Monday, March 12, 2012

ನಿಧಾನವಾಗಿ ಆ ನೆನಪುಗಳಿ೦ದ ಹೊರಬರಲಾರ೦ಭಿಸಿದ್ದೇನೆ...

ತಿ೦ಗಳುಗಳೆರಡು ಕಳೆದರೂ

ನೆನಪಿನಲೆಗಳಿ೦ದ ತಪ್ಪಿಸಿಕೊಳ್ಳಲಾಗುತ್ತಿಲ್ಲ..

ಅಮ್ಮ ಇಲ್ಲ ಅನ್ನೋದನ್ನು  ಒಪ್ಪಿಕೊಳ್ಳೋದು

ಅಷ್ಟು ಸುಲಭವಲ್ಲ.. ಮನಸ್ಸು ಭಾರವಾಗುತ್ತದೆ.


ಬೇಡ..ಬೇಡವೆ೦ದರೂ ಸುತ್ತಿಕೊಳ್ಳುವ

ನೆನಪುಗಳ ಸುಳಿಗೆ ಮನಸ್ಸನ್ನು ದೂಡಲೇಬೇಕಾಗುತ್ತದೆ..

ಒಮ್ಮೊಮ್ಮೆ ಸಿಹಿಯನ್ನು ನೀಡಿದರೆ

ಮತ್ತೊಮ್ಮೆ ನೆನೆಕೆಯಿ೦ದಲೇ  ಕ೦ಬನಿ ಉಕ್ಕುತ್ತದೆ..


ಕೆಲಸಕ್ಕೆ ಹೊರಡುವಾಗ ಚಾವಡಿಯಲ್ಲಿನ

ಅಮ್ಮನ ಭಾವಚಿತ್ರ ಹರಸಿದ೦ತೆ ಕ೦ಡರೆ

ಮನೆಯೊಳಗೆ ಕಾಲಿಟ್ಟಕೂಡಲೇ ಆ ಭಾವಚಿತ್ರದಲ್ಲಿನ

ಅಮ್ಮನನ್ನು ಅರಸುತ್ತೇನೆ.. ಮನಸ್ಸೊಮ್ಮೆ ಮೂಕವಾಗುತ್ತದೆ..
 

ಕ್ಷಣ ಮಾತ್ರ.. ಹಿ೦ದೆ ಮು೦ದೆ   ಯಾರೂ ಇಲ್ಲವೆ೦ದೆನೆಸಿ

ಅನಾಥನಾದೆ ಎನ್ನುವ ಭಾವ ಕಾಡಿದರೂ

ಶ್ರೀಮತಿಯ ನಗು  ಎಲ್ಲವನ್ನೂ ಮರೆಸುತ್ತದೆ!

ಶ್ರೀಮತಿಯಲ್ಲಿಯೇ ಶ್ರೀಮಾತೆಯನ್ನೂ ಕ೦ಡುಕೊಳ್ಳಬಹುದೆನ್ನುವ

ಭಾವವೇ ಮನಸ್ಸಿಗೊಮ್ಮೆ ಮುದ ನೀಡುತ್ತದೆ..

ಆರೈಕೆಯನ್ನು ಅನುಭವಿಸಲು ಮನಸ್ಸು ಹಾತೊರೆಯುತ್ತದೆ! 


ಶ್ರೀಲೇಖಳ ಮ೦ದಹಾಸ ಶೇಷುವಿನ ಅರಳು ಹುರಿಗಟ್ಟುವ 

ಮಾತುಗಳು ಭಾವ ಬ೦ಧನದಲ್ಲಿ ಆಗಾಗ ಕಳೆದುಹೋಗುವ

ನನ್ನ ಮನಸ್ಸಿಗೆ ಸಾ೦ತ್ವನ ನೀಡುತ್ತಿರುವುದ೦ತೂ ಹೌದು..

ಹೌದು.. ನಿಧಾನವಾಗಿ  ಆ ನೆನಪುಗಳಿ೦ದ ಹೊರಬರಲಾರ೦ಭಿಸಿದ್ದೇನೆ

ವಾಸ್ತವತೆಯನ್ನು ಅರ್ಥೈಸಿಕೊಳ್ಳಲಾರ೦ಭಿಸಿದ್ದೇನೆ..

1 comment:

Prakash Narasimhaiah said...

ಮಾನ್ಯರೇ,
ಅತ್ಮೀಯರೊಬ್ಬರಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಂತೆ ನಿಮ್ಮ ಕವನದ ಸಾಲುಗಲೆನ್ನಬಹುದಾದ ಸಂಭಾಷಣೆ ನನ್ನ ಮನದ ಕದವ ತಟ್ಟಿದೆ, ನೆನಪಿನ ಸಾಲುಗಳು ಕಣ್ಣಮುಂದೆ ಬಂದು ಕಣ್ಣೀರ ತರಿಸಿದೆ.
ನನ್ನ ತಾಯಿ ನಾಲ್ಕಾರು ದಿನ ಕೊಮಾದಲ್ಲಿದ್ದು ನನ್ನ ಬರುವಿಕೆಗೆ ಕಾಯುತ್ತಿದ್ದರೆನೋ ಎನ್ನುವಂತೆ ಜೀವ ಬಿಗಿ ಹಿಡಿದುಕೊಂಡು ಕಾಯುತ್ತಿದ್ದಳು. ನಾನು ಹೋಗಿ ಅಮ್ಮನ ಕೈ ಹಿಡಿದು ಕೊಂಡ ತಕ್ಷಣದಲ್ಲಿ ಉಸಿರಾಟ ತೀವ್ರವಾಗಿ ಕೆಲವೇ ಕ್ಷಣಗಳಲ್ಲಿ ನಿರ್ಮಳವಾಗಿ ಇಹಲೋಕದ ವ್ಯಾಪಾರ ಮುಗಿಸಿದಳು. ಆ ಅಂತಿಮ ಕ್ಷಣದ ಸ್ಪಂದನವನ್ನು ಮರೆಯಲು ನನಗೆ ವರ್ಷವೇ ಬೇಕಾಯಿತು. ಈಗ ನಿಮ್ಮ ಕವನ ಓದುವಾಗ ನನ್ನ ತಾಯಿಯನ್ನು ತಟ್ಟನೆ ನೆನೆಯುವಂತೆ ಮಾಡಿತು.
ನಿಮಗೆ ಏನು ಹೇಳಲಿ? ಮಾತುಗಳು ಸಾಲವು.
ಪ್ರಕಾಶ್