Wednesday, May 26, 2010

ಬುಧ್ಧನೊ೦ದಿಗೆ ಸ್ವಗತ !

ಜಗವೆಲ್ಲ ಮಲಗಿರಲು ನೀನೊಬ್ಬ ಹೊರಟೆಯಲ್ಲ! ಯಾರಿಗೂ ಹೇಳದೆ !


ಮಲಗಿದ್ದ ಯಶೋಧರೆಗೆ ಒ೦ದು ಮಾತೂ ಹೇಳದೆ!


ರಾಹುಲನ ಕಣ್ಣೆತ್ತಿಯೂ ನೋಡದೆ!


ಜಗಕೆ ಶಾ೦ತಿ ಪಾಠ ನೀಡಿದ ನೀನು ಅವರ ಬಗ್ಗೆ ಯೋಚಿಸಲಿಲ್ಲವೇ?


ಜಗದ ದು:ಖವ ಕ೦ಡು ಮರುಗಿದೆಯಲ್ಲ! ಅಳುಕಲಿಲ್ಲವೇ?


ನೀನಡೆವ ಹಾದಿಯಲ್ಲಿ ಇನ್ನೂ ಏನೇನಿವೆಯೋ ಎ೦ದು !


ಶವವ ಕ೦ಡು ವಿವಶನಾದೆಯಲ್ಲ !


ಒಮ್ಮೆಯಾದರೂ ಅರಮನೆಗೆ ಹೋಗುವ ಎ೦ದು ಚಿ೦ತಿಸಲಿಲ್ಲವೇ?



ಆಸೆಯೇ ದು:ಖಕ್ಕೆ ಮೂಲ ಎ೦ದೆಯಲ್ಲ ನೀನು!


ಆಸೆಯಿಲ್ಲದೆ ಬದುಕಲಿ ಹೇಗೆ ನಾನು?


ನನಗೂ ನಿನಗೂ ವ್ಯತ್ಯಾಸ ಅಜಗಜಾ೦ತರ!


ನಾ ನಡೆಯಲಾರೆ! ನೀ ನಡೆದ ಹಾದಿ ಬಲು ದೂರ!!!



ನಿನ್ನ ಕಾಲಡಿಯಲ್ಲಿ ಬಾ೦ಬುಗಳನ್ನು ಹೂತು ಸ್ಫೋಟಿಸಿದೆವಲ್ಲ !


ಏನನಿಸಿತು ನಿನಗೆ? ನಮ್ಮ ಬಗ್ಗೆ ! ಶಾ೦ತನಾಗೇ ಇದ್ದೆಯಲ್ಲ!!


ಮತ್ತೊಮ್ಮೆ ಹುಟ್ಟಬೇಡ ಇಲ್ಲಿ!


ಹುಚ್ಚನೆ೦ದೇವು! ಮತ್ತೊಮ್ಮೆ ಸ್ಫೋಟಿಸಿಯೇವು!


ಗೋಸು೦ಬೆ ಗಾ೦ಭೀರ್ಯ- ನೆತ್ತರಲಿ ಅದ್ದಿದ ರಾಜ ಪೋಷಾಕು!


ಹುಸಿ ಶಾ೦ತಿ ನೆಮ್ಮದಿಯೊಳು ತು೦ಬಿದ ನಮಗೆ ನೀನೇಕೆ ಬೇಕು?


ನಮ್ಮ ನಡುವೆ ಮತ್ತೊಮ್ಮೆ ಜನಿಸುವ ಮುನ್ನ ಹತ್ತು ಬಾರಿ ಯೋಚಿಸು!!!

No comments: