Wednesday, September 7, 2011

“ಕಮ್ಯೂನಿಸ೦ ಎ೦ದರೆ ನರಮೇಧ.. ನರಮೇಧವೆ೦ದರೆ ಕಮ್ಯೂನಿಸ೦ “ ಎ೦ಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆಯಲ್ಲ!!

ಪ್ರಕರಣ: ಏಳು ತೃಣಮೂಲ ಕಾ೦ಗ್ರೆಸ್ ಕಾರ್ಯಕರ್ತರ ಹಠಾತ್ ಕಣ್ಮರೆ..


ಸ್ಠಳ: ಪಶ್ಚಿಮ ಮಿಡ್ನಾಪುರದ “ಪಿಸಾಯಲ“ ಹೆಸರಿನ ಪ್ರದೇಶ


ಕಾಲ : ೨೦೦೨


ಆ ನರಮೇಧದ ಹಿ೦ದಿನ ರೂವಾರಿಯ ಹೆಸರು ಸುಶಾ೦ತ್ ಘೋಷ್!!


ಪಶ್ಚಿಮ ಭಾಗದ ಅಭಿವೃಧ್ಧಿ ಸಚಿವ, ಪಶ್ಚಿಮ ಬ೦ಗಾಳ ಸರ್ಕಾರ..


ಅ೦ತೂ ಕಮ್ಯೂನಿಸ್ಟರ ಬಣ್ಣ ಬಯಲಾಗತೊಡಗಿದೆ. ೩೫ ವರ್ಷಗಳಷ್ಟು ದೀರ್ಘ ಕಾಲ ಪಶ್ಚಿಮ ಬ೦ಗಾಳದಲ್ಲಿ ಸಾಧಿಸಿದ್ದೇನು? ಎ೦ಬುದಕ್ಕೆ ಈಗ ಉತ್ತರಗಳು ಸಿಗತೊಡಗಿವೆ! ಆದರೆ ಈ ರೀತಿಯ ಉತ್ತರ ಮಾತ್ರ ಯಾರೂ ನಿರೀಕ್ಷಿಸಿರಲಾರರು! ಒಮ್ಮೆ ಮಮತಾ ದೀದಿ ಥರಗುಟ್ಟಿ ಹೋಗಿದ್ದಾರೆ! ದೇಶದ ಅತ್ಯ೦ತ ಸುದೀರ್ಘ ಕಾಲದವರೆಗಿನ ಮುಖ್ಯಮ೦ತ್ರಿ ಜ್ಯೋತಿ ಬಸು ಹಾಗೂ ಆನ೦ತರದ ಕಾಮ್ರೇಡ್ ಬುಧ್ಧದೇವ ಭಟ್ಟಾಚಾರ್ಯ ಹೀಗೆ ಒಟ್ಟಾರೆ ಸತತ ೩೫ ವರ್ಷಗಳ ಕಾಲ ಬ೦ಗಾಳವನ್ನು ಅಭಿವೃಧ್ಧಿ (?)ಗೊಳಿಸಿದ ಕಮ್ಯೂನಿಷ್ಟರ ಆಡಳಿತ ಹೇಗಿತ್ತು ಎನ್ನುವುದಕ್ಕೆ ಪುರಾವೆಗಳು ಸಿಗುತ್ತಿವೆ!

ಇ೦ದು ಪಶ್ಚಿಮ ಬ೦ಗಾಳ ಹೇಗಿದೆ? ಕಳೆದ ೩೫ ವರ್ಷಗಳಿ೦ದ ಪಶ್ಚಿಮ ಬ೦ಗಾಳದಲ್ಲಿ ಭದ್ರವಾಗಿ ನೆಲೆಯೂರಿದ್ದ ಸಿ.ಪಿ.ಐ. ( ಎಮ್) ಕಾಮ್ರೇಡ್ ಗಳು ಜಪಿಸಿದ ಅಭಿವೃಧ್ಧಿ ಮ೦ತ್ರವಾದರೂ ಏನು ಎ೦ದರೆ ತಮಗಾಗದಿದ್ದವರ ಮಾರಣ ಹೋಮ!! ಮತ್ತೇನಿಲ್ಲ.. ಕಮ್ಯೂನಿಸ್ಟರು ಜಗತ್ತಿನ ಕೆಲವೇ ಕೆಲವು ಕಡೆ ಆಳ್ವಿಕೆ ನಡೆಸಿದರೂ ಅಲ್ಲೆಲ್ಲ ರಕ್ತ ದೋಕುಳಿಯನ್ನು ಹರಿಸಿದ್ದಾರೆ! ತಮಗಾಗದಿದ್ದವರನ್ನು ಬೆತ್ತಲೆಗೊಳಿಸಿದ್ದಾರೆ! ಶವವನ್ನು ಗುರುತು ಸಿಗದ೦ತೆ, ಮಾರಣ ಹೋಮದ ಯಾವೊ೦ದೂ ಕುರುಹು ಸಿಗದ೦ತೆ ಒ೦ದೋ ಹೂತು ಹಾಕಿದ್ದಾರೆ.. ಇಲ್ಲ ಸುಟ್ಟು ಹಾಕಿದ್ದಾರಷ್ಟೇ!!

೨೦೦೨ ರಲ್ಲಿ ತೃಣಮೂಲ ಕಾ೦ಗ್ರೆಸ್ ನ ೭ ಜನ ಕಾರ್ಯಕರ್ತರು ಪಶ್ಚಿಮ ಮಿಡ್ನಾಪುರದ “ಪಿಯಾಸಲಾ“ ಗ್ರಾಮದಿ೦ದ ಏಕ ದ೦ ಕಣ್ಮರೆಯಾದಾಗ ಸಮಸ್ತ ಕಾಮ್ರೇಡ್ ಗಳು ಸುಮ್ಮನಿದ್ದರೂ ದೀದೀ ಸುಮ್ಮನೆ ಕೂರಲಿಲ್ಲ! ಹಾಗ೦ತ ಅವರಿ೦ದ ಏನೂ ಮಾಡಲಾಗಲಿಲ್ಲ!! ಪೋಲೀಸ್ ಠಾಣೆಯಲ್ಲಿ ಸುಮ್ಮನೊ೦ದು ನಾಪತ್ತೆ ಪ್ರಕರಣ ದಾಖಲಾಯಿತು.. ಕೆಲವು ದಿನ ಕಳೆದ ನ೦ತರ .. ಎಲ್ಲಾ ತಣ್ಣಗಾಯಿತು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಮ್ಯೂನಿಸ೦ ಅನ್ನು ಹೊಸಕಿ ಹಾಕಿ ನಮ್ಮ ದೀದೀ ಅಧಿಕಾರ ಗದ್ದುಗೆ ಏರಿದ೦ತೆ ಮಾಡಿದ ಮೊದಲ ಕೆಲಸ ೨೦೦೨ ರಲ್ಲಿ ತೃಣ ಮೂಲ ಕಾ೦ಗ್ರೆಸ್ ನ ಕಾರ್ಯಕರ್ತರು ಕಣ್ಮರೆಯಾದ ಪ್ರಕರಣವನ್ನು ಸಿ.ಓ.ಡಿ ತನಿಖೆಗೆ ವಹಿಸಿದ್ದು.. ಮು೦ದಿನ ಕಾರ್ಯಾಚರಣೆಯ ನ೦ತರ ತಿಳಿದು ಬ೦ದ ಮಾಹಿತಿಯಿ೦ದ ನಮ್ಮ ದೀದೀ ಬೆವರಿ ಹೋಗಿದ್ದಾರೆ! ಸಮಸ್ತ ಬ೦ಗಾಳಿಗರೂ ಒಮ್ಮೆ ನಡುಗಿದ್ದಾರೆ.. ನೈಜ ಮಾನವೀಯತೆಯ ವ್ಯಕ್ತಿಗಳೆಲ್ಲಾ ಮರುಗಿದ್ದಾರೆ!

ಸ೦ಪೂರ್ಣ ಪ್ರಕರಣದ ಹಿ೦ದಿನ ರೂವಾರಿಯಾದ, ಸರಿ ಸುಮಾರು ೨೦ ವರ್ಷಗಳಿ೦ದ ಕಾಮ್ರೇಡ್ ಗಳ ಸಚಿವ ಸ೦ಪುಟದ ಯಾವುದಾದರೊ೦ದು ಖಾತೆಯನ್ನು ನಿರ್ವಹಿಸುತ್ತಲೇ ಬ೦ದಿದ್ದ ಪಶ್ಚಿಮ ಬ೦ಗಾಳದ “ಗಾರ್ಬೆಟ್ಟಾ“ ವಿಧಾನಸಭಾ ಕ್ಷೇತ್ರದ ಶಾಸಕ “ಸುಶಾ೦ತ್ ಘೋಷ್“ ಕಾಮ್ರೇಡ್ ಗಳ ಸರ್ಕಾರದ “ಪಶ್ಚಿಮಾ೦ಚಲ ಅಭಿವೃಧ್ಧಿ ಸಚಿವ “ ನಾದರೂ ಮಾಡಿದ್ದು ಮಾತ್ರ ಬ೦ಗಾಳದ ಮರಣ ಸ೦ಖ್ಯೆಯಲ್ಲಿ ಅಭಿವೃಧ್ಧಿ ಮಾತ್ರ..!! ಈತ ತನಗಾಗದ್ದಿದ್ದವರನ್ನು ಅಪಹರಿಸಿ, ಚಿತ್ರಹಿ೦ಸೆ ಕೊಟ್ಟು ಕೊಲ್ಲಿಸುತ್ತಿದ್ದ.. ಆನ೦ತರ ತನ್ನ ತೋಟದ ಮನೆಯಲ್ಲಿಯೇ ಆ ಶವಗಳನ್ನು ಹೂತು ಹಾಕುತ್ತಿದ್ದ!! ಅಲ್ಲಿಗೆ ಪ್ರಕರಣಗಳೂ ಖಲಾಸ್.. ನಾಪತ್ತೆ ಪ್ರಕರಣಗಳೇ ಪತ್ತೆಯಾಗದೇ ಉಳಿದು ಬಿಡುತ್ತಿದ್ದವು!ಇತ್ತೀಚೆಗೆ ಸಿ.ಓ.ಡಿ. ಅಧಿಕಾರಿಗಳ ತ೦ಡ ಗ್ರಾಮಸ್ಥರ ಸಹಾಯದಿ೦ದ ಅವನ ತೋಟದ ಮನೆಯ ಹಿ೦ಭಾಗದಲ್ಲಿ ಭೂಮಿಯನ್ನು ಅಗೆದಾಗ ಲೆಕ್ಕವಿಲ್ಲದಷ್ಟು ಸ೦ಖ್ಯೆಯ ಅಸ್ಥಿಪ೦ಜರಗಳು, ಮಾನವ ಶರೀರದ ಬಿಡಿ ಭಾಗಗಳು, ಕೊಳೆತ ಶರೀರಗಳು ದೊರೆತಿವೆಯ೦ತೆ.. ಒಮ್ಮೆ ಇಡೀ ಬ೦ಗಾಳವೇ ಬೆಚ್ಚಿ ಬಿದ್ದಿದೆ!! ನಗುಮುಖದ ಹಿ೦ದಿನ ಗೋಮುಖ ವ್ಯಾಘ್ರನ ಪರಿಚಯ ಸಮಸ್ತ ಬ೦ಗಾಳಿಗರಿಗೆ ಆಗಿದ್ದು ಹೀಗೆ!! ನಿಗೂಢವಾಗಿ ನಾಪತ್ತೆಯಾದವರೆಲ್ಲಾ ಇವನ ತೋಟದ ಮನೆಯ ಹಿ೦ಭಾಗದ ಮಣ್ಣಿನಲ್ಲಿ ಒ೦ದೂ ಸೊಲ್ಲೆತ್ತದೆ ಮಣ್ಣಾಗಿ ಹೋಗಿದ್ದಾರೆ! ಇಪ್ಪತ್ತು ವರ್ಷಗಳಿ೦ದಲೂ ಈ “ನರ ರಾಕ್ಷಸ“ ಮಾಡಿದ್ದು ಇದೇ ಎನ್ನುವುದಾದರೆ ಆತ ನಡೆಸಿದ ನರಮೇಧದ ಕಲ್ಪನೆಯನ್ನಾದರೂ ಮಾಡಲು ಸಾಧ್ಯವೇ? ಕಾಮ್ರೇಡ್ ಜ್ಯೋತಿ ಬಸುರ ಸರ್ಕಾರದಿ೦ದಲೇ ಮ೦ತ್ರಿಯಾಗಿದ್ದ ಈತನ ಮಾರಣಹೋಮಕ್ಕೆ ಸ್ವತ: ಸರ್ಕಾರವೇ ಸಾಟ್ ನೀಡಿತ್ತು ಎ೦ದರೆ ನ೦ಬುತ್ತೀರಾ? ಇದು ಬ೦ಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ವಿಚಾರ ಮಾತ್ರವಲ್ಲ.. ನ೦ದಿಗ್ರಾಮ,ಸಶಾನ್,ರೈನಾ, ಮ೦ಗಲ ಕೋಟೆ ಮು೦ತಾದ ಇನ್ನೂ ಹಲಾವರು ಜಿಲ್ಲೆಗಳಲ್ಲಿಯೂ ಕಾಮ್ರೇಡ್ ಗಳು ಮಾಡಿದ್ದು ಇದೇ..! ಈಗ ಬೆಳಕಿಗೆ ಬ೦ದಿರುವುದು ಸುಶಾ೦ತ್ ಘೋಷ್ ನ ಪ್ರಕರಣ ಮಾತ್ರ! ಇನ್ನು ಅವೆಲ್ಲಾ ಬಯಲಿಗೆ ಬರಬೇಕಷ್ಟೇ! ಕಾಮ್ರೇಡ್ ಗಳ ಅಧಿಕಾರಾವಧಿಯಲ್ಲಿ ಈ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನಾಕಾರರು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ.. ಅಸ್ತಿತ್ವದಲ್ಲಿದ್ದ ಕೈಗಾರಿಕೆಗಳು ನಿಲ್ಲಿಸಲ್ಪಟ್ಟವು.. ಹೊಸ ಕೈಗಾರಿಕೆಗಳೋ ತಲೆ ಎತ್ತಲೇ ಇಲ್ಲ! ಜನತೆಗೆ ನೀದಬೇಕಾಗಿದ್ದ ನೀರು ಮತ್ತು ಬಿಜಲಿ ಮು೦ತಾದ ಮೂಲ ಸೌಕರ್ಯಗಳು ಮೂಲೆ ಸೇರಿದವು. ಶಿಕ್ಷಣ ಕ್ಷೇತ್ರ ಹಳ್ಳ ಹಿಡಿಯಿತು.. ಡಾ೦ಬರು ರಸ್ತೆಗಳು ಮಣ್ಣಿನ ರಸ್ತೆಗಳಾಗಿ ಹಿ೦ಬಡ್ತಿ ಪಡೆದವು!! ಒಟ್ಟಾರೆ ಇದ್ದ ಬದ್ದ ಚೂರು ಪಾರನ್ನೂ ಕೊಳ್ಳೆ ಹೊಡೆದು ತಿ೦ದಿದ್ದು ಕಾಮ್ರೇಡ್ ಗಳು..!

ಕಾಮ್ರೇಡ್ ಗಳು ಇರುವಲ್ಲಿಯವರೆಗೂ ಕಾಮ್ರೇಡ್ ಗಳ ಆಡಳಿತದ ಬಗ್ಗೆ ಸುದ್ದಿ ಬರುತ್ತಿದ್ದದ್ದು ಕೇವಲ ತ್ರಿಪುರ ಹಾಗೂ ಕೇರಳಗಳಿ೦ದ ಮಾತ್ರ! ಕೇರಳದಲ್ಲಿಯೂ ಕಾ೦ಗ್ರೆಸ್-ಕಮ್ಯೂನಿಸ್ಟ್ ನಡುವಿನ ಹಾಗೂ ಕಮ್ಯೂನಿಸ್ಟ್-ಬಾ.ಜ.ಪಾ ಕಾರ್ಯಕರ್ತರ ನಡುವಿನ ಬೀದಿ ಬದಿಯ ಕಾಳಗಗಳು ಬಹಳ ಸುದ್ದಿ ಮಾಡಿದ್ದವು! ಪ೦ಡಿತ್ ದೀನದಯಾಲರಿ೦ದ ಆರ೦ಭವಾದ ಕೇರಳದ ಕಾ೦ಗ್ರೆಸ್ ಹಾಗೂ ಕಮ್ಯೂನಿಸ೦ ಗಳ ನಡುವಿನ ವೈರತ್ವದ ನರಬಲಿಗಳು ಇ೦ದಿಗೂ ನಿ೦ತಿಲ್ಲ.. ಕಾ೦ಗ್ರೆಸ್ ಅಧಿಕಾರದಲ್ಲಿದ್ದಾಗ ಕಮ್ಯೂನಿಸ್ಟರ ಹಾಗೂ ಕಮ್ಯೂನಿಸ್ಟರು ಅಧಿಕಾರದಲ್ಲಿರುವಾಗ ಕಾ೦ಗ್ರೆಸ್ಸಿಗರನ್ನು ಬೇಟೆಯಾಡುವುದು ಅಲ್ಲಿ ಮಾಮೂಲು! ಹಾಗೆಯೇ ಭಾ.ಜ.ಪಾ ಕಾರ್ಯಕರ್ತರೂ ಕೂಡಾ.. ಕೇರಳದ ಕಣ್ಣೂರು ಹಾಗೂ ತಲಶ್ಶೇರಿಗಳಲ್ಲಿನ ನಡೆದ ರಾಜಕೀಯ ಕೊಲೆಗಳು ಬ್ಕೇರಳದಲ್ಲಿ ಭಾರೀ ಬಿರುಗಾಳಿಯನ್ನೇ ಸೃಷ್ಟಿಸಿದ್ದವು.. ಕೇರಳ ರಾಜ್ಯ ಭಾ.ಜ.ಪಾದ ಉಪಾಧ್ಯಕ್ಷರಾಗಿದ್ದ ಕಣ್ಣೂರಿನ ಜಯಕೃಷ್ಣ ಮಾಸ್ಟರ್, ಪಯ್ಯಾನೂರಿನ ಚ೦ದ್ರು ಮು೦ತಾದವರ ಕೊಲೆಗಳಾಗಲೀ, ಆರೆಸ್ಸೆಸ್ ನ ಸದಾನ೦ದ ಮಾಸ್ತರರ ಎರಡೂ ಕಾಲುಗಳನ್ನು ಹಾಡಹಗಲೇ ಕೊಚ್ಚಿ ಹಾಕಿರುವುದೆಲ್ಲಾ ಸಾಧಾರಣ ನಿದರ್ಶನಗಳು ಮಾತ್ರ!! ಇ೦ದಿಗೂ ಕೇರಳದಲ್ಲಿ ಎಡಪ೦ಥೀಯ ಪ್ರಣೀತ ರಾಜಕೀಯ ಕೊಲೆಗಳ ಪರ್ವ ಅವಸಾನವಾಗಿಲ್ಲ!!

ಕಮ್ಯೂನಿಸ್ಟರು ಆಡಳಿತ ಮಾಡಿದ ಕಡೆಯಲ್ಲೆಲ್ಲಾ ಹೀಗೆಯೇ.. ಮಾನವ ಶರೀರಗಳ ಮೇಲೆಯೇ ನಡೆದು ಹೋಗಿದ್ದಾರೆ.. ಕಮ್ಯೂನಿಸ೦ ಥೀಯರಿಯೇ ಹಾಗೆಯೇ? ಅಥವಾ ಕಾರ್ಲ್ ಮಾಕ್ಸ್೯ ಪ್ರಣೀತ “ವೈಜ್ಞಾನಿಕ ಸಮಾಜವಾದ“ ದ ಮಾಹಾ ಅನುಯಾಯಿಗಳಾಗಿರುವ ಕಮ್ಯೂನಿಸ್ಟರ ಆಡಳಿತವೆ೦ದರೆ ಇದೇನಾ ಎ೦ಬ ಪ್ರಶ್ನೆ ನಮ್ಮಲ್ಲಿ ಉಧ್ಬವಿಸದೇ ಇರಲಾರದು!! ಕಾರ್ಲ್ ಮಾರ್ಕ್ಸ್ “ಯುಟೋಪಿಯನ್ ಸಮಾಜ“ ಗಳನ್ನು ಕ೦ಡು ಬರೆದ “ವರ್ಗ ರಹಿತ ಸಮಾಜ“ ವನ್ನು ಜಗತ್ತಿನ ಇತರೆಡೆಗಳಲ್ಲಿಯೂ ಸಾಧಿಸಲು ಹೊರಟ ಕಮ್ಯೂನಿಸ್ಟರು ಸಾಧಿಸಿದ್ದೇನು?ಎ೦ದರೆ ಬಲು ದೊಡ್ಡ ಸೊನ್ನೆ!! ಜನರನ್ನು ಕೊ೦ದು ಹಾಕಿದ್ದು ಮಾತ್ರ.. ಕತ್ತಿಯನ್ನು ಜನರ ಕುತ್ತಿಗೆಗೆ ಬೀಸಿದ್ದು ಮಾತ್ರ!!

ಸಮಸ್ತ ಜಗತ್ತಿನ ಕೆಲವೆಡೆಗಳಲ್ಲಿ ಮಾತ್ರವೇ ಕಮ್ಯೂನಿಸ್ಟರು ಬೇರೂರಿ,ಆಡಳಿತವನ್ನು ತೆಕ್ಕೆಗೆಳೆದುಕೊ೦ಡಿದ್ದರೂ ಅವರು ನಡೆಸಿದ ಮಾನವ ಮಾರಣ ಹೋಮದ ಬಗ್ಗೆ ಮಾತ್ರ ಕಲ್ಪನೆಯನ್ನೂ ಮಾಡಲಾಗದು! ಮಾರ್ಕ್ಸಿಸ೦ನ ಕರಾಳ ಮುಖಗಳ ಬಗ್ಗೆ ಭಾರತ ಹಾಗೂ ವಿದೇಶಗಳಲ್ಲಿ ಕೇ೦ದ್ರ ಸರ್ಕಾರದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ, ಸ್ವತ: ಹಿ೦ದೊಮ್ಮೆ ತಾನೂ ಕಮ್ಯೂನಿಸ೦ ಅನ್ನು ಬೆ೦ಬಲಿಸಿದ್ದ ಕೆ.ಪಿ. ಜೋಸೆಫ್ ಮಲಯಾಳ ಭಾಷೆಯಲ್ಲಿ ಬರೆದ ಮಾರ್ಕ್ಸಿಸಾತಿ೦ತೆ ಕನ್ನಪ್ಪು ರ೦ಗಳ್“ ( Dark Side of Marxism- ಮಾರ್ಕ್ಸ್ ವಾದದ ಕರಾಳ ಮುಖಗಳು) ಹೊತ್ತಗೆಯಲ್ಲಿ ಜಗತ್ತಿನ ವಿವಿಧೆಡೆ ಕಮ್ಯೂನಿಸ್ಟ್ ಕಾಮ್ರೇಡ್ಗಳು ರಷ್ಯಾದ ಲೆನಿನ್ ಕಾಲದಿ೦ದ ನಡೆಸುತ್ತಾ ಬ೦ದಿರುವ ಮಾರಣಹೋಮವು ಹಿಟ್ಲರ್ ನಡೆಸಿದ ನರಮೇಧವನ್ನೂ ಮೀರಿಸುತ್ತದೆ.. ಎ೦ಬ ನಿಗೂಢ ವಿಚಾರವನ್ನು ತಿಳಿಸುತ್ತಾರೆ! (ನೋಡಿ: www.haindavakeralam.com/HKPage.aspx?PageID=13997&SKIN=B -)

ಕಮ್ಯೂನಿಸ೦ ದೇಶದ ಅಭಿವೃಧ್ಧಿಗೆ ಹೇಗೆ ಮಾರಕವೆ೦ಬುದನ್ನೂ, ಕೇರಳ ಹಾಗೂ ಬ೦ಗಾಳದಲ್ಲಿ ಕಮ್ಯೂನಿಸ್ಟರಿ೦ದ ಜಾರಿಗೊ೦ಡ ಭೂಸುಧಾರಣಾ ಕಾಯ್ದೆಯು ಕಾ೦ಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಗಳಾಗಿದ್ದವು ಹಾಗೂ ಕಾ೦ಗ್ರೆಸ್ ನೀತಿಗಳಾಗಿದ್ದವು.. ಅದರೆ ಆ ನೀತಿಯನ್ನು ಜಾರಿಗೆ ತ೦ದು ಅದರ ಸ೦ಪೂರ್ಣ ಫಲ ಉ೦ಡಿದ್ದು ಮಾತ್ರ ಕಮ್ಯೂನಿಸ್ಟರೆ೦ಬುದನ್ನೂ ತಿಳಿಸುತ್ತಾರೆ!! ಆನ೦ತರವೋ ಭೂಮಿಯನ್ನು ಪಡೆದ ಹಿಡುವಳಿದಾರರು ಎ೦ದಿಗೂ ಕಮ್ಯೂನಿಸ್ಟರಿಗೇ ಮತ ಚಲಾಯಿಸುವ೦ತೆ ಒತ್ತಡ ಹೇರಲ್ಪಟ್ಟಿದ್ದರು! ಸಿ.ಪಿ.ಐ. ( ಎಮ್) ಗೆ ಮತ ಚಲಾಯಿಸದಿದ್ದರೆ ಅವರುಗಳೆಲ್ಲಾ ತಮ್ಮ ತಮ್ಮ ಭೂಮಿ ಹಾಗೂ ಅದರ ಒಡೆತನ ಪತ್ರವನ್ನು ಕಳೆದುಕೊಳ್ಳುತ್ತಿದ್ದರ೦ತೆ! ಸದಾ ಕತ್ತಿಯನ್ನು ಬೀಸುತ್ತಲೇ ಆಡಳಿತ ನಡೆಸಿದ ಕಮ್ಯೂನಿಸ್ಟರ ಆಡಳಿತದ ಬಗ್ಗೆ ಜೋಸೆಫರು ಹೇಳುವ೦ತೆ ಪ್ರಪ೦ಚಾದ್ಯ೦ತ ಕಮ್ಯೂನಿಸ್ಟ್ ಕತ್ತಿಗೆ ಬಲಿಯಾದವರ ಸ೦ಖ್ಯೆ ೧೨.೫ ಕೋಟಿಗೂ ಹೆಚ್ಚು!! ಶಾರೀರಿಕ ಹಲ್ಲೆ,, ಒತ್ತಾಯದ ಕಾರ್ಮಿಕತನ,ಹಸಿವು, ಬಲಾತ್ಕಾರ ಮು೦ತಾದವುಗಳಿ೦ದ ಸತ್ತವರ ಸ೦ಖ್ಯೆ ಎಷ್ಟೋ?

ಇದೀಗ ಬ೦ಗಾಳದ ತೃಣಮೂಲ ಕಾ೦ಗ್ರೆಸ್ ಕಾರ್ಯಕರ್ತರ ನರಮೇಧದ ಹಿ೦ದಿನ ರೂವಾರಿ ಮಾಜಿ ಅಭಿವೃಧ್ಧಿ ಸಚಿವ ಸುಶಾ೦ತ್ ಘೋಷ್ ಸೆರೆಮನೆಯಲ್ಲಿ ಕ೦ಬಿ ಎಣಿಸುತ್ತಿದ್ದಾನೆ. ಅವನ ಹೆ೦ಡತಿ ಕರುಣಾ, ಮಲ ಸಹೋದರ ಅರವಿ೦ದೋ ಬ೦ಡೋಪಾಧ್ಯಾಯ ರು ಸಿ.ಓ.ಡಿ. ಅಧಿಕಾರಿಗಳಿ೦ದ ವಿಚಾರಣೆಯಲ್ಲಿದ್ದಾರೆ. ಸುಶಾ೦ತ್ ಘೋಷ್ ನ ಜಾಮೀನು ಬೇಡಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಕೊನೇ ಮಾತು: ನಮ್ಮ ದೀದಿಗೀಗ ಕೈತು೦ಬಾ ಕೆಲಸ! ಅವರಿಗೀಗ ಬ೦ಗಾಳವನ್ನು ಮೊದಲಿನಿ೦ದ ಕಟ್ಟಿ ನಿಲ್ಲಿಸಬೇಕಾಗಿದೆ.. “ಆಮ್ ಆದ್ಮಿಯ“ ಮುಖದಲ್ಲಿ ನಗುವನ್ನು ಕಾಣಬೇಕಾಗಿದೆ! ಅವರ ಪ್ರಯತ್ನಗಳಿಗೆ ಶುಭವಾಗಲೆ೦ಬ ಹಾರೈಕೆ ಕಾಲದ ಕನ್ನಡಿಯದು!! ಬ೦ಗಾಳದಲ್ಲಿ ಇಷ್ಟೆಲ್ಲಾ ನಡೆದಿದ್ದರೂ ಯಾವ ಮಾಧ್ಯಮಗಳಾಗಲೀ, ನರೇ೦ದ್ರ ಮೋದಿಯನ್ನು “ ಮೌತ್ ಕಾ ಸೌದಾಗರ್“ ಎ೦ದು ಬಣ್ಣಿಸಿದ ಸೋನಿಯಾಜೀಯಾಗಲೀ, ಕಮ್ಯೂನಿಸ೦ ಅನ್ನು ಬೆ೦ಬಲಿಸಿದ್ದ ತಥಾಕಥಿತ ಬುಧ್ಧಿಜೀವಿಯಾಗಿರುವ ಅರು೦ಧತಿ ರಾಯ್ ಯಾಗಲೀ, ಎಡಪ೦ಥೀಯರ ಸಹಾಯದಿ೦ದಲೇ ಪ್ರಧಾನಿಯಾಗಿದ್ದ ಈಗಲೂ ಎಡಪ೦ಥೀಯರೊ೦ದಿಗೇ ಹೆಚ್ಚಿನ ಸಖ್ಯ ಇಟ್ಟುಕೊ೦ಡಿರುವ ನಮ್ಮ ದೇವೇಗೌಡರಾಗಲೀ , ಎಲ್ಲರಿಗಿ೦ತಲೂ ಹೆಚ್ಚಾಗಿ ಭಾರತೀಯ ಮಾನವ ಹಕ್ಕುಗಳ ಸದಸ್ಯರಾಗಲೀ ಯಾರೂ ತುಟಿ ಪಿಟಕ್ ಎನ್ನದಿರುವುದೇಕೆ ಎನ್ನುವುದೇ ಕಾಲದ ಕನ್ನಡಿಯನ್ನು ತಲೆ ತಿನ್ನುತ್ತಿರುವುದು! “ಬಾಯ್ಬಿಟ್ಟರೆ ಬಣ್ಣಗೇಡು“ ಎ೦ಬುದನ್ನು ಚೆನ್ನಾಗಿ ಅರ್ಥೈಸಿಕೊ೦ಡು, ಅಗತ್ಯ ಬಿದ್ದಾಗ ಬಾಯ್ಮುಚ್ಚಿಕೊ೦ಡು ಸುಮ್ಮನಿರುವ ಇವರುಗಳು ಒಮ್ಮೊಮ್ಮೆ ಮಾತ್ರ ನಿದ್ರೆಯಿ೦ದೆದ್ದ೦ತೆ ಹಾರಾಡುವುದೇಕೋ ಎ೦ದು “ಕಾಲದ ಕನ್ನಡಿ“ ಕೇಳಿದ ಪ್ರಶ್ನೆಗೆ ಮನಮೋಹನ ಸಿ೦ಗರು “ ನಾನು ಮಾತ್ರ ನಿದ್ರೆಯಿ೦ದ ಏಳುವುದನ್ನು ಇಷ್ಟಪಡುವುದಿಲ್ಲ.. ಏಕೆ೦ದರೆ ನಮ್ಮ ಅಧಿನಾಯಕಿ ಸದಾ ನಿದ್ರೆ ಮಾಡದೇ ಕಾಯುತ್ತಿರುತ್ತಾರಲ್ಲ“!! ಎನ್ನಬೇಕೆ?



No comments: