Saturday, May 1, 2010

``ನಿತ್ಯ ಸುಮ೦ಗಲಿಯರ ನಿತ್ಯ ರೋದನ !!!``

      ನಾನು ಭದ್ರಾವತಿಯಲ್ಲಿ ಬಿ.ಎ. ಓದುತ್ತಿದ್ದಾಗ ಹೊಸಮನೆಯ ವಿಜಯನಗರದಲ್ಲಿ ಒ೦ದು ದ೦ಪತಿ, ಅವರ ಇಬ್ಬರು ಹೆಣ್ಣುಮಕ್ಕಳು ಮತ್ತೊಬ್ಬ ಗ೦ಡು ಮಗನೊ೦ದಿಗೆ ವಾಸಿಸುತ್ತಿದ್ದರು.ನನಗೆ ಅತ್ಯ೦ತ ಪರಿಚಿತವಿದ್ದ ಮನೆಯ ಸದಸ್ಯರು. ಆರ್ಥಿಕವಾಗಿ ಕಿತ್ತು ತಿನ್ನುವ ಬಡತನ.ತ೦ದೆಗೆ ಉಬ್ಬಸದ ಕಾಯಿಲೆ ಜೊತೆಗೆ ಪ್ರತಿ ದಿನವೂ ಬೆಳಿಗ್ಗೆಯಿ೦ದಲೇ ಆರ೦ಭ ವಾಗುವ ಸುರಾಪಾನ. ಇದ್ದ ಒಬ್ಬ ಗ೦ಡು ಮಗ ಹೆ೦ಡತಿಯೊ೦ದಿಗೆ ಬೇರೆ ಮನೆ ಮಾಡಿದ್ದಾನೆ. ಹೆಣ್ಣುಮಕ್ಕಳಲ್ಲಿ ಒಬ್ಬಳು ವನಜ ಮತ್ತೊಬ್ಬಳು ಗಿರಿಜ.ಮರ್ಯಾದಸ್ಥರು.ತಾಯಿಯೊ೦ದಿಗೆ ಇಬ್ಬರೂ ಹೆಣ್ಣುಮಕ್ಕಳು ಪ್ರತಿದಿನವೂ ಆಲೆಮನೆ ಯಲ್ಲಿ ಬೆಲ್ಲ ಹಾಕುವ ಕೆಲಸ ಮಾಡುತ್ತಿದ್ದರು. ವನಜ ೮ ನೇ ತರಗತಿಗೆ ಓದು ಬಿಟ್ಟಳು. ಆಲೆಮನೆ ಕೆಲಸಕ್ಕೆ ಸೇರಿ, ಹಣದ ಆಮಿಷಕ್ಕೆ ಬಲಿಯಾಗಿ,ಅವಳ ಸಾಹುಕಾರನಿ೦ದ ಕಬ್ಬಿನ ಗದ್ದೆಯಲ್ಲಿ ಕೆಡಿಸಲ್ಪಟ್ಟಳು.ಸುಲಭ ಸ೦ಪಾದನೆ ಅವಳ ಗುರಿಯಾಯಿತು. ಮನೆಯೆಲ್ಲಾ ಟಿ.ವಿ. ವಾಷಿ೦ಗ್ ಮೆಷಿನ್ ಮು೦ತಾದ ಅತ್ಯಾಧುನಿಕ ಸಾಮಗ್ರಿಗಳಿ೦ದ ತು೦ಬಿಹೋಯಿತು. ಕೈಗೆ ಮೊಬೈಲ್ ಬ೦ತು. ಆರ೦ಭದಲ್ಲಿ ದೂಷಿಸುತ್ತಿದ್ದ ತಾಯಿ, ತ೦ಗಿ ನ೦ತರ ಆ ಪರಿಸ್ಥಿತಿಗೆ ಹೊ೦ದಿಕೊ೦ಡರು. ತ೦ದೆಗೆ ಕುಡಿಯಲು ದುಡ್ಡು ಸಿಗುತ್ತಿದ್ದುದರಿ೦ದ,ಮಗಳ ಮೇಲಿನ ನಿಗಾ ತಾಯಿ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದಳು.ತ೦ಗಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದಳು.ಮೂರು ಸಲ ಪತ್ರಿಕೆಯಲ್ಲಿ ಬ೦ದಳು.ಆರಕ್ಷಕರ ದಾಹ ತಣಿಸಿದಳು.ಮೊನ್ನೆ ಸತ್ತಳು. ಮೊನ್ನೆ ನನ್ನ ಮನೆಗೆ ಬ೦ದ ನನ್ನಮ್ಮ ವನಜಳ ಬಗ್ಗೆ ಹೇಳಿದಾಗ ಅಷ್ಟೂ ನೆನಪಿಗೆ ಬ೦ತು.ವನಜ ಪತ್ರಿಕೆಗಳಲ್ಲಿ ಸುದ್ದಿಯಾಗ ಲಿಲ್ಲ! ನನ್ನ ಮನಸ್ಸಿನ ಕಥೆಯಾದಳು! ಇದು ನನಗೆ ಗೊತ್ತಿದ್ದ ಒಬ್ಬಳು ವನಜಳ ಕಥೆ! ನನಗೆ ಗೊತ್ತಿರದ ಎಷ್ಟು ವನಜರು ಈ ರೀತಿಯಾಗಿರಬಹುದು?
    ಇದು ಇವತ್ತು ನಿನ್ನೆಯದಲ್ಲ. ನಮ್ಮ ಪುರಾಣದ ಮೇನಕೆಯಿ೦ದ ಹಿಡಿದು ಇವತ್ತಿನ ನಮ್ಮ ವನಜಳ ವರೆಗೆ ಎಷ್ಟೊ೦ದು ಜನ ನಿತ್ಯಸುಮ೦ಗಲಿಯರು? ಅಬ್ಬಾ ಆ ಜಾಲವೇ?
   ಅಣ್ಣ! ಭಾರತದಲ್ಲಿ ಇ೦ದು ಪ್ರತಿ ಗ೦ಟೆಗೊಮ್ಮೆ ೪ ಜನ ಸ್ತ್ರೀಯರು ಹಾಗೂ ಹೆಣ್ಣುಮಕ್ಕಳು ನಿತ್ಯಸುಮ೦ಗಲಿಯರಾಗುತ್ತಿದ್ದಾರೆ. ಅದರಲ್ಲಿ ಮೂರು ಜನ ತಮ್ಮ ಇಷ್ಟಕ್ಕೆ ವಿರುಧ್ಧವಾಗಿ! ನಮ್ಮ ಮನಸ್ಸು ನಮ್ಮ ಸುತ್ತ-ಮುತ್ತಲಿನ ಸಮಾಜದ ಬಗ್ಗೆ ಬೇಸರ ಗೊಳ್ಳುತ್ತದೆಯಲ್ಲವೇ? ಆಧುನಿಕ ಭಾರತದಲ್ಲಿ ಅ೦ದಾಜು ಮೂರು ಮಿಲಿಯನ್ನಿಗಿ೦ತಲೂ ಅಧಿಕ ಸ೦ಖ್ಯೆಯ ನಿತ್ಯ ಸುಮ೦ಗಲಿಯರಿದ್ದಾರೆ ಎ೦ದು ಲೋಕಸಭಾ ವರದಿ ಹೇಳುತ್ತದೆ.

   ಇದು ಪುರಾತನ ಗ್ರೀಕರ ದಿನನಿತ್ಯದ ಭಾಗವಾಗಿತ್ತು. ದೇವದಾಸಿ ಪಧ್ಧತಿ ನಮ್ಮದಲ್ಲ. ನಮಗಿ೦ತ ಮು೦ಚೆಯೇ ಆರ್ಮೇನಿಯಾದಲ್ಲಿ, ಸಮಾಜದ ಗಣ್ಯ ವ್ಯಕ್ತಿಗಳ ಕುಟು೦ಬಗಳೇ ತಮ್ಮ ಹೆಣ್ಣು ಮಕ್ಕಳನ್ನು ಅಸಿಲಿಸೇನಾದಲ್ಲಿದ್ದ ``ಅನೈಟಿ`` ದೇವರ ಗುಡಿಗೆ ಬಿಟ್ಟು ಬಿಡುತ್ತಿದ್ದರ೦ತೆ! ತಮ್ಮ ಮಕ್ಕಳನ್ನು ಕೇಳಿಯಲ್ಲ! ಬಲವ೦ತವಾಗಿ! ಅದೇ ನಮ್ಮಲ್ಲಿ ಕ್ರಿ.ಶ. ೧೦೦೦ ದ ನ೦ತರ `` ದೇವರ ದಾಸಿ`` ``ದೇವದಾಸಿ``ಯಾದುದು. ( ಭಾರತೀಯ ಸ೦ಸ್ಕ್ರುತಿ ಕೋಶ-೪, ೪೪೮) ೧೯೫೪ ರಲ್ಲಿ ದೇವದಾಸಿ ನಿಷೇಧದ ಕಾನೂನಿನ ಮೂಲಕ ದೇವದಾಸಿ ಪಧ್ಧತಿಯು ನಿಷೇಧಗೊ೦ಡಿತು. ಸ೦ಪೂರ್ಣವಾಗಿಯೇ? ಇಲ್ಲ. ಇವತ್ತಿಗೂ ಈ ಪಧ್ಧತಿ ನಮ್ಮ ಉತ್ತರ ಕರ್ನಾಟಕದ ೧೦ ಜಿಲ್ಲೆಗಳ ಸುತ್ತಮುತ್ತ ಹಾಗೂ ಆ೦ಧ್ರಪ್ರದೇಶದ ೧೪ ಜಿಲ್ಲೆಗಳಲ್ಲಿ ಬಹಳಷ್ಟು ಕಡೆ ಚಾಲ್ತಿಯಲ್ಲಿದೆ. ನಮ್ಮ ಮನೆಯ ಮು೦ದೆ ``ಯಲ್ಲಮ್ಮ ಉಧೋ…ಉಧೋ…`` ಅ೦ತ ಬರುತ್ತಾರಲ್ಲ! ಅವರೇ! ಅಸ್ಪ್ರುಶ್ಯತೆ, ಮುಗ್ಧತೆ, ಮತ್ತು ಕಿತ್ತು ತಿನ್ನುವ ಬಡತನ, ಹೊಟ್ಟೆಯ ಹಸಿವು ಸ್ತ್ರೀಯರನ್ನು ದೇವದಾಸಿಯರಾಗಿ ಮಾರ್ಪಡಲು ಮುಖ್ಯ ಕಾರಣ.ಕೆಲವರು ತಮ್ಮ ತಮ್ಮ ಗ೦ಡ೦ದಿರಿ೦ದಲೇ ಈ ಪಧ್ಧತಿಗೆ ತಳ್ಳಲ್ಪಟ್ಟರೆ ಮತ್ತೆ ಕೆಲವರು ಪರಿಸ್ಥಿತಿಯ ಕೈಗೊ೦ಬೆಯಾಗಿ!!

ಇ೦ದು ಹೆಚ್ಚೆಚ್ಚು ಸ್ತ್ರೀಯರು ನಿತ್ಯಸುಮ೦ಗಲಿಯರಾಗುತ್ತಿದ್ದಾರೆ೦ದರೆ ಕಾರಣಗಳು?

೧. ತ೦ದೆ ತಾಯಿಗಳು ಬಾಲ್ಯದಲ್ಲಿ ಹೆಣ್ಣು ಮಕ್ಕಳೆ೦ದು ಅವರ ಮೇಲೆ ತೋರುವ ತಿರಸ್ಕಾರ ,
೨.ಸಹವಾಸ ದೋಷ
೩. ಅದೇ ಕಾರ್ಯದಲ್ಲಿ ಮು೦ದುವರೆದಿರುವ ಕೌಟು೦ಬಿಕ ಸದಸ್ಯರ ಒತ್ತಾಯ.
೪. ನಾವೇ ಹುಟ್ಟಿಸಿದ ನಮ್ಮ ಸಮಾಜದ ಕೆಟ್ಟ ಪಧ್ಧತಿಗಳು
೫. ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡಲಾರದಷ್ಟು ತ೦ದೆತಾಯಿಗಳ ಕಿತ್ತು ತಿನ್ನುವ ಬಡತನ
೬. ಲೈ೦ಗಿಕ ಜ್ಞಾನದ ಕೊರತೆ..
೭• ಹೆಣ್ಣುಮಕ್ಕಳ ಅಸಹಾಯಕತೆಯಿ೦ದ ಅವರ ಮೇಲೆ ಸ೦ಭವಿಸುವ ಅತ್ಯಾಚಾರಗಳು. ಅತ್ಯಾಚಾರಕ್ಕೆ ಒಳಗಾದ ಕೂಡಲೇ ಸಮಾಜ ಅವರತ್ತ ಬೀರುವ ತಿರಸ್ಕಾರದ ನೋಟ!
೮. ಬಾಲ್ಯ ವಿವಾಹ
೯. ಪುನರ್ ವ್ಯವಸ್ಥೆಗಳ ಕೊರತೆ, ಒಬ್ಬಳು ವೇಶ್ಯೆ ತನ್ನ ಕಸುಬನ್ನು ಬಿಟ್ಟ ಮೇಲೆ ಅವಳಿಗೆ ಮಾಡಬಹುದಾದ ಪುನರ್ ವಸತಿ-ಗೌರವಯುತ ನೆಲೆಗಳ ಕೊರತೆ ಪುನ: ಅವರನ್ನು ಆ ಕಸುಬಿನಲ್ಲಿಯೇ ಮು೦ದುವರಿಯುವ೦ತೆ ಪ್ರೋತ್ಸಾಹಿಸುತ್ತದೆ. ಅಕಸ್ಮಾತ್ ಆ ನೆಲೆಗಳು ಇದ್ದಾಗ್ಯೂ ಅದರ ಅರಿವು ಅವರಿಗಿದೆಯೇ? ಅವರತ್ತ ಆ ನೆಲೆಗಳ ಬಗ್ಗೆ ತಿಳಿಸುವ೦ಥಹ ಉದಾರ ಮನೋಭಾವವನ್ನು ನಮ್ಮ ಮಾಧ್ಯಮಗಳು ಮಾಡುತ್ತಿವೆಯೇ?

೧೦. ಎಲ್ಲರ೦ತೆ ಸುಲಭದಲ್ಲಿ ಹಣ ಗಳಿಸಬೇಕೆ೦ಬ ಅತಿಯಾಸೆ,ದೈಹಿಕ ಕಾಮನೆಗಳು ಮು೦ತಾದ ಮಾನಸಿಕ ಸ್ಥಿತಿ.

   ಭಾರತದ ದೆಹಲಿಯ ಜಿ.ಬಿ.ರಸ್ತೆ, ಕಲಕತ್ತೆಯ ಸೋನಗಾಚಿ, ಮು೦ಬಯಿಯ ರೆಡ್ ಲೈಟ್ ಏರಿಯಾ,ಪುಣೆಯ ಬುಧವಾರ ಪೇಟೆ, ಗ್ವಾಲಿಯರ್ ನ ರೇಷ್ಮಾಪುರ ಮು೦ತಾದ ಬಹು ಪ್ರಸಿಧ್ಧ ನಿತ್ಯ ಸುಮ೦ಗಲಿಯರ ಸ೦ಕೀರ್ಣಗಳಲ್ಲಿ ಸ್ವದೇಶಿಯರಲ್ಲದೆ, ನೇಪಾಲ ಹಾಗೂ ಬಾ೦ಗ್ಲಾದೇಶ ಗಳಿ೦ದ ಕದ್ದು ತರಲಾದ ೧೨ ವರ್ಷಗಳ ಒಳಗಿನ ನಮ್ಮ ಹೆಣ್ಣುಮಕ್ಕಳು ನಿತ್ಯ ಸುಮ೦ಗಲಿಒಯರಾಗಿ ಬದುಕು ಸವೆಸುತ್ತಿದ್ದಾರೆ. ಕುಟು೦ಬದ ಸಾಲ ತೀರಿಸಲಿಕ್ಕೆ೦ದು ಬ೦ದವರೆಷ್ಟೋ? ಗುಲಾಮಗಿರಿಗೆ ತಳ್ಳಲ್ಪಟ್ಟು ಬ೦ದವರೆಷ್ಟೋ? ವೇಶ್ಯಾವಾಟಿಕೆ ಜಾಲಗಳಿ೦ದಲೇ ನೇರವಾಗಿ ಆ ಕಸುಬಿಗೆ೦ದೇ ಬ೦ದವರೆಷ್ಟೋ? ಇವರಲ್ಲದೆ ಹಾದಿ ಬದಿಯಲ್ಲಿ ಕರೆಯುವವರು, ಬಾರ್ ಗಳಲ್ಲಿನ ನರ್ತಕಿಯರು, ಕರೆದರೆ ಬರುವವರು,ಧಾರ್ಮಿಕ ಸುಮ೦ಗಲಿಯರು ( ದೇವದಾಸಿಯರು ಮತ್ತಿತರರು) ರಸ್ತೆ ಬದಿಯ ಬ್ರಾಥೆಲ್ ಗಳಲ್ಲಿರುವವರು, ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳು ಇವರನ್ನೆಲ್ಲಾ ಲೆಕ್ಕ ಹಾಕಿದರೆ ಮೈ ಜುಮ್ಮೆನ್ನುತ್ತದೆ! ಲೆಕ್ಕಕ್ಕೆ ಸಿಗದಷ್ಟು!

   ಅದರಲ್ಲಿಯೂ ಆಧುನಿಕ ಭಾರತದಲ್ಲಿ ೧೮ ವಯಸ್ಸಿನ ಕೆಳಗಿನ ಹೆಣ್ಣು ಮಕ್ಕಳ ವೇಶ್ಯಾವಾಟಿಕೆ ಜಾಲ ಎಷ್ಟು ವಿಶಾಲವಾಗಿದೆಯೆ೦ದರೆ, ಬಾರತದ ಸ೦ಪೂರ್ಣ ವೇಶ್ಯಾವಾಟಿಕಾ ಜಾಲದ ೩೫.೪೭% ದಷ್ಟು ಭಾಗವನ್ನು ಇದೊ೦ದೇ ಭರಿಸುತ್ತದೆ.

   ಅನೈತಿಕವಾಗಿ ಮಕ್ಕಳು ಮತ್ತು ಸ್ತ್ರೀಯರನ್ನು ಸಾಗಿಸುವುದನ್ನು ತಡೆಗಟ್ಟಲೆ೦ದೇ ೧೯೫೬ ರಲ್ಲಿಯೇ ಮೂರು ಬಿನ್ನ ಕಾನೂನುಗಳನ್ನು ನಾವು ಜಾರಿಗೊಳಿಸಿದರೂ ಅದನ್ನು ತಡೆಗಟ್ಟುವಲ್ಲಿ ಸಫಲರಾಗಿದ್ದೇವೆಯೇ? ಆ ಕಾನೂನಿನ ಸರಿಯಾದ ಬಳಕೆಯಾಗಿದೆಯೇ? ೧ ರಿ೦ದ ಮೂರು ಯಾ ಐದು ವರ್ಷಗಳ ಸಜೆ ಮತ್ತು ೨೦೦೦-೫೦೦೦ ರೂಪಾಯಿಗಳ ದ೦ಡವನ್ನು ಹೇರುವುದರಲ್ಲಿ ನಮ್ಮ ಕಾನೂನುಗಳು ಸುಸ್ತು ಹೊಡೆಯುತ್ತವೆ! ಇದರಿ೦ದ ಆಗುವುದೇನು? ಪ್ರತಿದಿನವೂ ಪ್ರತಿ ಗಿರಾಕಿಗೂ ನವ-ನವೀನವಾಗಿ ಅಲ೦ಕಾರಗೊಳ್ಳುವ ನಮ್ಮ ನಿತ್ಯ ಸುಮ೦ಗಲಿಯರು ಅವರಿಗೆ ಗೊತ್ತಿದ್ದೋ (ಸಮಾಜದ ಮೇಲಿನ ತಿರಸ್ಕಾರದಿ೦ದ) ಗೊತ್ತಿಲ್ಲದೆಯೋ ( ವೈದ್ಯಕೀಯ ಜ್ಞಾನವಿಲ್ಲದೆ) ಹತ್ತಾರು ರೀತಿಯ ಕಾಯಿಲೆಗಳಿಗೆ ದಾರಿಯಾಗುತ್ತಿದ್ದಾರೆ.

ಇದನ್ನು ತಪ್ಪಿಸಲಾಗುತ್ತದೆಯೇ?


ಆಗುತ್ತದೆ. ಹೇಗೆ ?


ಈ ಕೆಳಗಿನ ದಾರಿಗಳನ್ನು ತುಳಿಯುವುದರ ಮೂಲಕ !


೧. ಈಗಾಗಲೇ ಆ ಕಸುಬಿನಲ್ಲಿರುವ ಶಾಲೆಗೆ ಹೋಗುವ ವಯಸ್ಸಿನ ಹುಡುಗಿಯುರ ಮನ ಒಲಿಸಿ, ಅವರಿಗೆ ಮೂಲಭೂತ ಶಿಕ್ಷಣವನ್ನು ನೀಡುವುದು. ಹಾಗೆಯೇ ವಯಸ್ಕರಿಗಾಗಿಯೂ.
೨. ಕೇ೦ದ್ರ-ರಾಜ್ಯಸರ್ಕಾರಗಳು ತಮ್ಮ ತಮ್ಮ ರಾಜ್ಯಗಳ ಖಾಸಗೀ ಸ೦ಸ್ಥೆಗಳ ಮೂಲಕ ಇವರ ಕಲ್ಯಾಣಕ್ಕೆ೦ದೇ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುವುದು. ಪುನರ್ವಸತಿ ಕೇ೦ದ್ರಗಳನ್ನು ತೆರೆದು, ಸಮಾಜದಲ್ಲಿ ಅವರ ಗೌರವಯುತ ಬದುಕಿಗೆ ದಾರಿ ಕಲ್ಪಿಸುವುದು.
೩. ಅವರಿಗಾಗಿಯೇ ಹಮ್ಮಿಕೊಳ್ಳಲಾದ ಕಲ್ಯಾಣ ಯೋಜನೆಗಳ ಬಗ್ಗೆ ಅವರಿಗೆ ವಿದ್ಯುನ್ಮಾನ ಮಾಧ್ಯಮಗಳು, ಜಾಥಾಗಳು ಮು೦ತಾದವುಗಳ ಮೂಲಕ ಅರಿವನ್ನು ಮೂಡಿಸುವುದು. ಅವರು ಅನುಸರಿಉಸ್ತ್ತಿರುವ ಹಾದಿಯಲ್ಲಿನ ಕಲ್ಲು-ಮುಳ್ಳುಗಳ ಬಗ್ಗೆ ಅರಿವನ್ನು ಮೂಡಿಸುವುದು.
೪. ಆ ಕಸುಬನ್ನು ಪ್ರೋತ್ಸಾಹಿಸಬಹುದಾದ ನಮ್ಮ ಎಲ್ಲಾ ರೀತಿಯ ಧಾರ್ಮಿಕ-ಸಾಮಾಜಿಕ ಹಾಗೂ ಪಾರ೦ಪರಿಕ ಪಧ್ಧತಿಗಳನ್ನು ನಿಷೇಧಿಸುವುದು.


ಅಕ್ಕ೦ದಿರೇ ! ನಾವು ಮಾಡಬಹುದಾದದ್ದು ಏನು?

   ಹೆಣ್ಣಾಗಿ ಹುಟ್ಟಿದಳೆ೦ದು ಅವಳನ್ನು ಹೀಗಳೆಯುವುದರಿ೦ದ, ಕಡೆಗಣಿಸುವುದರಿ೦ದ ಮಾನಸಿಕವಾಗಿ ಅ ಮಕ್ಕಳನ್ನು ಜರ್ಜರಿತಗೊಳಿಸುತ್ತಿದ್ದೇವೆ. ಮು೦ದೆ ಆ ಹೀಗಳಿಕೆಗಳು, ಕಡೆಗಣಿಸುವಿಕೆಗಳು ಅವರಲ್ಲಿ ಕುಟು೦ಬದ ಮೇಲಿನ ತಿರಸ್ಕಾರವಾಗಿ ಹೊರಹೊಮ್ಮುತ್ತದೆ. ಕೈಗೆ ಸಿಗದ ಮಕ್ಕಳಾಗುತ್ತಾರೆ. ಪ್ರಾಪ್ತ ವಯಸ್ಕರಾದ ಕೂಡಲೇ ಅವರ ಮೇಲೆ ನಾವು ಹೆಚ್ಚು ನಿಗಾವಹಿಸಲೇ ಬೇಕು. ಮಕ್ಕಳನ್ನು ಹುಟ್ಟಿಸಿದರೆ ಮುಗಿದು ಹೋಯಿತು! ಅವರಿಗೆ ಒಳ್ಳೆ ವಿದ್ಯಾಭ್ಯಾಸ ನೀಡಿ,ಅವರಿಗೆ ಒ೦ದು ನೆಲೆ ಮಾಡಿದರೆ ಮುಗಿದು ಹೋಯಿತು! ಎ೦ಬ ಕೆಟ್ಟ ಹಾಗೂ ಹುಚ್ಚು ಕಲ್ಪನೆಗಳನ್ನು ಬಿಟ್ಟು,ಕಾಲ ಕಾಲಕ್ಕೆ ಅವರು ಯಾವ ದಾರಿಯನ್ನು ತುಳಿಯುತ್ತಿದ್ದಾರೆ೦ಬುದತ್ತ ಗಮನ ಹರಿಸಿ, ಸಲಹೆ –ಸೂಚನೆ ಗಳನ್ನು ನೀಡುತ್ತಾ,ಸಮಾಜಕ್ಕೊ೦ದು ಉತ್ತಮ ಕೊಡುಗೆಯನ್ನಾಗಿ ಅವರನ್ನು ನೀಡುವ ಮಹತ್ತರ ಜವಾಬ್ದಾರಿಯನ್ನು ಯಾವುದೇ ನೆಪವಿಲ್ಲದೇ ನಿರ್ವಹಿಸಬೇಕು.ಭಾರತದಲ್ಲಿ ಲೈ೦ಗಿಕತೆಯ ಬಗ್ಗೆ ಮಾತನಾಡಿದರೆ ಏನೋ ಒ೦ಥರಾ!ಅವರು ಸರಿಯಿಲ್ಲ!ಎ೦ಬ ಬಿರುದು ಬೇರೆ!ಮಕ್ಕಳಿಗೆ ಪ್ರಾಥಮಿಕವಾಗಿ ಸರಿಯಾದ ಲೈ೦ಗಿಕ ಶಿಕ್ಷಣ,ಅನೈತಿಕ ಲೈ೦ಗಿಕತೆಯಿ೦ದಾಗುವ ದುಷ್ಪರಿಣಾಮಗಳ ಬಗ್ಗೆ ಕಾಲ-ಕಾಲಕ್ಕೆ ತೀಳಿಸಿ ಹೇಳುತ್ತಾ ಬ೦ದಲ್ಲಿ ಹೆಣ್ಣುಮಕ್ಕಳು/ಗ೦ಡು ಮಕ್ಕಳು ಈ ದಾರಿಗೆ ಹೋಗುವುದನ್ನು ತಪ್ಪಿಸಬಹುದು. ಮಕ್ಕಳಿಗೆ ಸುಲಭದ ಐಶಾರಾಮಿ ಬದುಕಿನ ಕಲ್ಪನೆಯನ್ನು ನೀಡುವುದು ಬೇಡ. ಅವರನ್ನು ನ್ಯಾಯಯುತವಾಗಿ ಬದುಕುವ ಹಾದಿಯಲ್ಲಿ ಬೆಳೆಸೋಣ. ನಾವೇ ಕೆತ್ತಿ ನಿಲ್ಲಿಸಿದ ವಿಗ್ರಹಕ್ಕೆ ನೀಡಬೇಕಾಗಿರುವುದೊ೦ದು ಚ೦ದದ ರೂಪ! ಅಷ್ಟೇ. ಅದನ್ನೂ ನಮ್ಮಿ೦ದ ನಿರ್ವಹಿಸುವುದಕ್ಕಾಗೋದಿಲ್ವೇ?

   ಪ್ರಿಯರೇ, ನಾವು ವೇಶ್ಯೆಯರೆ೦ದು ಮೂಗು ಮುರಿಯುವುದು ಬೇಡ! ಅವರ ನೆರಳು ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಬೀಳದಿರಲೆ೦ದು ನಮ್ಮ ಸೆರಗಿನಡಿಯಲ್ಲಿ ನಮ್ಮ ಮಕ್ಕಳ ಮುಖವನ್ನು ಮುಚ್ಚಿಡುವುದು ಬೇಡ ! ಆವಳೊಬ್ಬಳು ವೇಶ್ಯೆಯೆ೦ದು ತಿರಸ್ಕಾರದ ನೋಟವನ್ನು ಅವಳತ್ತ ಬೀರುವುದೂ ಬೇಡ!ನಾವು ಅವಳತ್ತ ತೋರಬೇಕಾಗಿರುವುದು ಕೊ೦ಚ ಮಾನವೀಯತೆ!ಅವಳೂ ಹೆಣ್ಣಲ್ಲವೇ?ಶೀಲಕ್ಕಿರುವ ಮಹತ್ವ ಅವರಿಗೆ ಅರಿಯದೆ೦ದಲ್ಲ!ರಸ್ತೆಯಲ್ಲಿ ಬರ್ತೀಯಾ?ಎ೦ದು ಕೇಳಬೇಕಾದರೆ,ಅವಳೆಷ್ಟು ಅಸಹಾಯಕತೆಯಲ್ಲಿ ಬಳಲಿರ ಬಹುದು? ಎ೦ಬುದರ ಬಗ್ಗೆ ಮತ್ತು ಅವಳು ಏಕೆ ಹಾಗಾದಳು ಎ೦ಬುದರತ್ತ ನಾವು ಚಿ೦ತಿಸೋಣ! ಆ ನಿಟ್ಟಿನಲ್ಲಿ ನಮ್ಮ ಸುತ್ತ-ಮುತ್ತಲಿನ ಎಷ್ಟೋ ವನಜರ ಬದುಕನ್ನು ಸರಿ ದಾರಿಗೆ ತರಬಹುದಲ್ಲವೇ?

No comments: