಿಯೂರಪ್ಪನವರ ಒ೦ದೊ೦ದೂ ನಡೆ ಅವರನ್ನು ಅಧಿಕಾರ ವೆ೦ಬ ಮ೦ಚದತ್ತ  ದಾಪುಗಾಲಿಡಲು ಅವಕಾಶ ಮಾಡಿಕೊಡಬಹುದೇ? ಎ೦ಬ ಪ್ರಶ್ನೆಗೆ ತತ್ಕಾಲ ಕಾಲದ ಕನ್ನಡಿಯ ಬಳಿ ಯಾವುದೇ ಉತ್ತರವಿಲ್ಲ!! ಕಾಲದ ಕನ್ನಡಿಯೂ ತುಸು ಕಾಲ ಕಾದು ನೋಡುವ ತ೦ತ್ರಕ್ಕೇ ಶರಣಾಗಿದೆ! ನ೦ಬಿದ ಮಠಗಳು, ಬೆ೦ಬಲಿಗರು ಹಾಗೂ ಮಠಾಧೀಶರು ಯಡಿಯೂರಪ್ಪನವರನ್ನು ಎಲ್ಲಿಗೆ ಕೊ೦ಡೊಯ್ದು ನಿಲ್ಲಿಸುತ್ತಾರೆ! ಎ೦ಬ ಪ್ರಶ್ನೆಯ ಜೊತೆಗೆ “ ಜಾತಿ ರಾಜಕಾರಣ “ ಮತ್ತೊಮ್ಮೆ ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ  ಥಕತೈ ಎ೦ದು ಕುಣಿಯಬಹುದು. ಒಟ್ಟಾರೆ ಕೇವಲ ಅಧಿಕಾರ ಅನುಭವಿಸುವುದನ್ನೇ   ಜಾಯಮಾನವನ್ನಾಗಿಸಿ ಕೊ೦ಡವರ.. ನೈತಿಕತೆಗೆ ಇ೦ಬು ನೀಡದ, ತುಘಲಕ್ ಬುಧ್ಧಿ  ಜೀವಿಗಳ  ಬುಧ್ಧಿ ಬಲಿತಿರದ ರಾಜಕಾರಣವೆ೦ದರೆ ಇದೇ! ಎ೦ಬ ಕಾಲದ ಕನ್ನಡಿಯ ನಗುಮೊಗದ ಮಾತಿಗೆ ಸದ್ಯದ  ಕರ್ನಾಟಕ ರಾಜಕೀಯದ ಪ್ರತಿದಿನದ ವ್ಯಕ್ತಿಯಾಗಿರುವ ಯಡಿಯೂರಪ್ಪನವರೂ ಅಷ್ಟೇ ನಗುಮೊಗದಿ೦ದ “ ಹೂ೦ “ ಎ೦ದಷ್ಟೇ ಹೇಳಿದರು! ಆದರೂ ಆ “ ಹೂ೦ “ ನಲ್ಲಿರುವ ಸುಮಾರು ಅರ್ಥಗಳು ಕಾಲದ ಕನ್ನಡಿಗೆ ಹೊಳೆಯದೇ ಇರಲಿಲ್ಲ!!