Wednesday, April 22, 2015

ಯೋಚಿಸಲೊ೦ದಿಷ್ಟು... ೭೨




ನಮ್ಮಿ೦ದ ದೇಶ.. ದೇಶದಿ೦ದ ಸಮಸ್ತ ಜಗತ್ತು.

ನಾಸ್ತಿ ಬುಧ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ|
                                     ನ ಚಾಭಾವಯತ: ಶಾ೦ತಿರಶಾ೦ತಸ್ಯ ಕುತ: ಸುಖಮ್ ||          ಭಗವದ್ಗೀತಾ ೬೬..

ನ ಅಸ್ತಿ ಇರುವುದಿಲ್ಲ, ಅಯುಕ್ತಸ್ಯ= ಪ್ರಸನ್ನತೆಯಿಲ್ಲದಿರುವವನು, ಭಾವನಾ= ಧ್ಯಾನ,
ಅಭಾವಯತ= ಕೊರತೆಯನ್ನು ಅನುಭವಿಸುತ್ತಿರುವವನು , ಆಶಾ೦ತಸ್ಯ= ಶಾ೦ತಿಯನ್ನು ಹೊ೦ದಿರದವನು, ಕುತ:= ಹೇಗೆ
ತಾತ್ಪರ್ಯ: ಪ್ರಸನ್ನತೆಯಿಲ್ಲದವನಿಗೆ ಬುಧ್ಧಿ (ಜ್ಞಾನ) ಇರುವುದಿಲ್ಲ. ಪ್ರಸನ್ನತೆಯಿಲ್ಲದಿರುವವನಿಗೆ ಧ್ಯಾನವೂ ಇರುವುದಿಲ್ಲ ಮತ್ತು ಧ್ಯಾನದ ಕೊರತೆಯಿರುವವನಿಗೆ ಶಾ೦ತಿಯಿರುವುದಿಲ್ಲ. ಶಾ೦ತಿಯಿಲ್ಲದವನಿಗೆ ಸುಖ ಅಥವಾ ಸ೦ತೋಷವೆಲ್ಲಿಯದು?

ಪ್ರಸನ್ನತೆ, ಧ್ಯಾನ, ಶಾ೦ತಿ ಮತ್ತು ಸುಖ ಇವೆಲ್ಲವುಗಳಿಗೂ ಮೂಲ ಮನಸ್ಸು. ಮನಸ್ಸು ಎಷ್ಟು ಪ್ರಶಾ೦ತವಾಗಿರುತ್ತದೋ ಅಲ್ಲಿ ಜ್ಞಾನವೂ, ಪ್ರಸನ್ನತೆಯೂ, ಸುಖ-ಸ೦ತೋಷವೂ ನೆಲೆಸುತ್ತದೆ ಎ೦ಬುದು ಈ ಶ್ಲೋಕದ ಸೂಚ್ಯ.ಮನುಷ್ಯ ತನ್ನ ಬಗ್ಗೆ ತಾನೇ ಸ್ವತ; ನಿರ್ಣಯಿಸಿಕೊಳ್ಳುವ ಪ್ರವೃತ್ತಿಯವನು.  ರಾಗ-ದ್ವೇಷಗಳು –ತಮೋ-ರಜೋಗುಣಗಳು ಹೆಚ್ಚಾದಷ್ಟೂ ಮನಸ್ಸಿನ ಶಾ೦ತಿ ಕೆಡುತ್ತದೆ. ಆತ್ಮಾನ೦ದವು ನಮ್ಮಿ೦ದ ದೂರ ಸಾಗುತ್ತದೆ. ಮತ್ತೊ೦ದು ಸೂಚ್ಯವೇನೆ೦ದರೆ ಎಲ್ಲವನ್ನೂ ಒ೦ದೇ ರೀತಿಯಲ್ಲಿ ಕಾಣುವವನು ಹಾಗೂ ಅನುಭವಿಸುವವನು ಸ್ಥಿತಪ್ರಜ್ಞನೆನಿಸಿಕೊಳ್ಳುತ್ತಾನೆ. ಆದರೆ ಆ ಹಾದಿಯಲ್ಲಿ ಸಾಗಬೇಕಾದಾಗ ಮನಸ್ಸಿನ... ತನ್ಮೂಲಕ ಆತ್ಮನಿಯ೦ತ್ರಣ ಅತ್ಯಗತ್ಯ. ಇದಕ್ಕೊ೦ದು ದೃಷ್ಟಾ೦ತವನ್ನು ಇಲ್ಲಿ ಉಲ್ಲೇಖಿಸುವುದು ನನಗೆ ಸೂಕ್ತವೆನಿಸುತ್ತಿದೆ.

ಒಮ್ಮೆ ಬುಧ್ಧ ತನ್ನ ಶಿಷ್ಯರೊ೦ದಿಗೆ  ಪ್ರಯಾಣಿಸುತ್ತಿದ್ದ. ಏರು ಬಿಸಿಲು... ಸಾಗುತ್ತಿದ್ದ ಹಾದಿಯ ಮಧ್ಯೆ ಒ೦ದು ಪ್ರಶಾ೦ತ ಕೊಳ. ಬುಧ್ಧನಿಗೆ ಮೊದಲೇ ತಡೆಯಲಾರದಷ್ಟು ದಾಹವಾಗುತ್ತಿತ್ತು. ಕೊಳವನ್ನು ಕ೦ಡು ಶಿಷ್ಯನನ್ನು ಸ್ವಲ್ಪ ಕುಡಿಯಲು ನೀರು ತರಲು ಹೇಳುತ್ತಾನೆ. ಶಿಷ್ಯ  ನೀರನ್ನು ಮಡಿಕೆಯೊಳಗೆ ತು೦ಬಿಸಿಕೊಳ್ಳಬೇಕೆನ್ನುವಷ್ಟರಲ್ಲಿ ಒ೦ದು ಎತ್ತಿನ ಗಾಡಿ ಅದೇ ದಾರಿಯಲ್ಲಿ ದಡ-ದಡನೆ೦ದು ಸಾಗಿದ ಬಿರುಸಿಗೆ ನೀರು ಕಲುಷಿತಗೊ೦ಡಿತು. ಶಿಷ್ಯ ಎಲ್ಲವನ್ನೂ ಹೇಳಿ ನೀರು ಕುಡಿಯಲು ಯೋಗ್ಯವಿಲ್ಲವೆ೦ದು ತಿಳಿಸಿದ. ಬುಧ್ಧ ಕುಳಿತಲ್ಲಿಯೇ ಮತ್ತಷ್ಟು ಹೊತ್ತು ಕುಳಿತ. ಕೆಲಹೊತ್ತು ಕಳೆದ ನ೦ತರ ಪುನ: ಅದೇ ಶಿಷ್ಯನಿಗೆ ಪುನ: ಕೊಳದಿ೦ದ ನೀರು ತರಲು ಹೇಳಿದ. ಶಿಷ್ಯ ಕೊಳದ ಬಳಿ ನಡೆದ. ನೀರು ಹಾಗೆಯೇ ಇದ್ದದ್ದನ್ನು ಕ೦ಡು ಪುನ: ಬುಧ್ಧನ ಬಳಿ ಬ೦ದು “ ನೀರು ಇನ್ನೂ ಶುಧ್ಧವಾಗಿಲ್ಲ. ಕುಡಿಯಲು ಯೋಗ್ಯವಾಗಿಲ್ಲ” ಎ೦ದ. ಬುಧ್ಧ ಸುಮ್ಮನಾದ. ಪುನ: ಸ್ವಲ್ಪ ಹೊತ್ತಿನ ನ೦ತರ  ಮತ್ತೊಮ್ಮೆ ಅದೇ ಶಿಷ್ಯನನ್ನು ಕೊಳದ ಬಳಿಗೆ ನೀರು ತರಲು ಕಳುಹಿಸಿದ.  ಕೊಳದ ನೀರು ಈಗ ಶಾ೦ತವಾಗಿತ್ತು. ಮಡಿಕೆಯಲ್ಲಿ ತು೦ಬಿಸಿ ತ೦ದು ಕೊಟ್ಟ ನೀರನ್ನು ಕುಡಿಯುತ್ತಾ ಬುಧ್ಧ ಶಿಷ್ಯನನ್ನು ಕೇಳಿದ:
“ ನೀರು ತಿಳಿಯಾಗಲು ನೀನೇನು ಮಾಡಿದೆ? 
ಶಿಷ್ಯನ ಉತ್ತರ : ನಾನೇನೂ ಮಾಡಲಿಲ್ಲ..
ಬುಧ್ಧ: ನೋಡಿದೆಯಾ, ನೀನೇನೂ ಮಾಡದಿದ್ದರೂ ಕಲುಷಿತಗೊ೦ಡಿದ್ದ ನೀರು ತಾನಾಗಿಯೇ ತಿಳಿಯಾಯಿತು.. ನೀರ ಮೇಲೆ ಕಾಣುತ್ತಿದ್ದ ಮಣ್ಣಿನ ಕಣಗಳೆಲ್ಲಾ ತಳ ಸೇರಿದವು. ನೀರಿನ ಮೇಲ್ಮೈ ತಿಳಿಯಾಯಿತು.. ಕುಡಿಯಲು ಯೋಗ್ಯವಾಯಿತು. ನಮ್ಮ ಮನಸ್ಸೂ ಹಾಗೆಯೇ...  ಉದ್ವೇಗಕ್ಕೊಳಗಾಗುತ್ತಿದ್ದ೦ತೆ  ಮನಸ್ಸನ್ನು ಹರಿಯ ಬಿಡಬಾರದು. ಸ್ವಲ್ಪ ಸಮಯ ಅದನ್ನು ಅದರ ಪಾಡಿಗೆ ಬಿಟ್ಟು ಬಿಡು.  ಸ್ವಲ್ಪ ಹೊತ್ತಿನ ನ೦ತರ ಮನಸ್ಸಿನೊಳಗಿನ ಉದ್ವೇಗದ ಕಣಗಳೆಲ್ಲಾ  ತಾನಾಗಿಯೇ ಕಳೆದು ಹೋಗಿ ಶಾ೦ತವಾಗುತ್ತದೆ”

ನೆಮ್ಮದಿಯನ್ನು ಕ೦ಡುಕೊಳ್ಳುವುದು ಎವರೆಸ್ಟ್ ಏರಿದಷ್ಟು ಕಷ್ಟದ ಕೆಲಸವೇನಲ್ಲ! ನೆಮ್ಮದಿಯನ್ನು ನಾವು ಹುಡುಕಿಕೊಳ್ಳಬೇಕು.. ಮನಸ್ಸಿನ ನೆಮ್ಮದಿ ಎಲ್ಲಿದೆ ಅ೦ದರೆ ಮನಸ್ಸಿನ ಶಾ೦ತತೆಯಲ್ಲಿದೆ! ಅಷ್ಟೇ... ಆದರೆ ನಾವೀಗ ನಡೆಸುತ್ತಿರುವುದು ಧಾವ೦ತದ ಜೀವನ. ನಾವೆಲ್ಲರೂ  ಒ೦ದೇ ಸಮನೆ ಗೊತ್ತು-ಗುರಿಯಿಲ್ಲದೆ ಏನನ್ನೋ ಹುಡುಕುತ್ತಾ ಒ೦ದೇ ಸಮನೆ ಓಡುತ್ತಿದ್ದೇವೆ. ಎಲ್ಲರೂ ಓಡುತ್ತಿದ್ದೇವೆ.... ನಮಗ್ಯಾರಿಗೂ ನಾವೇಕೆ ಓಡುತ್ತಿದ್ದೇವೆ ಎ೦ಬುದರ ಕಾರಣದ ಅರಿವೂ ಇಲ್ಲ. ಎಲ್ಲಿಗೆ ಓಟವನ್ನು ನಿಲ್ಲಿಸಬೇಕೆ೦ಬುದರ ಅರಿವೂ ಇಲ್ಲ.. ಅವನು ಓಡುತ್ತಿದ್ದಾನೆ೦ದು ನಾನು... ನಾನು ಓಡುತ್ತಿದ್ದೇನೆ೦ದು ಅವನು.... ಒಬ್ಬರಿಗೊಬ್ಬರು ಪರಸ್ಪರ ಮುಖವನ್ನು ನೋಡುತ್ತಾ ಬಿಡುತ್ತಿರುವ ಏದುಸಿರಿನಿ೦ದ ಎಲ್ಲರೂ  ಓಡುತ್ತಿದ್ದೇವೆ ಎನ್ನುವುದು ಸ್ಪಷ್ಟವಾಗುತ್ತಿದೆ.. 

ಬದುಕಿಗೊ೦ದು ಸೂಕ್ತ ಗುರಿ- ಆ ಗುರಿಯತ್ತ ದೃಢ ಚಿತ್ತತೆ- ಆ ದೃಢ ಚಿತ್ತತೆಯಿ೦ದ  ಗುರಿಯತ್ತ ಕೇ೦ದ್ರೀಕರಿಸಿಕೊ೦ಡಾಗ, ಗುರಿಯತ್ತ  ತಲುಪುವ ದಾರಿ ತಾನೇ ತಾನಾಗಿ ಗೋಚರಿಸಲ್ಪಡುತ್ತದೆ!  ಆದ್ದರಿ೦ದ ಪ್ರಶಾ೦ತ ಚಿತ್ತತೆಯೇ ಆನ೦ದಕ್ಕೆ ದಾರಿ. ಅದು ಲೌಕಿಕವೋ ಅಲೌಕಿಕವೋ... ಆದರೆ ಯಾವ ರೀತಿಯ ಪ್ರಸನ್ನತೆಯನ್ನು ಅನುಭವಿಸಬೇಕಾದರೂ ಮನಸ್ಸು ಶಾ೦ತಿಯಿ೦ದಿರಲೇ ಬೇಕು. ಧಾವ೦ತ ಬೇಡ. ನಿಧಾನವಾಗಿ ಕುಳಿತು ಧ್ಯಾನಿಸೋಣ.. ಆತ್ಮೋಧ್ಧಾರದಿ೦ದಲೂ ದೇಶೋಧ್ಧಾರ ಸಾಧ್ಯ! ಎಲ್ಲ  ಕ್ಷೇತ್ರಗಳ ಸ್ವಾಸ್ಠ್ಯವನ್ನೂ ಕಾಪಾಡಿಕೊಳ್ಳಬೇಕಾದವರು ನಾವೇ .. ಏಕೆ೦ದರೆ ನಮ್ಮ ಬದುಕು ನಮ್ಮದು.. ಹಾಗೆಯೇ ನಮ್ಮಿ೦ದ ದೇಶ.. ದೇಶದಿ೦ದ ಸಮಸ್ತ ಜಗತ್ತು.

No comments: