ನಾವೇನ್ ಮಾಡಬೇಕ್ರೀ ಯಜಮಾನ್ರೇ
ಈಗ ನಾವೇನ್ ಮಾಡಬೇಕ್ರೀ?
ನಮ್ಮೂರ್ನಾಗೊ೦ದೂ ಕಕ್ಕಸ್ಸಿಲ್ಲ,
ಕುಡಿಯೋ ನೀರಿನ್ ನಲ್ಲಿ ಇಲ್ಲ!
ಹೊಟ್ಟೆಗ್ ಹಿಟ್ಟಿಲ್ಲ,ಕೈಯಲ್ಲಿ ಕೆಲಸಾ ಇಲ್ಲ
ಬೋರ್ವೆಲ್ ಹಾಕ್ಸೋಕ ದುಡ್ಡು ಮೊದಲೇ ಇಲ್ಲ!
ಊರಿನ್ ತು೦ಬೆಲ್ಲಾ ಹೊಲಗೇರಿ ಇದ್ರೂ
ಒ೦ದೇ ಒ೦ದು ಬಾತ್ ರೂಮಿಲ್ಲ
ನಾವೇನ್ ಮಾಡ ಬೇಕ್ರೀ ಯಜಮಾನ್ರೇ ಈಗ?
ಅಲ್ರೀ ,ನಾವು ಆರ್ಸಿ ಕಳುಸ್ದೋರೆಲ್ಲಾ
ಹಿ೦ಗೇ ದಗಲ್ಬಾಜಿಗಳಾಗ್ತಾ ಇದ್ರೆ
ನಾವೇನ್ ಮಾಡಬೇಕ್ರೀ ಯಜಮಾನ್ರೆ ಈಗ?
ಸಾಧು ಸ೦ತ ಅ೦ಥ ಆರ್ಸಿ ಕಳುಸ್ದೊ,
ಅವನಿವತ್ತು ಗೊತ್ತೇ ಇಲ್ದವನ ಥರಾ ಇದಾನಲ್ಲ
ನಾವೇನ್ ಮಾಡಬೇಕ್ರೀ ಯಜಮಾನ್ರೆ ಈಗ?
ಊರ್ನಾಗಿರೋದೊ೦ದೇ ಅರಳಿಕಟ್ಟೆ
ಬರ್ ಬರ್ತಾ ಆಗೋಗೈತೆ ಇಸ್ಪೀಟು ಅಡ್ಡೆ.
ಕೇಮೆ ಇಲ್ದೋರೆಲ್ಲಾ ಬರೋದೆಯಾ,ಎಳಿಯದೇಯಾ
ಹೇಳ್ಕೊ೦ಡ್ ಹೇಳ್ಕೊ೦ಡ್ ಸಾಕಾಗೈತ್ರಪ್ಪಾ
ನಾವೇನ್ ಮಾಡಬೇಕ್ರೀ ಯಜಮಾನ್ರೆ ಈಗ?
ಕಾಯಿ, ಅಡಿಕೆ ಚೇಣಿಗ್ ಕೊಟ್ಟೀವ್ರೀ,
ಊರ್ ಗದ್ದೆ ,ತೋಟ ಪಾಳು ಬಿದ್ದೈತೆ,
ದನ೦ಕರೂ ಎಲ್ಲಾ ನೀರಿಲ್ದೆ ಸಾಯೋಕ್ಕಾಗವೆ
ಚೇಣಿ ದುಡ್ಡು ಬ೦ದ್ರೂ ಹೊಟ್ಟೆಗೇ ಸಾಕಾಗಕಿಲ್ಲ!
ಸ೦ಜೀ ತಾವ ರ೦ಗಾಗೋಕೆ ದುಡ್ದು ಯಾರ್ ಕೊಡ್ತಾರ್ರೀ?
ಇರೋದೊ೦ದೇ ಗುಡ್ಡ,ಅದ್ನೂ ಅಗೆದು ಹಾಕ್ಯಾರಲ್ರೀ!
ಈಗೀಗ್ ಗಾಳಿ ಕುಡಿಯೋಕೂ ಬಾಳ ತ್ರಾಸ್ ಆಗೈತ್ರೀ ಯಪ್ಪಾ
ನಾವೆಲ್ಲಿಗ್ ಗುಳೆ ಹೋಗ್ಬೇಕ್ರೀ ಯಜಮಾನ್ರೆ ಈಗ?
ನಾವೇನ್ ಮಾಡಬೇಕ್ರೀ?
1 comment:
ಸರ್, ಸಕಾಲಿಕ ಕವನ ಜೊತೆಗೆ ಪ್ರಶ್ನೆಗಳ ಸುರಿಮಳೆ. ಚೆನ್ನಾಗಿದೆ.
Post a Comment