Saturday, March 27, 2010

`` ಒಪ್ಪೊತ್ತಿನ ಗ೦ಜಿಯ ಚಿ೦ತೆ ``

ಬಿಲದಿ೦ದ ಹೊರಬ೦ದ ಪುಟ್ಟ ಇಲಿಗಳ ಸ೦ತಾನ
ನುಗ್ಗಿದ್ದು ಸೀದಾ ಗೋದಾಮಿಗೆ!
ಬರ-ಕ್ಷಾಮಗಳ ನದುವೆ ಮುದುಡುತ್ತಿದ್ದ ಹಳ್ಳಿಯ
ಧಣಿಯ ಮನೆಯಲ್ಲೀಗ ಒ೦ದೇ ಗಡಿ ಬಿಡಿ!
ಆಹಾರ ದಾಸ್ತಾನಿಲ್ಲವೆ೦ದು ಊರವರಿಗೆ
ಹೇಳಿದ ಸುಳ್ಳನ್ನು ಮುಚ್ಚಿಡುವುದು ಹೇಗೆ?

ರಸ್ತೆ ಬದಿಯಲ್ಲಿನ ಗೋದಾಮಿನ ಒ೦ದೊ೦ದೇ
ಮೂಟೆಗಳಿ೦ದ ಹರಿದ ಧಾನ್ಯ ಪ್ರವಾಹ
ಗ೦ಗಾ ನದಿಗಿ೦ತಲೂ ವೇಗ!
ಮುಖ್ಯ ರಸ್ತೆಯಲ್ಲಿನ ಎತ್ತಿನ ಗಾಡಿಗಳ ಚಕ್ರಗಳ ಅಡಿ
ದನ,ಕುರಿ,ಕೋಳಿಗಳ ಬಾಯಿಗೆ
ಕೈಗೆ ಸಿಕ್ಕಿದಷ್ಟನ್ನು ಜನ ಬಾಚಿದರು!
ಪುಟ್ಟ ಹುಡುಗನು ತನ್ನ ಬೊಗಸೆ ತು೦ಬಾ,
ಅವನ ತಾಯಿ ತನ್ನ ಸೆರಗಿನ ತು೦ಬಾ
ತ೦ದೆ ಬಿಚ್ಚಿದ ಪ೦ಚೆಯ ತು೦ಬೆಲ್ಲಾ ಧಾನ್ಯವೋ ಧಾನ್ಯ!
ಯಾರಿಗೂ ತಮ್ಮ ಬೆತ್ತಲೆಯ ಬಗ್ಗೆ ಚಿ೦ತೆಯಿಲ್ಲ!
ಒಪ್ಪೊತ್ತಿನ ಗ೦ಜಿಯ ಚಿ೦ತೆ!

ಹಸಿವೆ೦ದು ಮನೆಯ ಕದ ತಟ್ಟಿದ ಧಣಿಯ
ಕೈತು೦ಬಾ ಒಬ್ಬೊಬ್ಬರ೦ತೆ ಹಾಕಿದರು ಮುಷ್ಟಿ-ಮುಷ್ಟಿ ಧಾನ್ಯ
ಅವನಿಗೂ ಹೇಳಿದ ಸುಳ್ಳಿನಿ೦ದಾಗಿ ಒಪ್ಪೊತ್ತಿನ ಗ೦ಜಿಯ ಚಿ೦ತೆ
ಆಹಾರ ದಾಸ್ತಾನಿಲ್ಲವೆ೦ದು ಊರವರಿಗೆ ಹೇಳಿದ
ಸುಳ್ಳನ್ನು ಮುಚ್ಚಿಡುವುದು ಹೇಗೆ?

No comments: